ಪ್ರತಿನಿಧಿ ವರದಿ ಸಕಲೇಶಪುರ
ಗೌರಿಹಬ್ಬದಂದು ಎತ್ತಿನಹೊಳೆ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ ಎಂದು ಜಿಲ್ಲಾ ಉಸ್ತುವರಿ ಸಚಿವ ಕೆ.ಎನ್ ರಾಜಣ್ಣ ಹೇಳಿದರು.
ತಾಲೂಕಿನ ಹಬ್ಬನಹಳ್ಳಿ ಗ್ರಾಮಕ್ಕೆ ಬುಧವಾರ ಭೇಟಿ ನೀಡಿ ಪೂರ್ವಭಾವಿ ಸಿದ್ಧತೆ ಪರಿಶೀಲನೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಶ್ಚಿಭಿಮುಖವಾಗಿ ಹರಿಯುತ್ತಿದ್ದ ನೀರನ್ನು ಪೂರ್ವಭಿಮುಖವಾಗಿ ಹರಿಸುವ ಮೂಲಕ ರಾಜ್ಯದ ಏಳು ಬರಪೀಡಿತ ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸುವ ವಿನೂತನ ಯೋಜನೆ ಇದಾಗಿದೆ ಎಂದರು.
ತೀವ್ರ ಅಪಸ್ವರದ ನಡುವೆ ಎತ್ತಿನಹೊಳೆ ಯೋಜನೆ ಎಂಟು ಸಾವಿರ ಕೋಟಿ ವೆಚ್ಚದಲ್ಲಿ 2014ರಲ್ಲಿ ಕೈಗೆತ್ತಿಕೊಳ್ಳಲಾಗಿತ್ತು. ಸದ್ಯ ಪರಿಷ್ಕೃತ ದರ 23 ಸಾವಿರ ಕೋಟಿ ರೂ.ಗೆ ತಲುಪಿದೆ. ಯೋಜನೆಯ ಕಾಮಗಾರಿ ಆರಂಭವಾಗಿ 10 ವರ್ಷಗಳಲ್ಲಿ ಮೊದಲ ಹಂತದ ಕಾಮಗಾರಿ ಮುಕ್ತಾಯಗೊಂಡಿದ್ದು, ಈಗಾಗಲೇ ಪರೀಕ್ಷಾರ್ಥವಾಗಿ 1.500 ಕ್ಯೂಸೆಕ್ ನೀರನ್ನು ಹರಿಸಲಾಗಿದೆ. ಎರಡನೇ ಹಂತದ ಕಾಮಗಾರಿಗೆ ಕೆಲವು ತಾಂತ್ರಿಕ ಅಡಚಣೆಗಳಿದ್ದು, ಇವುಗಳನ್ನು ಬಗೆಹರಿಸುವ ಮೂಲಕ 2027ಕ್ಕೆ ಸಂಪೂರ್ಣ ಯೋಜನೆಯನ್ನು ಮುಕ್ತಾಯಗೊಳಿಸಲಾಗುವುದು. ಯೋಜನೆ ಉದ್ಘಾಟನೆ ಹಿನ್ನೆಲೆಯಲ್ಲಿ ಗುರುವಾರ ತಾಲೂಕಿಗೆ ಆಗಮಿಸಲಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೋಮ, ಹವನ ನೆರವೇರಿಸಲಿದ್ದು, ಶುಕ್ರವಾರ ಮುಖ್ಯಮಂತ್ರಿ ಯೋಜನೆಗೆ ಚಾಲನೆ ನೀಡಲಿದ್ದಾರೆ. ಉದ್ಘಾಟನಾ ಕಾರ್ಯಕ್ರಮಕ್ಕೆ ಎತ್ತಿನಹೊಳೆ ಯೋಜನೆಯ ಫಲಾನುಭವಿ ಏಳು ಜಿಲ್ಲೆಯ ಜನಪ್ರತಿನಿಧಿಗಳನ್ನು ಆಹ್ವಾನಿಸಲಾಗಿದೆ ಎಂದು ತಿಳಿಸಿದರು.
