ಪ್ರತಿನಿಧಿ ವರದಿ ಕಿಕ್ಕೇರಿ
ಎಲ್ಲೆಡೆ ವರ್ಣರಂಜಿತ ಬಣ್ಣಬಣ್ಣದ ಗಣಪ ಮಾರಾಟ ಮಾಡುವ ಭರಾಟೆ ಜೋರು ಇರುವಾಗ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ನೈಸರ್ಗಿಕ ವರ್ಣದ ಪರಿಸರ ಗಣಪನನ್ನು ಪ್ರತಿಷ್ಠಾಪಿಸುವಂತೆ ಇಲ್ಲೊಬ್ಬರು ಸ್ವತಃ ಗಣಪತಿಗಳನ್ನು ಖರೀದಿಸಿ ಮಾರುತ್ತಿದ್ದಾರೆ.
ಯುವಕ ಪವನ್ ಪರಿಸರ ಪ್ರೇಮಿಯಾಗಿ ಈಗ ಎಲ್ಲರ ಮನೆ ಮಾತಾಗಿದ್ದಾನೆ. ನಮ್ಮ ನಾಡು ಪಂಚಭೂತಗಳ ಮಲಿನದಿಂದ ಹಾಳಾಗುತ್ತಿದೆ. ಭೂಮಿಗೆ ವಿಷಕಾರಕ ರಾಸಾಯನಿಕ ವಸ್ತು ಸೇರ್ಪಡೆಯಾಗಿ ನೂರಾರು ರೋಗ ಕಾಡುತ್ತಿವೆ. ಗಣಪತಿಗೆ ಬಳಸುವ ಹಾನಿಕಾರಕ ರಾಸಾಯನಿಕ ಬಣ್ಣಗಳಿಂದ ಕೆರೆಕಟ್ಟೆಗಳು ಮಲಿನವಾಗಿ ಜಲಚರಗಳು ಸಾಯುತ್ತಿವೆ. ಅಂರ್ತಜಲ ಮಲಿನವಾಗುತ್ತಿದೆ. ದನಕರುಗಳು ನೀರು ಕುಡಿದು ನಾವು ಕುಡಿಯುವ ಹಾಲಿನಲ್ಲಿ ವಿಷ ಸೇರುತ್ತಿದೆ. ಇದೆಲ್ಲವನ್ನು ಮನಗಂಡು ಪರಿಸರಕ್ಕೆ ಪೂರಕವಾಗಿರುವ ನೈಸರ್ಗಿಕ ವರ್ಣದ ಮಣ್ಣಿನ ಗಣಪತಿಯನ್ನು ಕಾಳಜಿಯಿಂದ ಆಲಗೂಡು ವಿಕಲಚೇತನ ಕಲಾವಿದ ಕುಮಾರ್ ಅವರಿಂದ ತರಲಾಗಿದೆ ಎಂದು ಪವನ್ ತಿಳಿಸಿದ್ದಾರೆ.
ಲಾಭ-ನಷ್ಟಕ್ಕಿಂತ ಪರಿಸರ ಉಳಿವಿಗೆ ಜಾಗೃತಿ ಮೂಡಿಸುವುದು ನನ್ನ ಕರ್ತವ್ಯವಾಗಿದೆ. ಸುಮಾರು ೪೦ ಗಣಪತಿಯನ್ನು ತರಲಾಗಿದೆ. ಮಾರಾಟವಾಗಲಿದೆ ಎಂಬ ನಂಬಿಕೆ ಇದೆ. ಎಲ್ಲರೂ ಪರಿಸರಕ್ಕೆ ಪೂರಕವಾದ ಗಣಪನ ಪ್ರತಿಷ್ಠಾಪಿಸಲು ಮುಂದಾದರೆ ತನಗೆ ಖುಷಿಯಾಗಲಿದೆ ಎನ್ನುತ್ತಾರೆ ಪವನ್.
ಪರಿಸರದ ಕಾಳಜಿ ಇರುವ ಯುವಕರು ಗಣಪತಿ ಮಾರಾಟಕ್ಕೆ ಬಂದರೆ ತಮ್ಮಂತಹ ಕಲಾವಿದರಿಗೆ ಬದುಕು, ಪ್ರೋತ್ಸಾಹ ಸಿಗಲಿದೆ. ಹುಟ್ಟಿನಲ್ಲಿ ಪೊಲಿಯೋದಿಂದ ದೈಹಿಕ ಸಮಸ್ಯೆಯಾಯಿತು. ಸವಾಲಾಗಿ ಸ್ವೀಕರಿಸಿ ಗಣಪತಿ ಮೂರ್ತಿ ತಯಾರಿಕೆಗೆ ಕೈ ಹಾಕಿದೆ. ಪರಿಸರ ಪ್ರೇಮಿ ಪವನ್ ಅವರಂತಹ ಯುವ ವರ್ತಕರು ಬೇಕಿದೆ.
ಕುಮಾರ್ ಆಲಗೋಡು, ಗಣಪತಿ ಮೂರ್ತಿ ತಯಾರಕ ಕಲಾವಿದ
೦೪ಕೆಕೆಆರ್೧
ಕಿಕ್ಕೇರಿಗೆ ಬಂದಿಳಿದಿರುವ ನೈಸರ್ಗಿಕ ವರ್ಣದ ಪರಿಸರ ಗಣಪ.