ಸಿಎಂ ತವರು ಜಿಲ್ಲೆಯ ಸರ್ಕಾರಿ ಶಾಲೆಗಳಿಗಿಲ್ಲ ಮೂಲಭೂತ ಸೌಕರ್ಯ. ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಹುಣಸೇಗಾಲದ ಅಂಬೇಡ್ಕರ್ ಕಾಲೋನಿಯಲ್ಲಿರುವ ಸರ್ಕಾರಿ ಶಾಲೆಯ ಮಕ್ಕಳು ನೀರಿಲ್ಲದೆ ಪರದಾಡುವ ಸ್ಥಿತಿ ಬಂದಿದೆ.
ತಾಲೂಕಿನಲ್ಲಿ ಪೈಪ್ ಲೈನ್ ದುರಸ್ಥಿ ಕಾರ್ಯ ಹಿನ್ನೆಲೆ ಕಳೆದ 20 ದಿನಗಳಿಂದ ಶಾಲೆಯಲ್ಲಿ ನೀರಿಗೆ ತೊಂದರೆಯಾಗಿದೆ. ಹೀಗಾಗಿ ಶಾಲಾ ಮಕ್ಕಳು ನೀರಿಗೆ ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಶಾಲೆಗೆ ಪಾಠ ಕೇಳಲು ಬರುವ ಮಕ್ಕಳು, ಮೊದಲು ಕೊಡದಲ್ಲಿ ನೀರು ಹತ್ತು ತಂದು ನಂತರ ಪಾಠ ಕೇಳಲು ಕೂರಬೇಕಾಗಿದೆ.
ಕುಡಿಯುವ ನೀರಿಗೆ, ಕೈ ತೊಳೆಯಲು, ಶೌಚಕ್ಕೆ ಹೋಗಲು ನೀರಿಗೆ ಪರದಾಡಬೇಕಿದೆ. ಈ ಬಗ್ಗೆ ಗ್ರಾಮಪಂಚಾಯಿತಿಗೆ ಹೋಗಿ ದೂರು ನೀಡಿ, ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿದರು ಯಾವುದೇ ಪ್ರಯೋಜನವಾಗುತ್ತಿಲ್ಲ. ಪೋಷಕರು ಮಕ್ಕಳ ಕೈನಲ್ಲಿ ನೀರು ಹೊರಿಸುತ್ತಿರುವ ಕಾರಣ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಧಿಕಾರಿಗಳು ಸಮಸ್ಯೆ ಬಹೆಹರಿಸುವಲ್ಲಿ ತಾತ್ಸಾರ ತೋರುತ್ತಿದ್ದಾರೆ ಎಂದು ಶಾಲಾ ಶಿಕ್ಷಕಿ ರೂಪಶ್ರೀ ಹೇಳಿದ್ದಾರೆ.
ಹುಣಸೇಗಾಲದ ಅಂಬೇಡ್ಕರ್ ಕಾಲೋನಿಯಲ್ಲಿರುವ ಸರ್ಕಾರಿ ಶಾಲೆಯ ದುಸ್ಥಿತಿ ಇದಾಗಿದ್ದು, ಹುಣಸೇಗಾಲ ಪಿಡಿಓ ಮಂಜುಳಾ ಬೇಜವಬ್ದಾರಿತನಕ್ಕೆ ಮಕ್ಕಳು, ಶಿಕ್ಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.