ಹುಣಸೂರು: ತೀವ್ರ ಜಿದ್ದಾಜಿದ್ದಿಗೆ ಸಾಕ್ಷಿಯಾಗಿದ್ದ ಪ್ರತಿಷ್ಠಿತ ಹುಣಸೂರು ನಗರಸಭೆಯ ಅಧ್ಯಕ್ಷ & ಉಪಾಧ್ಯಕ್ಷ ಸ್ಥಾನ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿಗಳ ಪಾಲಾಗಿದೆ. ಎರಡು ಸ್ಥಾನ ಪಡೆಯುವಲ್ಲಿ ಮೈತ್ರಿ ಪಡೆ ಸಕ್ಸಸ್ ಆಗಿದ್ದು ಕಾಂಗ್ರೆಸ್ ಭದ್ರಕೋಟೆ ಭೇದಿಸುವಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿಕೂಟ ಯಶಸ್ವಿಯಾಗಿದೆ. ಈ ಮೂಲಕ ಹುಣಸೂರು ನಗರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಧೂಳಿಪಟವಾಗಿ “ಮೈತ್ರಿ” ಪಡೆ ಮೇಲುಗೈ ಸಾಧಿಸಿದೆ.
ಫಲಿಸಿತು GD ಹರೀಶ್ ಗೌಡ ತಂತ್ರ..!
ಚುನಾವಣೆಯಲ್ಲಿ ಶಾಸಕ ಜಿ ಡಿ ಹರೀಶ್ ಗೌಡ ತಂತ್ರಗಾರಿಕೆ ಫಲಿಸಿದ್ದು, ಏಕೈಕ ದೊಡ್ಡ ಪಕ್ಷವಾಗಿರುವ ಕಾಂಗ್ರೆಸ್ ಗೆ ಅಧಿಕಾರ ಕೈ ತಪ್ಪಿದೆ. ಜೆಡಿಎಸ್ ನ ಶರವಣ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರೆ, ನಗರಸಭೆಯ ಏಕೈಕ ಎಸ್ ಟಿ ಮಹಿಳಾ ಸದಸ್ಯೆಯಾಗಿರುವ ಪಕ್ಷೇತರ ಸದಸ್ಯೆ ಆಶಾರಾಣಿ ಅವಿರೋಧವಾಗಿ ಉಪಾಧ್ಯಕ್ಷೆ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ.
ಒಟ್ಟು 31 ಸದಸ್ಯರ ಬಲ ಹೊಂದಿರುವ ಹುಣಸೂರು ನಗರಸಭೆಯಲ್ಲಿ ಕಾಂಗ್ರೆಸ್ 14, ಜೆಡಿಎಸ್ 7, ಬಿಜೆಪಿ 3, ಎಸ್ ಡಿ ಪಿ ಐ 2 ಹಾಗು 5 ಮಂದಿ ಪಕ್ಷೇತರ ಸದಸ್ಯರಿಗೆ ಮತದಾನದ ಅವಕಾಶವಿತ್ತು. ಇವರ ಜೊತೆಗೆ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಹುಣಸೂರು ಶಾಸಕ ಜಿ ಡಿ ಹರೀಶ್ ಗೌಡಗೂ ಮತ ಚಲಾಯಿಸುವ ಅವಕಾಶವಿತ್ತು.ಇಂದು ನಡೆದ ಚುನಾವಣೆಯಲ್ಲಿ ಜೆಡಿಎಸ್ ನ ಶರವಣ 17 ಮತ ಪಡೆದು ಅಧ್ಯಕ್ಷರಾಗಿ ಆಯ್ಕೆಯಾಗಿದ್ದರೆ, ಮೊದಲೇ ನಿಗದಿಯಾದಂತೆ ಉಪಾಧ್ಯಕ್ಷ ಸ್ಥಾನ ಎಸ್ ಟಿ ಮಹಿಳೆಗೆ ಮೀಸಲಾಗಿತ್ತು. ನಗರಸಭೆಯ ಏಕೈಕ ಎಸ್ ಟಿ ಮಹಿಳಾ ಸದಸ್ಯೆಯಾಗಿರುವ ಕಾರಣ ಪಕ್ಷೇತರ ಸದಸ್ಯೆ ಆಶಾರಾಣಿ ಅವಿರೋಧವಾಗಿ ಉಪಾಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ ಸದಸ್ಯ ದೇವನಾಯಕ ಮತದಾನಕ್ಕೆ ಗೈರಾಗಿದ್ದು, ಕಾಂಗ್ರೆಸ್ ನ ಸಣ್ಣೇಗೌಡರಿಗೆ 15 ಮತಗಳು ದೊರೆತಿದ್ದು, ಅಧ್ಯಕ್ಷ ಸ್ಥಾನ ಕೈತಪ್ಪಿದೆ.
‘ಮೈತ್ರಿ’ ಪಾಳಯದಲ್ಲಿ ಸಂಭ್ರಮ..!
ಫಲಿತಾಂಶ ಹೊರ ಬೀಳುತ್ತಿದ್ದಂತೆ ಬಿಜೆಪಿ-ಜೆಡಿಎಸ್ ಪಾಳಯದಲ್ಲಿ ಸಂಭ್ರಮ ಮನೆಮಾಡಿದ್ದು, ತಮ್ಮ ನೆಚ್ಚಿನ ನಾಯಕರ ಪರವಾಗಿ ಜೈಕಾರ ಕೂಗಿ ಕಾರ್ಯಕರ್ತರು ಸಂಭ್ರಮಿಸಿದ್ದಾರೆ. ಉಭಯ ಪಕ್ಷಗಳ ಕಾರ್ಯಕರ್ತರು ಸಂಭ್ರಮಾಚರಣೆಯಲ್ಲಿ ಬ್ಯುಸಿಯಾಗಿದ್ದರೆ ಇತ್ತ ಇದೇ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಮತದಾನಕ್ಕೆ ಗೈರಾದ ದೇವನಾಯಕ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ರು.