ಚಾಮುಂಡಿಬೆಟ್ಟ ಅಭಿವೃದ್ಧಿ ಪ್ರಾಧಿಕಾರ ವಿಚಾರದಲ್ಲಿ ರಾಜಮನೆತನ v/s ರಾಜ್ಯ ಸರ್ಕಾರದ ನಡುವೆ ಜಟಾಪಟಿ ನಡೀತಿದೆ. ಈಗಾಗಲೇ ನ್ಯಾಯಾಲಯದ ಅಂಗಳದಲ್ಲಿ ಪ್ರಕರಣ ಇದೆ. ಈ ಮಧ್ಯೆಯೇ
ಇಬ್ಬರ ನಡುವಿನ ಜಟಾಪಟಿಯಲ್ಲಿ ಸದ್ಯಕ್ಕೆ ರಾಜಮನೆತನಕ್ಕೆ ಮೇಲುಗೈ ಆಗಿದೆ. ಯಥಾಸ್ಥಿತಿ ಕಾಪಾಡಿಕೊಳ್ಳುವಂತೆ ನ್ಯಾಯಾಲಯ ಆದೇಶ ಹೊರಡಿಸಿದೆ. ಚಾಮುಂಡಿ ಬೆಟ್ಟ ಅಭಿವೃದ್ದಿ ಪ್ರಾಧಿಕಾರದ ವ್ಯಾಜ್ಯ ಸಂಬಂಧದ ವಿಚಾರಣೆ ಮುಂದೂಡಿಕೆಯಾಗಿದ್ದು, ಸೆಪ್ಟೆಂಬರ್ 25ಕ್ಕೆ ಮುಂದೂಡಿ ನ್ಯಾಯಾಲಯದಿಂದ ಆದೇಶ ಹೊರಡಿಸಿದೆ.
ದೇಗುಲದ ಚರಾಸ್ಥಿ ಸ್ಥಿರಾಸ್ಥಿ ಮುಟ್ಟದಂತೆ ಕೋರ್ಟ್ ಆದೇಶ ನೀಡಿದೆ. ಇದರಿಂದ ಚಾಮುಂಡಿಬೆಟ್ಟದ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೆ ಮತ್ತೆ ಹಿನ್ನಡೆ ಆಗಿದ್ದು, ಪರ-ವಿರೋಧ ಚರ್ಚೆಗೆ ಗ್ರಾಸವಾಗಿದ್ದ ಪ್ರಾಧಿಕಾರ ರಚನೆ ವಿಚಾರ ಮತ್ತಷ್ಟು ರೋಚಕತೆ ಸೃಷ್ಟಿಸಿದೆ. ರಾಜಮನೆತನದ ತೀವ್ರ ವಿರೋಧದ ನಡುವೆ ಕಳೆದ 2 ದಿನಗಳ ಹಿಂದೆ ಸಿಎಂ ಸಿದ್ದರಾಮಯ್ಯ ಪ್ರಾಧಿಕಾರದ ಸಭೆ ನಡೆಸಿದ್ದರು. ಸಿಎಂ ನೇತೃತ್ವದಲ್ಲಿ ನಡೆದ ಸಭೆ ನ್ಯಾಯಾಂಗದ ಉಲ್ಲಂಘನೆ ಆಗಿದೆ ಎಂದು ರಾಜವಂಶಸ್ಥರಾದ ಪ್ರಮೋದಾದೇವಿ ಹಾಗು ಯದುವೀರ್ ಒಡೆಯರ್ ಬೇಸರ ಹೊರಹಾಕಿದ್ರು. ಅಲ್ಲದೆ ನ್ಯಾಯಾಲಯದಲ್ಲಿ ಸರ್ಕಾರದ ವಿರುದ್ಧ ಹೋರಾಡುವುದಾಗಿ ತಿಳಿಸಿದ್ದರು. ಇದರ ಬೆನ್ನಲ್ಲೇ ನ್ಯಾಯಾಲಯದಿಂದ ಚಾಮುಂಡೇಶ್ವರಿ ಪ್ರಾಧಿಕಾರದ ವಿಚಾರವಾಗಿ ಯಥಾಸ್ಥಿತಿ ಕಾಪಾಡಿಕೊಳ್ಳುವಂತೆ ಆದೇಶ ನೀಡಲಾಗಿದೆ. ಈ ಮೂಲಕ ರಾಜ್ಯಸರ್ಕಾರಕ್ಕೆ ಮುಖಭಂಗವಾಗಿದೆ.