ಆಕಾಶವಾಣಿ.. ಕೇಳುಗರ ಪಾಲಿನ ಅಮೃತವಾಣಿ.. ಅಂದೊಂದಿತ್ತು ಕಾಲ ಅದೆಷ್ಟೋ ಮಂದಿಗೆ ಬೆಳಗಿನ ಕೋಳಿ ಕೂಗುತಿದ್ದದ್ದು ರೇಡಿಯೋದಲ್ಲಿ ಶುಭೋದಯ ಪ್ರಕಟವಾಗುತ್ತಿದ್ದ ಸಮಯದಲ್ಲೇ.. ಅಷ್ಟರಮಟ್ಟಿಗೆ ಜನಮಾನಸದಲ್ಲಿ ಆಕಾಶವಾಣಿ ಅಕ್ಷರಶಃ ಹೃದಯದ ಬಡಿತವಾಗಿತ್ತು. ಆಕಾಶವಾಣಿ ಅದೆಷ್ಟೋ ಜನರ ಜತೆ ಭಾವನಾತ್ಮಕ ಸಂಬಂಧವನ್ನ ಇವತ್ತಿಗೂ ಹೊಂದಿದೆ.
ಮೈಸೂರು ಅಕಾಶವಾಣಿಗೆ ಈಗ ಬರೋಬ್ಬರಿ 90 ವರ್ಷದ ಹುಟ್ಟುಹಬ್ಬ. ಕೋಟ್ಯಂತರ ಕೇಳುಗರು ಈವರೆಗೂ ಮೈಸೂರು ಆಕಾಶವಾಣಿಯನ್ನು ಬಿಗಿದಪ್ಪಿಕೊಂಡು ಪೋಷಿಸಿ ಬೆಳೆಸಿದ್ದಾರೆ. ತಮ್ಮ ನಾಡಿಮಿಡಿತದಲ್ಲಿ ಬೆರೆಸಿಕೊಂಡಿದ್ದಾರೆ. ಆಕಾಶವಾಣಿ 90 ವಸಂತಗಳನ್ನ ಪೂರೈಸಿರೋ ಸಂದರ್ಭದಲ್ಲೂ ಎಲ್ಲಾ ವಲಯದಿಂದ ಶುಭಾಷಯಗಳ ಮಹಾಪೂರವೇ ಹರಿದುಬರ್ತಿದೆ.
ಆಕಾಶವಾಣಿ ಹಿನ್ನೆಲೆ ಏನು..?
ವೃತ್ತಿಯಲ್ಲಿ ಪ್ರಾಧ್ಯಾಪಕರಾಗಿದ್ದ ಡಾ.ಎಂ.ವಿ.ಗೋಪಾಲಸ್ವಾಮಿ ಅವರು 1935ರ ಸೆಪ್ಟೆಂಬರ್ 10ರಂದು ಒಂಟಿಕೊಪ್ಪಲಿನಲ್ಲಿರುವ ತಮ್ಮ ಮನೆ ‘ವಿಠಲ ವಿಹಾರ’ದಲ್ಲಿ ಪ್ರಾಯೋಗಿಕವಾಗಿ ರೇಡಿಯೋ ಪ್ರಸಾರವನ್ನು ರಾಷ್ಟ್ರಕವಿ ಕುವೆಂಪು ಅವರ ಕವಿವಾಣಿಯನ್ನು ಬಿತ್ತರಿಸುವುದರ ಮೂಲಕ ಆರಂಭಿಸಿದ್ದರು. ಈಗ ಅದೇ ಆಕಾಶವಾಣಿ ಭರ್ತಿ 90 ವಸಂತಗಳನ್ನ ಪೂರೈಸಿದ್ದು, ಕೇಳುಗ ಪ್ರಿಯರು ಆತ್ಮೀಯ ಮಿತ್ರನಿಗೆ ಶುಭ ಹಾರೈಸುತ್ತಿದ್ದಾರೆ. ಇವತ್ತಿಗೂ ಬೆಳಿಗ್ಗೆ 5.53ರಿಂದ 11.10ರವರೆಗೆ ಪ್ರಸಾರ ಕಾರ್ಯವನ್ನು ಮೈಸೂರು ಆಕಾಶವಾಣಿ ವಿನೂತನವಾಗಿ ನಡೆಸುತ್ತಿದೆ. ‘ಶಿಕ್ಷಣ, ಮಾಹಿತಿ ಮತ್ತು ಮನರಂಜನೆ’ ವಿಭಾಗದಲ್ಲಿ ಪ್ರತೀ ದಿನವೂ ಒಂದಿಲ್ಲೊಂದು ವಿಶೇಷ ಕಾರ್ಯಕ್ರಮವನ್ನು ಜನರಿಗಾಗಿ ಪ್ರಸಾರ ಮಾಡುತ್ತಿದೆ. ಸಾಹಿತ್ಯ, ಸಂಗೀತ, ಜಾನಪದ, ನಾಟಕ, ಕೃಷಿ, ವಿಜ್ಞಾನ, ಆರೋಗ್ಯಕ್ಕೆ ಸಂಬಂಧಿಸಿದಂತೆ ಮಹಿಳೆ, ಮಕ್ಕಳು, ಯುವಜನತೆಯನ್ನೂ ಒಳಗೊಂಡು ಕಾರ್ಯಕ್ರಮ ಇಂದಿಗೂ ತಯಾರಾಗುತ್ತಿದೆ. ಬೇರೆ ಬೇರೆ ಮಾಧ್ಯಮದ ಬಿರುಗಾಳಿಯ ನಡುವೆಯೂ ಆಕಾಶವಾಣಿ ತನ್ನ ಮೌಲ್ಯ ಕಾಪಾಡಿಕೊಂಡಿದ್ದು, ನಿರಂತರವಾಗಿ ಕೇಳುಗರ ಮನಮುಟ್ಟುತ್ತಿದೆ.