ಪ್ರತಿನಿಧಿ ವರದಿ ಗೂಳಿಪುರ
ಯಳಂದೂರು ಪಟ್ಟಣ ಪಂಚಾಯಲ್ಲಿ ವಿವಿಧ ಕಾರಣಗಳಿಂದ ತೆರವಾಗಿದ್ದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆ ನಡೆಯಿತು.
ಪಪಂ 11 ಸದಸ್ಯರಲ್ಲಿ ಒಬ್ಬರು ನಿಧನ ಹೊಂದಿದ್ದು, ಹತ್ತು ಜನ ಸದಸ್ಯರನ್ನು ಒಳಗೊಂಡಿದೆ. ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದು, ಉಪಾಧ್ಯಕ್ಷ ಸ್ಥಾನ ಬಿಸಿಎಂ ಮಹಿಳೆಗೆ ಮೀಸಲಾಗಿದೆ. ಚುನಾವಣಾ ಆಯೋಗ ಮತ್ತು ಹೈಕೋರ್ಟ್ ನಿರ್ದೇಶನದಂತೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ಮಾಡಲು ಸೆ.4ರಂದು ಚುನಾವಣೆ ನಡೆಸಲು ಜಿಲ್ಲಾಧಿಕಾರಿಗಳು ಆದೇಶ ನೀಡಿದ ಹಿನ್ನೆಲೆ ಬುಧವಾರ ಬೆಳಗ್ಗೆ ಪಪಂ ಸಭಾಂಗಣದಲ್ಲಿ ಚುನಾವಣಾ ಅಧಿಕಾರಿ ತಹಸೀಲ್ದಾರ್ ಜಯಪ್ರಕಾಶ್ ಅವರು ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸುವಂತೆ ಅಭ್ಯರ್ಥಿಗಳಿಗೆ ಸೂಚನೆ ನೀಡಿದ್ದರು.
ಅಧ್ಯಕ್ಷ ಸ್ಥಾನಕ್ಕೆ 10ನೇ ವಾರ್ಡಿನ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ 11ನೇ ವಾರ್ಡಿನ ಕಾಂಗ್ರೆಸ್ ಅಭ್ಯರ್ಥಿ ಶಾಂತಮ್ಮ ನಾಮಪತ್ರ ಸಲ್ಲಿಸಿದ್ದು, ಚುನಾವಣೆ ಅಧಿಕಾರಿಗಳು ನಾಮಪತ್ರಗಳನ್ನು ಪರಿಶೀಲನೆ ನಡೆಸಿ ಕ್ರಮಬದ್ಧವಾಗಿರುವುದನ್ನು ದೃಢೀಕರಿಸಿದ ಬಳಿಕ ಅಧ್ಯಕ್ಷರಾಗಿ ಲಕ್ಷ್ಮಿ.ಎಸ್, ಉಪಾಧ್ಯಕ್ಷರಾಗಿ ಶಾಂತಮ್ಮ ರವರನ್ನು ಅವಿರೋಧವಾಗಿ ಆಯ್ಕೆ ಮಾಡಿದರು.
ಪಪಂ ಮುಖ್ಯಧಿಕಾರಿ ಮಹೇಶ್ ಕುಮಾರ್, ಬ್ಲಾಕ್ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಪಿ.ಮರಿಸ್ವಾಮಿ, ಗ್ಯಾರೆಂಟಿ ಯೋಜನೆ ಅನುಷ್ಠಾನದ ಜಿಲ್ಲಾಧ್ಯಕ್ಷ ಹೊಂಗನೂರು ಚಂದ್ರು, ವಡಗೆರೆ ದಾಸ್,ಜೆ.ಯೋಗೇಶ್, ಗಣಿಗನೂರು ವಿಶ್ವ, ಮದ್ದೂರು ಶಿವು, ಪಪಂ ಸದಸ್ಯ ಮಹೇಶ್, ರಂಗನಾಥ್, ರವಿ, ಮಹದೇವ ನಾಯಕ, ಮಂಜು, ಸವಿತಾ, ಪ್ರಭಾವತಿ, ಸುಶೀಲ ಸೇರಿದಂತೆ ಮುಖಂಡರು ಹಾಗೂ ಕಾರ್ಯಕರ್ತರು ಇದ್ದರು.