ಅಧಿಕಾರ ಹಿಡಿದ ಕಾಂಗ್ರೆಸ್ । ಅಭ್ಯರ್ಥಿ ಕಣಕ್ಕಿಳಿಸುವಲ್ಲಿಯೇ ವಿಫಲವಾಗಿದ ಬಿಜೆಪಿ
ಪ್ರತಿನಿಧಿ ವರದಿ ಕೊಳ್ಳೇಗಾಲ
ನಗರಸಭೆಯ 2ನೇ ಅವಧಿಯ ಅಧ್ಯಕ್ಷ, ಉಪಾಧ್ಯಕ್ಷಗಾದಿ ಚುನಾವಣೆಯಲ್ಲಿ ನಿರೀಕ್ಷೆಯಂತೆ ಗುರುವಾರ ಭೀಮನಗರದ 3ನೇ ವಾರ್ಡಿನ ಕಾಂಗ್ರೆಸ್ ಸದಸ್ಯೆ ಸಿ.ಎನ್.ರೇಖಾ ರಮೇಶ್ ಅಧ್ಯಕ್ಷರಾಗಿ ಹಾಗೂ ದೇವಾಂಗಪೇಟೆಯ 14ನೇ ವಾರ್ಡಿನ ಪಕ್ಷೇತರ ಸದಸ್ಯ ಎ.ಪಿ.ಶಂಕರ್ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಗೊಂಡು ಇತಿಹಾಸ ನಿರ್ಮಿಸಿದ್ದಾರೆ.
ಕೊಳ್ಳೇಗಾಲ ಉಪ ವಿಭಾಗಾಧಿಕಾರಿ ಬಿ.ಆರ್.ಮಹೇಶ್ ನಗರಸಭಾ ಕಚೇರಿಯ ಸಭಾಂಗಣದಲ್ಲಿ ಗುರುವಾರ ಬೆಳಗ್ಗೆ 11 ಗಂಟೆಯಲ್ಲಿ ಚುನಾವಣಾಧಿಕಾರಿಯಾಗಿ ಪಾಲ್ಗೊಂಡು, ಈ ವೇಳೆ ಎಸ್ಸಿ ಮಹಿಳೆಗೆ ಮೀಸಲಿದ್ದ ಅಧ್ಯಕ್ಷಗಾದಿಗೆ ಹಾಗೂ ಸಾಮಾನ್ಯ ವರ್ಗಕ್ಕೆ ನಿಗಿದಯಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲು ಮುಕ್ತ ಅವಕಾಶ ಕಲ್ಪಿಸಿದ್ದರು.
ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸಿ.ಆರ್.ರೇಖಾ ರಮೇಶ್ ಅಧ್ಯಕ್ಷ ಸ್ಥಾನಕ್ಕೆ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಎ.ಪಿ.ಶಂಕರ್ ಮಾತ್ರ ನಾಮಪತ್ರ ಸಲ್ಲಿಸಿದರು. ಹಾಗಾಗಿ, ನಿಯಮಾನುಸಾರ ನಾಮಪತ್ರ ಪರಿಶೀಲಿಸಿದ ಚುನಾವಣಾಧಿಕಾರಿ, ಉಮೇದುವಾರಿಕೆಯನ್ನು ಅಂಗಿಕರಿಸಿ ಮಧ್ಯಾಹ್ನ 1.15ರ ಬಳಿಕ ನಗರಸಭೆಯ ನೂತನ ಅಧ್ಯಕ್ಷೆ, ಉಪಾಧ್ಯಕ್ಷರ ಆಯ್ಕೆಯನ್ನು ಪ್ರಕಟಿಸಿದರು.
ನಂತರ ಸಭೆಯಲ್ಲಿದ್ದ ಸಂಸದ ಸುನಿಲ್ ಬೋಸ್, ಶಾಸಕ ಎ.ಆರ್.ಕೃಷ್ಣಮೂರ್ತಿ, ನಗರಸಭೆ ಪೌರಾಯುಕ್ತ ಎ.ರಮೇಶ್ ಸೇರಿದಂತೆ ಇತರ ನಗರಸಭಾ ಸದಸ್ಯರು, ನೂತನವಾಗಿ ನಗರಸಭೆಗೆ ಆಯ್ಕೆಗೊಂಡ ಅಧ್ಯಕ್ಷ, ಉಪಾಧ್ಯಕ್ಷರನ್ನು ಅಭಿನಂದಿಸಿದರು.
ಶಾಂತರಾಜುಗೆ ಅಧಿಕಾರದ ಕನಸು ಭಗ್ನ: ನಗರಸಭೆಯ 2ನೇ ಅವಧಿಯ ಅಧ್ಯಕ್ಷ, ಉಪಾಧ್ಯಕ್ಷ ಗಾದಿ ಚುನಾವಣೆಯಲ್ಲಿ ಕೇವಲ ನಾಲ್ವರು ಬೆರಳೆಣಿಕೆಯಷು ತನ್ನ ಬೆಂಬಲಿಗ ನಗರಸಭಾ ಸದಸ್ಯರನ್ನು ಹೊಂದಿದ್ದ ಮುಡಿಗುಂಡ ಶಾಂತರಾಜು, ಕಾಂಗ್ರೆಸ್ ಪಕ್ಷದವರು ಅಧ್ಯಕ್ಷ, ಉಪಾಧ್ಯಕ್ಷಗಾದಿ ಚುನಾವಣೆಗೆ ಅಭ್ಯರ್ಥಿಯನ್ನು ಲಕೋಟೆ ಮೂಲಕ ಆಯ್ಕೆಗೊಳಿಸಿ ಪ್ರಕಟಿಸುತ್ತಿದ್ದಂತೆ ಸ್ಥಳದಿಂದ ಕಣ್ಮರೆಯಾಗಿದ್ದು, ಅನೇಕ ರಾಜಕೀಯ ಚರ್ಚೆ ಗೆ ಗ್ರಾಸವಾಗಿತ್ತು.
