ಪ್ರತಿನಿಧಿ ವರದಿ ತಿ.ನರಸೀಪುರ
ಹೆಣ್ಣು ಆರೋಗ್ಯವಾಗಿದ್ದರೆ ಇಡೀ ಸಂಸಾರ ಆರೋಗ್ಯವಾಗಿರುತ್ತದೆ. ಹೆಣ್ಣು ತನ್ನ ಆರೋಗ್ಯದ ಬಗ್ಗೆ ಹೆಚ್ಚು ಗಮನಹರಿಸಬೇಕು ಎಂದು ಹಿರಿಯ ಸಿವಿಲ್ ಮತ್ತು ಜೆಎಂಎಫ್ ಸಿ ನ್ಯಾಯಾಧೀಶ ಜಿ.ಎಚ್. ಹನುಮಂತ ಹೇಳಿದರು.
ಪಟ್ಟಣದ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ತಾಲೂಕು ವಕೀಲರ ಸಂಘ, ತಾಲೂಕು ಆಡಳಿತ, ತಾಲೂಕು ಪಂಚಾಯಿತಿ , ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಇಲಾಖೆ ಮತ್ತು ಅರಣ್ಯ ಇಲಾಖೆಯ ಸಂಯುಕ್ತಾಶ್ರಯ ನಡೆದ ರಾಷ್ಟ್ರೀಯ ಪೋಷಣ್ ಅಭಿಯಾನ ಸಪ್ತಾಹ ದಿನ ಆಚರಣೆ ಕಾರ್ಯಕ್ರಮದಲ್ಲಿ ಅವರು ಗಿಡಕ್ಕೆ ನೀರೇರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಹೆಣ್ಣು ಜೀವನದ ಕಣ್ಣು ಎಂಬಂತೆ ಇಡೀ ಸಂಸಾರದ ಆರೋಗ್ಯ ಹೆಣ್ಣಿನ ಮೇಲೆ ಅವಲಂಬಿಸಿರುತ್ತದೆ. ಕುಟುಂಬ ಆರೋಗ್ಯವಂತರಾಗಿರಬೇಕು ಎಂದರೆ ಹೆಣ್ಣು ಆರೋಗ್ಯವಾಗಿರಬೇಕು.ಎಲ್ಲ ವಯೋಮಾನದ ಮಹಿಳೆಯರು ಆರೋಗ್ಯದ ಕಡೆ ಹೆಚ್ಚು ಗಮನ ಹರಿಸಬೇಕು ಎಂದರು.
ಗರ್ಭೀಣಿ ಮಹಿಳೆಯರು ತನ್ನ ಮಕ್ಕಳ ಪೋಷಣೆಯಲ್ಲಿ ಹೆಚ್ಚು ಜಾಗ್ರತೆವಹಿಸುತ್ತಾರೆ. ಅವರ ವಹಿಸುವ ಜಾಗ್ರತೆಯೇ ಮಕ್ಕಳ ಅವರ ಆರೋಗ್ಯವನ್ನು ಕಾಪಾಡುತ್ತದೆ. ಪ್ರಸ್ತುತ ಕಾಲಘಟ್ಟದಲ್ಲಿ ಮುಳೆಯರಲ್ಲಿ ಹೆಚ್ಚು ಅನಾರೋಗ್ಯ ಕಾಡುತ್ತದೆ. ಇಂದಿನ ಮಹಿಳೆಯರು ಪೌಷ್ಠಿಕ ಆಹಾರ ಮತ್ತು ಒತ್ತಡದ ಜೀವನದಿಂದ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ತಾಲೂಕು ವಕೀಲ ಸಂಘದ ಅಧ್ಯಕ್ಷ ತೊಟ್ಟವಾಡಿ ಮಹದೇವಸ್ವಾಮಿ ಮಾತನಾಡಿ, ಅನಾದಿ ಕಾಲದಿಂದಲೂ ಹೆಣ್ಣನ್ನು ಅಡುಗೆ ಮನೆಗೆ ಸೀಮಿತಗೊಳಿಸಲಾಗಿತ್ತು. ಆಧುನಿಕ ಜಗತ್ತಿನಲ್ಲಿ ಹೆಣ್ಣು ಗಂಡಿಗೆ ಸರಿಸಮಾನವಾಗಿ ಬೆಳೆದು ಎಲ್ಲ ರಂಗದಲ್ಲೂ ತನ್ನ ಛಾಪು ಮೂಡಿಸಿದ್ದಾಳೆ. ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನಹರಿಸಬೇಕು. ಅವಶ್ಯವಿರುವ ಪೌಷ್ಠಿಕಕಾಂಶಯುಕ್ತ ಆಹಾರವನ್ನು ಸೇವಿಸಬೇಕು ಎಂದು ಸಲಹೆ ನೀಡಿದರು.
ಸಂದರ್ಭ ತಾ.ಪಂ. ಇಒ ಪಿ.ಎಸ್.ಅನಂತರಾಜ್, ಹೆಚ್ಚುವರಿ ನ್ಯಾಯಾಧೀಶ ವೆಂಕಟೇಶ್, ಶಿಶು ಅಭಿವೃದ್ಧಿ ಯೋಜನೆ ಅಧಿಕಾರಿ ಗೋವಿಂದರಾಜು, ಸಂಘ, ಸಂರಕ್ಷಣಾಧಿಕಾರಿ ಶಾರದ ,ನಂದಿನಿ ಸೇರಿದಂತೆ ಮತ್ತಿತರರು ಇದ್ದರು.