ಪ್ರತಿನಿಧಿ ವರದಿ ಯಳಂದೂರು
ಗೌರಿ-ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಯಳಂದೂರು ಪಟ್ಟಣದಲ್ಲಿ ಹೂ, ಹಣ್ಣು ಸೇರಿದಂತೆ ಪೂಜಾ ಸಾಮಗ್ರಿಗಳ ಖರೀದಿ ಜೋರಾಗಿದೆ.
ಪಟ್ಟಣದ ಸಂತೆ ಬೀದಿಯ ಬಳಿ ಗೌರಿ ಗಣೇಶ ಹಬ್ಬದ ವ್ಯಾಪಾರ ಜೋರಾಗಿದ್ದು, ವಾಹನಗಳು ಸೇರಿದಂತೆ ಗೌರಿ ಗಣೇಶ ಮೂರ್ತಿಯ ಪ್ರತಿಷ್ಠಾಪನೆಯ ಅಲಂಕಾರಕ್ಕೆ ಬಳಸುವ ನಾನಾ ಬಗೆಯ ವಸ್ತುಗಳನ್ನು ರಸ್ತೆ ಬದಿಯಲ್ಲಿಟ್ಟುಕೊಂಡು ಮಾರಾಟ ಮಾಡುವ ದೃಶ್ಯ ಸಾಮಾನ್ಯವಾಗಿತ್ತು.
ಹಬ್ಬದ ಸಂದರ್ಭದಲ್ಲಿ ಕೆಲವು ವಸ್ತುಗಳಿಗೆ ದಿಢೀರ್ ಬೆಲೆ ಏರಿಕೆ ಯಾಗಿದೆ. ಇಂದು ಬೆಳಗ್ಗೆಯಿಂದಲೇ ಪಟ್ಟಣದಲ್ಲಿ ವ್ಯಾಪಾರ ಜೋರಾಗಿದ್ದು, ಬೆಲೆಗಳು ಗಗನಕೇರಿದೆ. ಗೌರಿ ಗಣೇಶ ಪೂಜೆ ಹಿನ್ನೆಲೆ ತಂಡೊಪ್ಪ ತಂಡವಾಗಿ ಪೂಜಾ ಸಾಮಗ್ರಿಗಳನ್ನು ಖರೀದಿ ಮಾಡುವುದಕ್ಕೆ ಸಾರ್ವಜನಿಕರು ಬರುತ್ತಿದ್ದ ದೃಶ್ಯ ಕಂಡು ಬಂದಿದ್ದು, ಏಕಕಾಲಕ್ಕೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದಾರೆ. ಬಳೆಪೇಟೆ ರಸ್ತೆ ಸಂಪೂರ್ಣ ಟ್ರಾಫಿಕ್ ಜಾಮ್ ಆಗಿ ಕೆಲ-ಕಾಲ ವ್ಯಾಪಾರಸ್ಥರು ಹಾಗೂ ವಾಹನ ಸವರಾರು ಪರದಾಡುವಂತಾಯಿತು.
ಗಣೇಶ ಹಬ್ಬಕ್ಕೆ ಸಣ್ಣ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಕಾತುರದಿಂದ ಕಾಯುತ್ತಿರುತ್ತಾರೆ, ಮಕ್ಕಳು ಯುವಕರು ಹಬ್ಬದ ನಿಮಿತ ಮನೆ ಹಾಗೂ ಗಣೇಶ ಪ್ರತಿಷ್ಠಾಪನೆಯ ಮಂಟಪವನ್ನು ಅಲಂಕರಿಸಲು ಅಗತ್ಯವಾದ ಪ್ಲಾಸ್ಟಿಕ್ ಹಾಗೂ ವಿದ್ಯುತ್ ಅಲಂಕಾರಿಕ ವಸ್ತುಗಳ ಮಾರಾಟವು ಪಟ್ಟಣದಲ್ಲಿ ಜೋರಾಗಿ ನಡೆದಿದ್ದೆ.
