ಹೆಮ್ಮರಗಾಲದಲ್ಲಿ ಕಾರ್ಯಕ್ರಮ
ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಲಿ । ಶಾಸಕ ದರ್ಶನ್ ಅಭಿಪ್ರಾಯ
ಪ್ರತಿನಿಧಿ ವರದಿ ನಂಜನಗೂಡು
ಪ್ರತಿನಿಧಿ ತರಗತಿಗಳು ಆರಂಭವಾಗುವ ಮೊದಲು ಶಾಲಾ ಮಕ್ಕಳಲ್ಲಿ ದಿನಪತ್ರಿಕೆಯನ್ನು ಓದಿಸುವ ಅಭ್ಯಾಸವನ್ನು ರೂಢಿಸಿಕೊಳ್ಳಿ ಮತ್ತು ಮಕ್ಕಳಿಗೆ ತಿಂಗಳಿಗೆ ಒಮ್ಮೆಯಾದರೂ ವಿವಿಧ ವಿಷಯಗಳ ಬಗ್ಗೆ ಚರ್ಚಾ ಸ್ಪರ್ಧೆ ಪ್ರಬಂಧ ಸ್ಪರ್ಧೆಯನ್ನು ನಡೆಸಬೇಕು ಎಂದು ಶಿಕ್ಷಕರಿಗೆ ಶಾಸಕ ದರ್ಶನ್ ಧ್ರುವನಾರಾಯಣ ಕಿವಿಮಾತು ಹೇಳಿದರು.
ತಾಲೂಕಿನ ಹೆಮ್ಮರಗಾಲ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಕರ್ನಾಟಕ ಪಬ್ಲಿಕ್ ಶಾಲೆಯ ಕಟ್ಟಡಗಳನ್ನು ಶಾಸಕ ದರ್ಶನ್ ಧ್ರುವನಾರಾಯಣ ಅವರು ಉದ್ಘಾಟಿಸಿ ಮಾತನಾಡಿದರು.
ಬಳಿಕ ಮಾತನಾಡಿ, ಸುಮಾರು ಎರಡು ಕೋಟಿ ರೂ.ವೆಚ್ಚದಲ್ಲಿ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಶಾಲೆಯಲ್ಲಿ ಹಲವು ಸಮಸ್ಯೆಗಳ ಬಗ್ಗೆ ತಿಳಿಸಿದ್ದು, ಶೀಘ್ರದಲ್ಲಿ ಶಾಲೆಗೆ ಸಿಎಸ್ಆರ್ ಫಂಡ್ ಅಥವಾ ಶಾಸಕರ ನಿಧಿಯಿಂದ ಒಂದು ಶುದ್ಧ ಕುಡಿಯುವ ನೀರಿನ ಘಟಕ ಸೈಕಲ್ ಸ್ಟಾಂಡ್, ಪ್ರವೇಶ ದ್ವಾರ, ಊಟ್ಟದ ಕೊಠಡಿ, ಡೆಸ್ಕಗಳು, ಶೌಚಾಲಯಗಳನ್ನು ನಿರ್ಮಿಸಿ ಕೊಡುತ್ತೇವೆ. ಮಕ್ಕಳ ಅನುಕೂಲಕ್ಕಾಗಿ ನಾಳೆಯಿಂದಲೇ ಬಸ್ ವ್ಯವಸ್ಥೆ ಕಲ್ಪಿಸಲಾಗುವುದು. ಮೆಟ್ರಿಕ್ ನಂತರದ ಹಾಸ್ಟೆಲ್ ನಿರ್ಮಾಣದ ಬಗ್ಗೆ ಕ್ರಮವಹಿಸುವ ಭರವಸೆ ನೀಡಿದರು.
ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕ ಮರಿಸ್ವಾಮಿ ಮಾತನಾಡಿ, ಈ ಶಾಲೆಯಲ್ಲಿ ೭೦೦ ಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಕೆಲವು ಮೂಲ ಸೌಕರ್ಯವನ್ನು ಒದಗಿಸಬೇಕಾಗಿ ಮನವಿ ಮಾಡಿದರು. ಅಲ್ಲದೆ ಧ್ರುವನಾರಾಯಣ ಟ್ರಸ್ಟ್ ವತಿಯಿಂದ ಪಿಯುಸಿಯ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರಿಗೆ ಉಚಿತವಾಗಿ ಸಿಇಟಿ ಮತ್ತು ನೀಟ್ ಪರೀಕ್ಷೆಯ ಉಚಿತ ತರಗತಿಗಳನ್ನು ನಡೆಸಬೇಕಾಗಿ ಪ್ರಾರ್ಥನೆ ಮಾಡಿಕೊಂಡರು.
ತಂದೆಯವರ ಹೆಸರಿನಲ್ಲಿ ಸ್ಥಾಪಿಸಲಾಗಿರುವ ಟ್ರಸ್ಟ್ ವತಿಯಿಂದ ನಂಜನಗೂಡಿನಲ್ಲಿ ಬಾಲಕಿಯರ ಸರ್ಕಾರಿ ಶಾಲೆಯಲ್ಲಿ ಸಿಇಟಿ ಮತ್ತು ನೀಟ್ ಪರೀಕ್ಷೆಗಳಿಗೆ ಉಚಿತ ತರಗತಿಗಳನ್ನು ನಡೆಸಲಾಗುತ್ತಿದೆ. ಅದೇ ಮಾದರಿಯಲ್ಲಿ ಮುಂದಿನ ದಿನಗಳಲ್ಲಿ ಹೆಮ್ಮರಗಾಲದಲ್ಲಿ ಉಚಿತ ತರಗತಿಗಳನ್ನು ನಡೆಸಲಾಗುತ್ತದೆ ಎಂದರು.
ಸರ್ಕಾರದ ಕೇಂದ್ರೀಯ ವಿದ್ಯಾಲಯ ಮಾದರಿಯಲ್ಲಿಯೇ ರಾಜ್ಯದ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ದೊರೆಯಲೆಂದು ರಾಜ್ಯ ಸರ್ಕಾರವು ಕೆಪಿಎಸ್ಸಿ ಶಾಲೆಯನ್ನು ತೆರೆಯಿತು. ಶಾಲೆಯ ಅಭಿವೃದ್ಧಿ ಮತ್ತು ಮೂಲ ಸೌಕರ್ಯಗಳ ಬಗ್ಗೆ ಪ್ರಾಂಶುಪಾಲರು ಈಗಾಗಲೇ ಮನವಿ ಪತ್ರವನ್ನು ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಶಾಲೆಯ ಅಭಿವೃದ್ಧಿ ಮತ್ತು ಮೂಲ ಸೌಕರ್ಯಗಳನ್ನು ಒದಗಿಸುತ್ತೇನೆ ಎಂದು ಭರವಸೆ ನೀಡಿದರು.
ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಕುರಹಟ್ಟಿ ಮಹೇಶ್, ದೊರೆಸ್ವಾಮಿ ನಾಯ್ಕ, ಲತಾ ಸಿದ್ದಶೆಟ್ಟಿ, ಗಿರೀಶ್, ಶಿವಪ್ಪ ದೇವರು, ಬಿ ಒ ಮಹೇಶ್, ಗ್ರಾಪಂ ಅಧ್ಯಕ್ಷ ಭಾಗ್ಯ ಉಮೇಶ್, ಉಪಾಧ್ಯಕ್ಷರು ಜಯಮ್ಮ ಲಿಂಗಸಟ್ಟಿ, ಪದವಿಪೂರ್ವ ಶಿಕ್ಷಣ ಉಪ ನಿರ್ದೇಶಕರು ಮರಿಸ್ವಾಮಿ, ಜಾರ್ಜ್ ಫ್ರಾನ್ಸಿಸ್ , ಉಷಾರಾಣಿ, ಬಾಲಚಂದ್ರ , ಪ್ರಕಾಶ್, ಮಹದೇವ ಪ್ರಸಾದ್ ಸೇರಿದಂತೆ ಶಾಲಾ ಶಿಕ್ಷಕರು, ಹೆಮ್ಮರಗಾಲ ಗ್ರಾಮದ ಮುಖಂಡರು ಹಾಜರಿದ್ದರು.