ಚುನಾವಣೆಯಿಂದ ದೂರ ಉಳಿದಿದ್ದ ಜಯಣ್ಣ!: ಕೊಳ್ಳೇಗಾಲ ಕ್ಷೇತ್ರದ ಮಾಜಿ ಶಾಸಕ ಎಸ್.ಜಯಣ್ಣ, ಗುರುವಾರ ನಗರಸಭಾ ಅಧ್ಯಕ್ಷಗಾದಿ ಚುನಾವಣೆಯ ಭಾಗವಾದ ಅಭಿನಂದನೆ ಪ್ರಕ್ರಿಯೆಯಿಂದ ದೂರ ಉಳಿದ್ದರು. ಬುಧವಾರ ರಾತ್ರಿ ಮೈಸೂರಿನ ಜಲದರ್ಶಿನಿಯಲ್ಲಿ ತನ್ನ ಶಿಷ್ಯರ ಪರವಾಗಿ ಹೋರಾಟ ನಡೆಸಿ ಶಾಸಕ ಎ.ಆರ್.ಕೃಷ್ಣಮೂರ್ತಿ ಅವರ ವಿರುದ್ಧ ಮಣಿದ ಅವರು, ಗುರುವಾರ ದಿನವಿಡಿ ಕೊಳ್ಳೇಗಾಲದ ತಮ್ಮ ಮನೆಯಲ್ಲಿ ವಿಶ್ರಾಂತಿಗೆ ಮೊರೆ ಹೋಗಿದ್ದು ವಿಶೇಷವಾಗಿತ್ತು.
ಭೀಮನಗರಕ್ಕೆ ಬಲ ನೀಡಿದ ಎಆರ್ಕೆ:
ನಗರಸಭೆಯ 2ನೇ ಅವಧಿಯ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಭಾರಿ ವಿಶೇಷತೆ ಹೊಂದಿತ್ತು. ಕೆಲ ವರ್ಷಗಳಿಂದ ಐದು ಬಾರಿ ಅಧ್ಯಕ್ಷಗಾದಿಯನ್ನು ತನ್ನದಾಗಿಸಿಕೊಂಡಿದ್ದ ಕೊಳ್ಳೇಗಾಲದ ಪಟ್ಟಣದ ಭೀಮನಗರದ ನಗರಸಭಾ ಸದಸ್ಯರಿಗೆ ಈ ಬಾರಿ ಮತ್ತೆ ಅಧ್ಯಕ್ಷಗಾದಿ ದೊರೆಯುವ ಅವಕಾಶ ದೊರೆತಿತ್ತು. ಆದರೆ, ಇದನ್ನು ತಳ್ಳಿಗಾಕಿ ತನ್ನ ಶಿಷ್ಯ ಮುಡಿಗುಂಡ ಶಾಂತರಾಜು ಅವರ ಪತ್ನಿಗೆ ಅಧ್ಯಕ್ಷಗಾದಿ ಕೊಡಿಸುವಲ್ಲಿ ಮಾಜಿ ಶಾಸಕ ಎಸ್.ಜಯಣ್ಣ ಪ್ರಯತ್ನ ಪಟ್ಟಿದ್ದರು. ಆದರೆ, ಇದಕ್ಕೆ ಜಗ್ಗದ ಶಾಸಕ ಎ.ಆರ್.ಕೃಷ್ಣಮೂರ್ತಿ, ತಮ್ಮ ನಂಬಿಕಸ್ಥ ನಗರಸಭಾ ಮಾಜಿ ಅಧ್ಯಕ್ಷ ಎಸ್.ರಮೇಶ್ ಅವರ ಪತ್ನಿಯಾದ ಭೀಮನಗರದ 3ನೇ ವಾರ್ಡಿನ ಕಾಂಗ್ರೆಸ್ ಸದಸ್ಯೆ ಸಿ.ಎನ್.ರೇಖಾಗೆ 2ನೇ ಅವದಿಗೆ ಅಧ್ಯಕ್ಷಸ್ಥಾನ ಕೊಡಿಸುವಲ್ಲಿ ದಿಟ್ಟೆದೆ ಪ್ರದರ್ಶಿಸಿ ಭೀಮನಗರಕ್ಕೆ ಬಲ ತುಂಬಿದ ಪ್ರಸಂಗ ನಡೆಯಿತು.
5ಕೆಜಿಎಲ್-1 ಫೋಟೋ ಶೀರ್ಷಿಕೆ: ಕೊಳ್ಳೇಗಾಲ ನಗರಸಭೆಯ ನೂತನ ಅಧ್ಯಕ್ಷೆಯಾಗಿ ಆಯ್ಕೆಗೊಂಡ ಸಿ.ಎನ್.ರೇಖಾ ರಮೇಶ್ ನಗರಸಭಾ ಸಭಾಂಗಣದಲ್ಲಿ ಎಲ್ಲ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು.