ಬಾಟಂ ಸುದ್ದಿ
– ಆದಿಚುಂಚನಗಿರಿ ಮಠದ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಹೇಳಿಕೆ
– ನಾಡಪ್ರಭು ಕೆಂಪೇಗೌಡ ಅಧ್ಯಯನ, ವಿಸ್ತರಣಾ ಕೇಂದ್ರ ಉದ್ಘಾಟನೆ
ಪ್ರತಿನಿಧಿ ವರದಿ ಮೈಸೂರು
ಇತಿಹಾಸ ತಿಳಿದರೆ ಮುಂದಿನ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಿದ್ದು, ಈ ನಿಟ್ಟಿನಲ್ಲಿ ನಾಡಪ್ರಭು ಕೆಂಪೇಗೌಡರು ನಾಡಿಗೆ ಮಾಡಿರುವ ಸೇವೆಯ ಋಣ ತೀರಿಸಲು ಬಗ್ಗೆ ತಿಳಿದುಕೊಳ್ಳಬೇಕಿದೆ ಎಂದು ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಠದ ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.
ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಇತಿಹಾಸ ಅಧ್ಯಯನ ಮತ್ತು ಸಂಶೋಧನಾ ವಿಭಾಗದಿಂದ ಮಂಗಳವಾರ ಮುಕ್ತ ವಿವಿ ಘಟಿಕೋತ್ಸವ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಾಡಪ್ರಭು ಕೆಂಪೇಗೌಡ ಅಧ್ಯಯನ ಮತ್ತು ವಿಸ್ತರಣಾ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇತಿಹಾಸ ಓದದವರು ಇತಿಹಾಸ ಸೃಷ್ಟಿಸಲಾರರು ಎಂಬ ಅಂಬೇಡ್ಕರ್ ಅವರ ಮಾತಿನಂತೆ ಕೆಂಪೇಗೌಡರ ಚರಿತ್ರೆ ಓದಬೇಕಿದೆ. ಕೆಂಪೇಗೌಡರ ಬಗ್ಗೆ ತಿಳಿದುಕೊಳ್ಳದೆ, ವಿವಿಧ ವರದಿಗಳ ಆಧಾರದ ಮೇಲೆ ಊಹೆಗೂ ನಿಲುಕುವುದಿಲ್ಲ ಹಾಗೂ ವ್ಯಕ್ತಿಯ ಪೂರ್ವಪರ ತಿಳಿಯದಿದ್ದರೆ ಉಡಾಫೆ ಉತ್ತರ ನಿರೀಕ್ಷಿಸಬೇಕಾಗುತ್ತದೆ. ಹೀಗಾಗಿ ಇತಿಹಾಸ ತಿಳಿದರೆ ಮಾತ್ರ ಮುಂದಿನ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ ಎಂದರು.
ಅಲ್ಲದೇ ದೇಶ ಹಾಗೂ ನಾಡಿಗೆ ಸೇವೆ ಮಾಡಬೇಕು ಎಂಬ ತುಡಿತ ಹೊಂದಿದ್ದ ಕೆಂಪೇಗೌಡರು, ಸಾಕಷ್ಟು ಸೇವೆಯನ್ನು ಮಾಡಿದ್ದು, ಅವರು ಕೇವಲ ಸಾಮಂತರಾಜ ಮಾತ್ರವಲ್ಲದೇ ಬದುಕಿನ್ನುದ್ದಕ್ಕೂ ಮುಂದಿನ ಸಮಾಜಕ್ಕೆ ಏನು ನೀಡಬೇಕು ಎಂಬ ಲೀಡರ್ ಆಗಿದ್ದರು. ಆದ್ದರಿಂದ ಮಾತೃ-ಪಿತೃವಿನ ಋಣ ತೀರಿಸಲು ಎಷ್ಟು ಕಷ್ಟವೋ, ಹಾಗೆಯೇ ಕೆಂಪೌಗೌಡರು ನಾಡಿಗೆ ಮಾಡಿರುವ ಸೇವೆಯ ಋಣ ತೀರಿಸುವುದು ಕೂಡ ಕಷ್ಟಕರವಾಗಿದೆ. ಈ ನಿಟ್ಟಿನಲ್ಲಿ ಕೆಂಪೇಗೌಡರ ತಿಳಿದುಕೊಂಡು, ಅವರ ಆದರ್ಶನವನ್ನು ಮುಂದಿನ ಪೀಳಿಗೆಗೆ ತಿಳಿಸಬೇಕಿದ್ದು, ಇದಕ್ಕಾಗಿ ಮುಕ್ತ ವಿವಿ ನಾಡಪ್ರಭು ಕೆಂಪೇಗೌಡರ ಅಧ್ಯಯನ ಮತ್ತು ವಿಸ್ತರಣಾ ಕೇಂದ್ರ ಆರಂಭಿಸಿರುವುದು ಶ್ಲಾಘನೀಯ ಎಂದು ಹೇಳಿದರು.
