ಹಿಜಾಬ್ ಧರಿಸಿ ಶಾಲೆಗೆ ಬರಬೇಡಿ ಎಂದ ಶಿಕ್ಷಕರಿಗೆ ಪ್ರಶಸ್ತಿ ತಡೆಹಿಡಿದಿರುವ ರಾಜ್ಯ ಸರ್ಕಾರದ ನಡೆಗೆ ಸಂಸದ ಯದುವೀರ್ ಒಡೆಯರ್ ಮತ್ತು ಶಾಸಕ ಶ್ರೀ ವತ್ಸ ಕಿಡಿಕಾರಿದ್ದಾರೆ.
ಉಡುಪಿಯಲ್ಲಿ ಶಿಕ್ಷಕರೋರ್ವರಿಗೆ ಪ್ರಶಸ್ತಿ ಪ್ರಕಟಿಸಿದ ಬಳಿಕ ತಡೆ ಹಿಡಿದಿರುವ ವಿಚಾರವಾಗಿ ಮಾತನಾಡಿದ ಅವರು, ಶಿಕ್ಷಕರು ಎಲ್ಲಾ ವಿದ್ಯಾರ್ಥಿಗಳನ್ನು ಸಮಾನತೆಯ ದೃಷ್ಟಿಯಿಂದ ಕಾಣುತ್ತಾರೆ. ಹಾಗಾಗಿ ಎಲ್ಲರೂ ಸಮವಸ್ತ್ರ ಧರಿಸಿಕೊಂಡು ಬನ್ನಿ ಎಂದು ಹೇಳಿದ್ದಾರೆ. ಆದರೆ ಇದನ್ನೇ ಮುಂದಿಟ್ಟುಕೊಂಡು ಪ್ರಕಟಿಸಿದ್ದ ಪ್ರಶಸ್ತಿಯನ್ನು ತಡೆ ಹಿಡಿದಿರುವುದು ಸರಿಯಲ್ಲ. ನಮ್ಮನ್ನು ಕೋಮುವಾದಿ ಎನ್ನುತ್ತಾರೆ ಆದರೆ ಹಿಜಾಬ್ ಧರಿಸಿಕೊಂಡು ಶಾಲೆಗೆ ಬರಬೇಡಿ ಎಂದು ಹೇಳಿದ್ದ ಶಿಕ್ಷಕರಿಗೆ ಪ್ರಶಸ್ತಿ ತಡೆ ಹಿಡಿದಿದ್ದಾರೆ. ಈ ಮೂಲಕ ನಿಜವಾದ ಕೋಮುವಾದಿ ಯಾರು ಎಂದು ಸರ್ಕಾರ ತೋರಿಸಿದೆ ಎಂದು ಕಿಡಿಕಾರಿದ್ದಾರೆ.
ಈ ಕೂಡಲೇ ಪ್ರಶಸ್ತಿ ತಡೆದಿರುವುದನ್ನು ರದ್ದು ಮಾಡಿ, ಆ ಶಿಕ್ಷಕರಿಗೆ ಪ್ರಶಸ್ತಿ ಕೊಡಬೇಕು, ಇಲ್ಲದಿದ್ದರೆ ನಾವು ಹೋರಾಟ ಮಾಡಬೇಕಾಗುತ್ತದೆ ಎಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.