ಪ್ಲಾಸ್ಟಿಕ್ ನಿಂದ ತಯಾರಿಸಿದ ಅಲಂಕಾರಿಕ ಹೂವು, ಬಾಗಿಲ ತೋರಣಗಳು ಆಕರ್ಷಕ ವಿನ್ಯಾಸಗಳ ಆಧಾರದ ಮೇಲೆ 100 ರಿಂದ 500 ರೂ.ತನಕ ಮಾರಾಟವಾದವು. ಬಾಳೆಹಣ್ಣು ತೆಂಗಿನಕಾಯಿ ಸೇರಿದಂತೆ ಪೂಜಾ ಸಾಮಗ್ರಿಗಳ ದರದಲ್ಲಿ ಬೆಲೆಗಳ ವ್ಯತ್ಯಾಸವಿರಲಿಲ್ಲ, ಆದರೆ ಮಲ್ಲಿಗೆ ಸೇವಂತಿಗೆ ಗುಲಾಬಿ ಹೂಗಳ ಬೆಳೆ ಹೆಚ್ಚಾಗಿದೆ.
ಮಹಿಳೆಯರು ಯುವತಿಯರು ಯುವಕರು ಗೌರಿಮೂರ್ತಿಯನ್ನು ಚೌಕಾಸಿ ದರದಲ್ಲಿ ಖರೀದಿಸಿದ್ದು ಪಟ್ಟಣದ ಅಂಗಡಿಗಳಲ್ಲಿ ಕಂಡುಬಂದಿತ್ತು, ಶನಿವಾರ ಗಣೇಶ ಮೂರ್ತಿ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಮನೆ, ಚಾವಡಿ, ರಸ್ತೆ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಸಿದ್ಧವಾಗುತ್ತಿರುವ ಬೃಹತ್ ವೇದಿಕೆ ಮಂಟಪಗಳ ನಿರ್ಮಾಣ ಕಾರ್ಯ ಅಂತಿಮ ಸ್ವರೂಪದಲ್ಲಿ ಇದ್ದದ್ದು ಸಹ ಅಲ್ಲಿ ಕಂಡುಬಂದಿತು.
ಗೌರಿ, ಗಣೇಶ ಮೂರ್ತಿಗಳ ಮಾರಾಟದಲ್ಲಿ ವ್ಯತ್ಯಾಸ: ಈ ಬಾರಿ ಗೌರಿ ಗಣೇಶ ಮೂರ್ತಿಗಳ ವ್ಯಾಪಾರದಲ್ಲಿ ಸ್ವಲ್ಪ ವ್ಯತ್ಯಾಸಗಳು ಉಂಟಾಗಿದೆ ಎಂದು ವ್ಯಾಪಾರಸ್ಥರು ತಿಳಿಸಿದರು. ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಹಲವು ಕಡೆಗಳಲ್ಲಿ ಅಂದರೆ ಪೊಲೀಸ್ ಇಲಾಖೆ ತಹಸಿಲ್ದಾರ್ ಹಾಗೂ ಗ್ರಾಪಂಗಳಲ್ಲಿ ಕಡ್ಡಾಯವಾಗಿ ಅನುಮತಿಯನ್ನು ಪಡೆಯಬೇಕೆಂದು ಸರ್ಕಾರದ ಆದೇಶ ಇರುವುದರಿಂದ ಯುವಕರು ಗಣೇಶ ಪ್ರತಿಷ್ಠಾಪನೆಗೆ ಹಿಂದೆ ಬೀಳುತ್ತಿದ್ದಾರೆ. ಹಾಗಾಗಿ ಪ್ರತಿ ವರ್ಷದಂತೆ ಗಣೇಶ ಮೂರ್ತಿಯ ವ್ಯಾಪಾರ ಸರಳವಾಗಿಯೇ ನಡೆಯುತ್ತಿದೆ. ಅನುಮತಿ ಪಡೆಯಬೇಕೆಂಬ ಭಯದಿಂದ ಹೆಚ್ಚು ಗಣೇಶ ಮೂರ್ತಿಗಳು ಮಾರಾಟವಾಗುತ್ತಿಲ್ಲ ಎಂದು ಪಟ್ಟಣದ ವ್ಯಾಪಾರಿಯಾದ ಗುರು ತಿಳಿಸಿದರು.
ಪೋಟೋ: ಗೌರಿ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಯಳಂದೂರು ಪಟ್ಟಣದಲ್ಲಿ ಸಾರ್ವಜನಿಕರು ಅಲಂಕಾರಿಕ ವಸ್ತುಗಳ ಖರೀದಿಯಲ್ಲಿ ಮುಗಿಬಿದ್ದಿರುವುದು.