ಪೋಲಿಸ್ ಇನ್ಸ್ಪೆಕ್ಟರ್ ಆನಂದೇಗೌಡ ಮನವಿ
ಪ್ರತಿನಿಧಿ ವರದಿ, ಕೃಷ್ಣರಾಜಪೇಟೆ
ಕೋಮು ಸೌಹಾರ್ಧತೆಗೆ ಕೃಷ್ಣರಾಜಪೇಟೆ ತಾಲೂಕು ರಾಜ್ಯಕ್ಕೆ ಮಾದರಿಯಾಗಿದೆ. ಹಿಂದೂ ಮುಸ್ಲಿಂ ಬಾಂಧವರು ಪರಸ್ಪರ ಪ್ರೀತಿ ವಿಶ್ವಾಸದಿಂದ ಗೌರಿಗಣೇಶ ಹಾಗೂ ಈದ್ಮಿಲಾದ್ ಹಬ್ಬವನ್ನು ಒಂದಾಗಿ ಆಚರಿಸುವ ಮೂಲಕ ಮಾದರಿಯಾಗಬೇಕು ಎಂದು ಪೋಲಿಸ್ ಇನ್ಸ್ಪೆಕ್ಟರ್ ಆನಂದೇಗೌಡ ಮನವಿ ಮಾಡಿದರು.
ಕೆ.ಆರ್.ಪೇಟೆ ಪಟ್ಟಣ ಪೋಲಿಸ್ ಠಾಣೆಯಲ್ಲಿ ಗೌರಿಗಣೇಶ ಹಾಗೂ ಈದ್ಮಿಲಾದ್ ಹಬ್ಬದ ಆಚರಣೆಯ ಹಿನ್ನೆಲೆಯಲ್ಲಿ ಶಾಂತಿ ಸಭೆ ನಡೆಸಿ ಮಾತನಾಡಿದರು.
ಶುಕ್ರವಾರ ಹಾಗೂ ಶನಿವಾರ ಗೌರಿ ಗಣೇಶ ಹಬ್ಬವನ್ನು ಆಚರಿಸಿದರೆ ಮುಂದಿನ ಸೋಮವಾರ ಈದ್ಮಿಲಾದ್ ಹಬ್ಬವನ್ನು ಆಚರಿಸಲಾಗುತ್ತಿದೆ. ಸಮಾಜದಲ್ಲಿ ಹಾಲಿಗೆ ಸಕ್ಕರೆ ಬೆರೆತರೆ ಹಾಲಿನ ರುಚಿಯು ಹೆಚ್ಚಾಗುವಂತೆ ಒಂದಾಗಿ ಪರಸ್ಪರ ಪ್ರೀತಿ-ವಿಶ್ವಾಶದಿಂದ ನೆಮ್ಮದಿಯ ಜೀವನ ನಡೆಸುತ್ತಿರುವ ಹಿಂದೂ ಮತ್ತು ಮುಸ್ಲಿಂ ಬಾಂಧವರು ಗೌರಿಗಣೇಶ ಹಬ್ಬದಲ್ಲಿ ಭಾಗವಹಿಸಿದರೆ. ಹಿಂದೂ ಭಾಂಧವರು ಪ್ರವಾದಿ ಮಹಮದ್ರ ಜನ್ಮದಿನದ ಅಂಗವಾಗಿ ಆಚರಿಸುವ ಈದ್ಮಿಲಾದ್ ಸ್ನೇಹಸಮ್ಮಿಲನ ಹಬ್ಬದಲ್ಲಿ ಭಾಗವಹಿಸಿ ಪರಸ್ಪರ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳಬೇಕು. ಹಿಂದೂ ಮುಸ್ಲಿಂ ಬಾಂಧವರು ಒಂದಾಗಿ ಯಾವುದೇ ದ್ವೇಶ ಅಸೂಯೆಗೆ ಎಡೆಮಾಡಿಕೊಡದೇ ಪರಸ್ಪರ ಪ್ರೀತಿ-ವಿಶ್ವಾಸಗಳಿಂದ ಹಬ್ಬವನ್ನು ಆಚರಿಸಿದರು ಎಂಬ ಸಂದೇಶವು ನಾಡಿಗೆ ಗೊತ್ತಾಗಬೇಕು ಎಂದರು.
ಸರ್ಕಾರವು ಗೌರಿ ಗಣೇಶ ಹಬ್ಬದ ಆಚರಣೆಯ ಬಗ್ಗೆ ಹೊರಡಿಸಿರುವ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಿ ವಿವಿಧ ಇಲಾಖೆಗಳಿಂದ ಅನುಮತಿಯನ್ನು ಪಡೆದುಕೊಂಡ ನಂತರವೇ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜೆ ಪುರಸ್ಕಾರಗಳನ್ನು ಮಾಡಿದ ನಂತರ ಜವಾಬ್ಧಾರಿಯುತವಾಗಿ ಗಣೇಶ ಮೂರ್ತಿಯನ್ನು ನಿಗಧಿಪಡಿಸಿದ ಸ್ಥಳ ಇಲ್ಲವೇ ಕೆರೆಗಳಲ್ಲಿ ಮಾತ್ರ ವಿಸರ್ಜನೆ ಮಾಡಬೇಕು. ಯಾವುದೇ ಕಾರಣಕ್ಕೂ ಕಾಲುವೆಗಳಲ್ಲಿ ಗಣೇಶ ಮೂರ್ತಿಯನ್ನು ವಿಸರ್ಜನೆ ಮಾಡುವ ದುಸ್ಸಾಹಸಕ್ಕೆ ಅವಕಾಶ ಮಾಡಿಕೊಡಬಾರದು ಎಂದು ಹೇಳಿದರು.
ಕಾಲುವೆಗಳಲ್ಲಿ ಹರಿಯುವ ನೀರಿನ ಸೆಳೆತವು ಹೆಚ್ಚಾಗಿರುವುದರಿಂದ ಅನಾಹುತವು ಸಂಭವಿಸುವ ಸಾಧ್ಯತೆಯು ಹೆಚ್ಚಾಗಿರುವುದರಿಂದ ಕೆರೆ-ಕಟ್ಟೆಗಳಲ್ಲಿಯೇ ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಬೇಕು. ಪಿಓಪಿ ಗಣೇಶ ಮೂರ್ತಿಗಳ ಮಾರಾಟ ಹಾಗೂ ಪ್ರತಿಷ್ಠಾಪನೆಗೆ ಅವಕಾಶವಿಲ್ಲವಾದ್ದರಿಂದ ಪರಿಸರ ಸ್ನೇಹಿಯಾಗಿರುವ ಮಣ್ಣಿನ ಗಣೇಶ ಮೂರ್ತಿಗಳು ಹಾಗೂ ಪರಿಸರ ಮಾಲಿನ್ಯವಾಗದ ಹಸಿರು ಪಟಾಕಿಗಳನ್ನು ಮಾತ್ರ ಸಿಡಿಸಬೇಕು. ಗಣೇಶ ಮೂರ್ತಿಯ ಪ್ರತಿಷ್ಠಾಪನೆಯಿಂದ ವಿಸರ್ಜನೆಯವರೆಗೂ ಯುವಕರು ಅಗತ್ಯ ಮುಂಜಾಗರೂಕತಾ ಕ್ರಮಗಳನ್ನು ಕೈಗೊಂಡು ಎಚ್ಚರಿಕೆಯಿಂದ ಗಣೇಶ ಮೂರ್ತಿಯ ಪೂಜಾ ಕಾರ್ಯಕ್ರಮಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಆನಂದೇಗೌಡ ಮನವಿ ಮಾಡಿದರು.
ಪೋಲಿಸ್ ಸಬ್ಇನ್ಸ್ಪೆಕ್ಟರ್ ಸುಬ್ಬಯ್ಯ, ಚಂದ್ರಶೇಖರ್, ಪುರಸಭೆ ಮಾಜಿ ಅಧ್ಯಕ್ಷ ಕೆ.ಗೌಸ್ಖಾನ್, ವಕೀಲ ನಿರಂಜನ, ನಯಾಜ್ ಅಹಮದ್, ಪುರಸಭೆ ಮಾಜಿ ಸದಸ್ಯ ಕೆ.ಆರ್.ನೀಲಕಂಠ, ಮುಖಂಡ ಚಂದ್ರ ಕಲಾ ರಮೇಶ್, ಜಯ ಕರ್ನಾಟಕ ಸಂಘಟನೆಯ ಅಧ್ಯಕ್ಷ ಸೋಮಶೇಖರ್, ಕರ್ನಾಟಕ ರಕ್ಷಣ ವೇದಿಕೆಯ ತಾಲೂಕು ಘಟಕದ ಅಧ್ಯಕ್ಷ ಟೆಂಪೋ ಶ್ರೀನಿವಾಸ್, ಹೊಸಹೊಳಲು ಗೋಪಿ, ದಡದಹಳ್ಳಿ ಅತೀಕ್, ಪಠಾಣ್ ಬಾಬೂ, ಕರವೇ ಸ್ವಾಭಿಮಾನಿ ಸೇನೆಯ ಅಧ್ಯಕ್ಷ ಸಮೀರ್, ಆರ್ಎಸ್ಎಸ್ ಮಂಜುನಾಥ್ ಸೇರಿದಂತೆ ನೂರಾರು ಜನರು ಶಾಂತಿ ಸಮಿತಿ ಸಭೆಯಲ್ಲಿ ಭಾಗವಹಿಸಿದ್ದರು.