ಇತಿಹಾಸ ತಜ್ಞ ಡಾ.ತಲಕಾಡು ಚಿಕ್ಕರಂಗೇಗೌಡ ಮಾತನಾಡಿ, ಕೆಂಪೇಗೌಡ ಅಧ್ಯಯನ ಪೀಠದ ಅವಶ್ಯಕತೆ ಇದ್ದೀಯಾ ಎಂದು ಅನೇಕರು ಮಾತನಾಡುತ್ತಾರೆ. ಕೆಂಪೇಗೌಡರ ಬಗ್ಗೆ ಸಂಪೂರ್ಣ ವಿವರ ಇಲ್ಲದವರು ಇಲ್ಲಸಲದ್ದನ್ನು ಮಾತನಾಡುತ್ತಿದ್ದಾರೆ. ಕೆಂಪೇಗೌಡರ ತಂದೆ ಕೆಂಪನಂಜೇಗೌಡರಿಗೆ ಕೃಷ್ಣದೇವರಾಯ ಅಮರನಾಯಕ ಎಂಬ ಬಿರುದು ನೀಡಿರುವ ಬಗ್ಗೆ ಕಲ್ಯದ ಶಾಸನದಲ್ಲಿ ಉಲ್ಲೇಖವಿದೆ. ಕಲ್ಯ ಶಾಸನವನ್ನು ಅಧ್ಯಯನ ಮಾಡಿದರೆ ಇವುಗಳ ಬಗ್ಗೆ ದೊರೆಯುತ್ತದೆ. ಕೆಂಪೇಗೌಡರು ವಿಜಯನಗರ ಸಾಮ್ರಾಜ್ಯದ ಅಭಿವೃದ್ದಿಗೆ ಹೆಗಲುಕೊಟ್ಟ ಕೆಂಪೇಗೌಡರು, ಯಲಹಂಕ ಸಂಸ್ಥಾನವನ್ನು ಆಕ್ರಮಿಸುತ್ತಾರೆಂಬ ವಿಷಯ ತಿಳಿಯುತ್ತಿದ್ದಂತೆ ಅವರು ಯುದ್ಧದಲ್ಲಿ ಪಾಲ್ಗೊಂಡು ವೀರಮರಣ ಹೊಂದಿದರು. ಇಂತಹ ವಿಷಯಗಳ ಅಧ್ಯಯನಕ್ಕೆ ಸರ್ಕಾರ ಅನುದಾನ ನೀಡಬೇಕಿದ್ದು, ಇಂತಹ ಅಧ್ಯಯನಗಳಿಗೆ ಹೆಚ್ಚು ಒತ್ತು ನೀಡಿಬೇಕಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಕ್ತ ವಿವಿ ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ, ಕುಲಸಚಿವ ಪ್ರೊ.ಕೆ.ಬಿ. ಪ್ರವೀಣ, ನಿವೃತ್ತ ಪ್ರಾಧ್ಯಾಪಕ ಪ್ರೊ. ಎಂ. ಕೃಷ್ಣೇಗೌಡ, ನಾಡಪ್ರಭು ಕೆಂಪೇಗೌಡ ಅಧ್ಯಯನ ಮತ್ತು ವಿಸ್ತರಣಾ ಕೇಂದ್ರದ ಮುಖ್ಯಸ್ಥ ಡಾ. ಸಿ. ರಾಮೇಗೌಡ ಇತರರಿದ್ದರು.
====================
ಫೋಟೋ ಬರಲಿದೆ