ವಿಶ್ವೇಶ್ವರಯ್ಯ ಜಲನಿಗಮದ ವ್ಯವಸ್ಥಾಪಕ ನಿರ್ದೇಶಕ ಸಣ್ಣಚಿತ್ತಯ್ಯ ಮಾತನಾಡಿ, ತಾಲೂಕಿನಲ್ಲಿ ನಿರ್ಮಾಣಗೊಂಡಿರುವ 8 ವಿಯರ್ಗಳ ಪೈಕಿ 7 ವಿಯರ್ಗಳಿಂದ ಶುಕ್ರವಾರ ನೀರು ಹರಿಸಲಾಗುವುದು. ಬಾಕಿ ಉಳಿದಿರುವ ಒಂದು ವಿಯರ್ ಇನ್ನೊಂದು ತಿಂಗಳಿನಲ್ಲಿ ಕಾರ್ಯಾರಂಭ ಮಾಡಲಿದೆ. ಎತ್ತಿನಹೊಳೆ ನೀರು ತಲುಪುವ ಕೊನೆಯ ತಾಲೂಕಾದ ದೊಡ್ಡಬಳ್ಳಾಪುರ ಎತ್ತಿನಹೊಳೆ ಮುಖ್ಯ ಕೇಂದ್ರದಿಂದ 261 ಕಿಮೀ ದೂರದಲ್ಲಿದ್ದು, ಈಗಾಗಲೇ 162 ಕಿಮೀ ಕಾಲುವೆ ಕಾಮಗಾರಿ ಮುಕ್ತಾಯಗೊಂಡಿದ್ದರೆ 25 ಕಿಮೀ ಕಾಮಗಾರಿ ಪ್ರಗತಿ ಹಂತದಲ್ಲಿದೆ. ಇನ್ನೂ 50 ಕಿ.ಮೀ.ಗಳಲ್ಲಿ 19.4 ಕಿಮೀ ಅರಣ್ಯವ್ಯಾಪ್ತಿಗೆ ಸೇರುತ್ತಿದೆ. ಈ ಅರಣ್ಯಪ್ರದೇಶದಲ್ಲಿ ಹಾದುಹೋಗುವ ಕಾಲುವೆ ಕಾಮಗಾರಿ ಅವಕಾಶ ನೀಡುವಂತೆ ಈಗಾಗಲೇ ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿದ್ದು, ಕುಡಿಯುವ ನೀರಿನ ಯೋಜನೆಯಾಗಿರುವುದರಿಂದ ಕಾಮಗಾರಿಗೆ ಅವಕಾಶ ನೀಡಲೇ ಬೇಕಿದೆ. ಸದ್ಯ ಎತ್ತಿನಹೊಳೆಯಿಂದ ಹರಿಯುವ ನೀರು ಯೋಜನೆ ಮುಖ್ಯ ಕೇಂದ್ರದಿಂದ 32 ಕಿಮೀ ಸಾಗಿ ಹಳೇಬೀಡಿನ ದ್ವಾರಸಮುದ್ರಕೆರೆ, ಬೆಳವಾಡಿ ಕೆರೆ ತುಂಬಿಸುವ ಮೂಲಕ ವೇದಾ ವ್ಯಾಲಿ ಮೂಲಕ 132 ದೂರದಲ್ಲಿರುವ ವಾಣಿವಿಲಾಸ ಸಾಗರಕ್ಕೆ ಹರಿಯಲಿದೆ. ಶುಕ್ರವಾರ ಚಾಲನೆ ನೀಡಿದ ನಂತರ 60 ದಿನಗಳ ನಿರಂತರವಾಗಿ ನೀರು ಮೇಲೆತ್ತಲಾಗುತ್ತಿದ್ದು, ಇದರಿಂದ ವಿವಿಸಾಗರ್ಗೆ ಎತ್ತಿನಹೊಳೆಯಿಂದ ಐದು ಟಿಎಂಸಿ ನೀರು ಹರಿಯಲಿದೆ ಎಂದರು.
24 ಟಿಎಂಸಿ ನೀರೆತ್ತುವ ಈ ಯೋಜನೆಯಲ್ಲಿ 14 ಟಿಎಂಸಿ ನೀರನ್ನು ಕುಡಿಯುವ ನೀರಿನ ಉದ್ದೇಶಕ್ಕೆ ಬಳಸಿಕೊಳ್ಳಲಾಗುತ್ತಿದ್ದರೆ ಇನ್ನುಳಿದ 10 ಟಿಎಂಸಿ ನೀರನ್ನು ಯೋಜನೆಯ ವ್ಯಾಪ್ತಿಯ 527 ಕೆರೆಗಳಿಗೆ ಶೇ.50ರಷ್ಟು ತುಂಬಿಸುವ ಗುರಿಹೊಂದಲಾಗಿದೆ. ಈ ಬಾರಿ ಉತ್ತಮ ಮಳೆಯಾಗಿರುವುದರಿಂದ ಯೋಜನೆ ವ್ಯಾಪ್ತಿಯಲ್ಲಿ 25.11 ಟಿಎಂಸಿ ನೀರು ಲಭ್ಯವಿದೆ. ಒಟ್ಟಾರೆ ಯೋಜನೆಯಿಂದ ಪ್ರತಿವರ್ಷ ಜೂ.1ರಿಂದ ಅ.31ರ ವರಗೆ 139 ದಿನಗಳ ಕಾಲ ನೀರು ಹರಿಸಲಾಗುವುದು ಎಂದರು.
ತಾಲೂಕಿನ 8 ವಿಯರ್ಗಳ ಪೈಕಿ ಒಂದನೇ ವಿಯರ್ 6.6 ಟಿಎಂಸಿ ಹಾಗೂ 7ನೇ ವಿಯರ್ 7.76 ಟಿಎಂಸಿ ನೀರು ಲಭ್ಯವಾಗುತ್ತಿದ್ದು, ಯೋಜನೆ ಶೇ.65ರಷ್ಟು ನೀರು ಈ ಎರಡು ವಿಯರ್ಗಳಿಂದಲೇ ದೊರೆಯುತ್ತಿದೆ. ಪ್ರತಿವರ್ಷ ಕನಿಷ್ಠ 14 ಟಿಎಂಸಿ ನೀರು ಲಭ್ಯವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದರು.
ಈ ವೇಳೆ ಸಂಸದ ಶ್ರೇಯಸ್ ಪಟೇಲ್, ಗೃಹಮಂಡಳಿ ಅಧ್ಯಕ್ಷ ಶಿವಲಿಂಗೇಗೌಡ, ಜಿಲ್ಲಾಧಿಕಾರಿ ಸತ್ಯಭಾಮ, ಜಿಪಂ ಸಿಇಒ ಪೂರ್ಣಿಮ, ಉಪವಿಭಾಗಾಧಿಕಾರಿ ಶೃತಿ, ತಹಸೀಲ್ದಾರ್ ಮೇಘನಾ ಉಪಸ್ಥಿತರಿದ್ದರು.
4 ಎಸ್ಕೆಪಿಪಿ 1 ಕಾರ್ಯಕ್ರಮದ ವಿವರವನ್ನು ಸುದ್ದಿಗೋಷ್ಟಿಯಲ್ಲಿ ತಿಳಿಸಿದ ಜಿಲ್ಲಾ ಉಸ್ತುವರಿ ಸಚಿವ ಕೆ.ಎನ್ ರಾಜಣ್ಣ .