ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿರುವ ಭ್ರಷ್ಟಾಚಾರ ಬಗೆದಷ್ಟು ಬೆಳಕಿಗೆ ಬರುತ್ತಿದ್ದು, ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ಹಲವು ಅಧಿಕಾರಿಗಳು ಸಾಥ್ ನೀಡಿರುವ ಶಂಕೆ ವ್ಯಕ್ತವಾಗಿದೆ. ಇದರ ಬೆನ್ನಲ್ಲೇ ಪ್ರಕರಣದಲ್ಲಿ ಡಿಜಿಟಲ್ ಸಾಕ್ಷಿ ನಾಶಕ್ಕೆ ಅಧಿಕಾರಿಗಳು ಮುಂದಾದರೆ? ಎಂಬ ಅನುಮಾನ ವ್ಯಕ್ತವಾಗುತ್ತಿದೆ.
ಮುಡಾದಲ್ಲಿನ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಹಲವು ದಾಖಲೆಗಳನ್ನು ನಗರಾಭಿವೃದ್ಧಿ ಸಚಿವರು ಬೆಂಗಳೂರಿಗೆ ಕೊಂಡೊಯ್ದಿದ್ದಾರೆ ಎಂಬ ಆರೋಪವಿದ್ದರೆ. ಈ ನಡುವೆ ಮುಡಾ ಆಯುಕ್ತರ ಅಧಿಕೃತ ನಿವಾಸದಲ್ಲಿದ್ದ ಸಿಸಿ ಕ್ಯಾಮರಾ ಹಾಗೂ ಡಿವಿಆರ್ ಗಳು ನಾಪತ್ತೆಯಾಗಿರುವುದು ಪ್ರಕರಣದ ಕುರಿತ ಅನುಮಾನವನ್ನು ಮತ್ತಷ್ಟು ಹೆಚ್ಚುವಂತೆ ಮಾಡಿದೆ. ಆಯುಕ್ತರ ನಿವಾಸದಲ್ಲಿ ಒಟ್ಟು 8 ಸಿಸಿ ಕ್ಯಾಮೆರಾಗಳು ಹಾಗೂ ಡಿವಿಆರ್ ಅನ್ನು ಅಧಿಕಾರಿಗಳು ತೆಗೆದುಕೊಂಡು ಹೋಗಿರುವ ಗಂಭೀರ ಆರೋಪ ಕೇಳಿ ಬಂದಿದೆ. ಅಲ್ಲದೇ ಈ ಹಿಂದಿನ ಆಯುಕ್ತರೇ ಅವುಗಳನ್ನು ಕೊಂಡೊಯ್ದಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ.
ಮೈಸೂರಿನ ಕುಪೆಂಪುನಗರದ ಆದಿಚುಂಚನಗಿರಿ ರಸ್ತೆಯಲ್ಲಿ ಮುಡಾ ಆಯುಕ್ತರ ಸರ್ಕಾರಿ ನಿವಾಸವಿದ್ದು, ಇಲ್ಲಿದ್ದ ಸಿಸಿ ಕ್ಯಾಮೆರಾಗಳು ನಾಪತ್ತೆ ಆಗಿರುವುದು ಮುಡಾ ಹಗರಣಕ್ಕೆ ಮತ್ತೊಂದು ತಿರುವು ನೀಡಿದಂತಾಗಿದೆ. ಮುಡಾದ ಈ ಹಿಂದಿನ ಆಯುಕ್ತರು ಮುಡಾದ ಕಚೇರಿಗಿಂತ ಹೆಚ್ಚಾಗಿ ಇದೇ ನಿವಾಸದಲ್ಲಿ ಹೆಚ್ಚಿನ ಸಮಯ ಕೆಲಸ ಮಾಡತ್ತಿದ್ದರು ಎನ್ನಲಾಗಿದೆ. ಡೆವಲಪರ್ಗಳು ಸೇರಿದಂತೆ ಹಲವರನ್ನು ಮನೆಗೇ ಕರೆಸಿಕೊಂಡು ಚರ್ಚೆ ನಡೆಸುತ್ತಿದ್ದ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಮುಡಾದಲ್ಲಿ ನಡೆದಿದೆ ಎನ್ನಲಾಗಿರುವ 50:50 ಅನುಪಾತ, ಬದಲಿ ನಿವೇಶನ, ತುಂಡು ಭೂಮಿ ಸೇರಿದಂತೆ ಹಲವು ವ್ಯವಹಾರಗಳಿಗೆ ಆಯುಕ್ತರ ನಿವಾಸವೇ ಕೇಂದ್ರ ಸ್ಥಾನವಾಗಿತ್ತು ಎನ್ನಲಾಗಿದೆ. ಇದಕ್ಕೆಲ್ಲಾ ಮುಡಾ ಆಯುಕ್ತರ ನಿವಾಸದಲ್ಲಿದ್ದ ಸಿಸಿ ಕ್ಯಾಮರಾಗಳೇ ಪ್ರಮುಖವಾದ ಸಾಕ್ಷಿಯಾಗಿತ್ತು. ಆದರೆ ಇದೀಗ ಸಿಸಿ ಕ್ಯಾಮೆರಾಗಳ ಜೊತೆಗೆ ಡಿವಿಆರ್ ಸಹಿತ ಕೊಂಡೊಯ್ದಿರುವುದು ಇಡೀ ಪ್ರಕರಣದ ಅನುಮಾನ ಇನ್ನಷ್ಟು ಹೆಚ್ಚಾಗುವಂತೆ ಮಾಡಿದೆ.
ಮುಡಾ ಹಿಂದಿನ ಆಯುಕ್ತರಾಗಿದ್ದ ಜಿ ಟಿ ದಿನೇಶ್ಕುಮಾರ್ ಅವರ ಮೇಲೆ ಈಗಾಗಲೇ ಸಾಕಷ್ಟು ಆರೋಪಗಳು ಕೇಳಿ ಬಂದಿದ್ದು, ಇತ್ತೀಚೆಗೆ ಸರ್ಕಾರ ಸಹ ಇವರನ್ನು ಅಮಾನತು ಮಾಡಿತ್ತು. ಈ ಎಲ್ಲ ಬೆಳವಣಿಗೆಗಳ ನಡುವೆ ಆಯುಕ್ತರ ಕಚೇರಿಯ ಸಿಸಿ ಕ್ಯಾಮರಾಗಳು ಹಾಗೂ ಡಿವಿಆರ್ ನಾಪತ್ತೆ ಆಗಿರುವುದು ಹಲವು ಅನುಮಾನುಗಳಿಗೆ ಕಾರಣವಾಗಿದೆ. ಆದರೆ ಹಾಲಿ ಮುಡಾ ಆಯುಕ್ತ ರಘುನಂದನ್ ಮಾತ್ರ, ಆಯುಕ್ತರ ನಿವಾಸದಲ್ಲಿನ ಸಿಸಿ ಕ್ಯಾಮೆರಾಗಳ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ ಎಂದಿದ್ದಾರೆ. ಈ ಎಲ್ಲದರ ನಡುವೆ ಮುಡಾದ ಆಯುಕ್ತರ ಅಧಿಕೃತ ನಿವಾಸದ ನವೀಕರಣ ಕಾರ್ಯ ಪ್ರಗತಿಯಲ್ಲಿದೆ.