ಪ್ರತಿನಿಧಿ ವರದಿ ಹಾಸನ ಜಿಲ್ಲೆಯಲ್ಲಿ ಕಳ್ಳತನ ಪ್ರಕರಣ ಹೆಚ್ಚುತ್ತಿದ್ದು, ಒಂದೇ ದಿನ ಎಂಟು ಮನೆಗಳಲ್ಲಿ ಸರಣಿ ಕಳ್ಳತನ ನಡೆದಿದೆ. ಈ ವೇಳೆ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಹಾಗೂ ನಗದು ದೋಚಲಾಗಿದೆ. ಜಿಲ್ಲೆಯ ಅರಸೀಕೆರೆ ತಾಲೂಕಿನ ದುಮ್ಮೇನಹಳ್ಳಿ ಗ್ರಾಮದಲ್ಲಿ ಸರಣಿ ಕಳವು ಕೃತ್ಯ ನಡೆದಿದ್ದು, ಐನೂರು ರೂ.ಗೆ ಹೊಸ ಮಿಕ್ಸಿ ಮಾರಾಟ ನೆಪದಲ್ಲಿ ಗ್ರಾಮಕ್ಕೆ ಬಂದ ಮೂವರು ಚೋರರು, ಗ್ರಾಮದಲ್ಲೆಲ್ಲ ಮಿಕ್ಸಿ ಮಾರಾಟ ಮಾಡುವ ನೆಪದಲ್ಲಿ ತಿರುಗಾಡಿ ಬೀಗ ಹಾಕಿರುವ ಮನೆಗಳನ್ನು ಗಮನಿಸಿದ್ದಾರೆ. ರಾತ್ರಿ ವೇಳೆ ಮತ್ತೆ ಗ್ರಾಮಕ್ಕೆ ಎಂಟ್ರಿ ಕೊಟ್ಟಿರುವ ಮೂವರು, 8 ಮನೆಗಳಲ್ಲಿ ಕಳ್ಳತನ ಮಾಡಿ ನಗದು, ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. 1 ವಾರದ ಹಿಂದೆ ಇದೇ ತಾಲೂಕಿನ ರಂಗನಾಯಕಕೊಪ್ಪಲು ಗ್ರಾಮದಲ್ಲಿ ಹಾಡುಹಗಲೇ ಮನೆ ದರೋಡೆ ಮಾಡಿದ್ದರು. ಮನೆ ದರೋಡೆ ಮಾಡಿ ಮೂವರು ಚೋರರು ಪರಾರಿ ಆಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಇದೇ ಶಂಕಿತ ಕಳ್ಳರು ನಿನ್ನೆ ರಾತ್ರಿ ದುಮ್ಮೇನಹಳ್ಳಿ ಗ್ರಾಮದಲ್ಲಿ ಎಂಟು ಮನೆಗಳನ್ನು ದೋಚಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೂರು ಕಳವು ಪ್ರಕರಣ ದಾಖಲಾಗಿದೆ. ಅರಸೀಕೆರೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Leave a comment