ಮೈಸೂರು: ನಟ ದರ್ಶನ್ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿ 3 ತಿಂಗಳುಗಳಾಗಿದೆ. ಇತ್ತೀಚೆಗಷ್ಟೇ ನಟನ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆಯಾಗಿದ್ದು, ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಅವರ ಪಾತ್ರವನ್ನ ಪೋಲೀಸರು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಪತ್ನಿ ವಿಜಯಲಕ್ಷ್ಮಿ ಪತಿಯನ್ನು ಜೈಲಿನಿಂದ ಹೊರ ತರಲು ಹರಸಾಹಸ ಪಡುತ್ತಿದ್ದಾರೆ. ಕಾನೂನಾತ್ಮಕವಾಗಿ ಕೋರ್ಟ್, ಪೋಲೀಸ್ ಠಾಣೆಗಳಿಗೆ ಅಲೆದಾಡುತ್ತಿದ್ದರೆ, ಇನ್ನೊಂದೆಡೆ ದೇವರ ಮೊರೆ ಹೋಗಿ ಹಲವು ಶಕ್ತಿ ಪೀಠಗಳಿಗೆ ಭೇಟಿ ನೀಡಿ, ವಿಶೇಷ ಪೂಜೆ, ಯಾಗ ಮಾಡಿ ಪತಿಯನ್ನು ಹೊರತರುವ ಪ್ರಯತ್ನದಲ್ಲಿದ್ದಾರೆ.
ಮನೆಗೆ ಬೀಗ ಜಡಿದ ದರ್ಶನ್ ಕುಟುಂಬಸ್ಥರು
ಇತ್ತ ನಟ ದರ್ಶನ್ ಜೈಲು ಪಾಲಾದ ಬಳಿಕ ಮೈಸೂರಿನ ಸಿದ್ದಾರ್ಥನಗರದಲ್ಲಿರುವ ನಟ ದರ್ಶನ್ ಮನೆ ಬಳಿ ನೀರವ ಮೌನ ಆವರಿಸಿದೆ. ದರ್ಶನ್ ಕುಟುಂಬ ಸದಸ್ಯರು ಸಂಪೂರ್ಣ ಮೌನಕ್ಕೆ ಜಾರಿದ್ದಾರೆ. ನಟ ದರ್ಶನ್ ಅವರನ್ನು ಕೊಲೆ ಪ್ರಕರಣದಲ್ಲಿ ಮೈಸೂರಿನಿಂದಲೇ ಬಂಧಿಸಲಾಗಿತ್ತಾದರೂ, ಅವರ ತಾಯಿ ಎಲ್ಲಿಯೂ ಕೂಡ ಈ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ. ಅದಕ್ಕೂ ಹೆಚ್ಚಾಗಿ ಮನೆಯ ಮುಂಭಾಗದ ಗೇಟ್ ಗೆ ಬೀಗ ಹಾಕಿಕೊಂಡಿರುವ ದರ್ಶನ್ ಕುಟುಂಬಸ್ಥರು, ಮನೆಯಲ್ಲಿಯೇ ಇದ್ದರೂ ಯಾರಿಗೂ ದರ್ಶನ ನೀಡದೆ ಮನೆಯ ಒಳಗಡೆಯೇ ಉಳಿದಿದ್ದಾರೆ. ಮೈಸೂರಿನ ಸಿದ್ದಾರ್ಥನಗರದಲ್ಲಿರುವ ಮುಪಾ ನಿಲಯದಲ್ಲಿ ದರ್ಶನ್ ತಾಯಿ ಮೀನಾ ತೂಗುದೀಪ ಮತ್ತು ಮೊಮ್ಮಗ ಚಂದನ್ ವಾಸ್ತವ್ಯವಿದ್ದಾರೆ. ಆದರೆ ದರ್ಶನ್ ಆಪ್ತರು, ಸ್ನೇಹಿತರು ಮತ್ತು ಅಭಿಮಾನಿಗಳಿಂದ ಅಂತರ ಕಾಯ್ದುಕೊಂಡಿರುವ ಇವರು ಯಾರೊಡನೆಯು ಮಾತನಾಡುತ್ತಿಲ್ಲ. ದರ್ಶನ್ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆಯಾದ ಬಳಿಕವಂತು ಮನೆಯಿಂದ ಹೊರಬಾರದ ಇವರು, ಮನೆಯ ಗೇಟ್ ಗೆ ಬೀಗ ಜಡಿದು ನಮ್ಮ ಪಾಡಿಗೆ ನಮ್ಮನ್ನು ಬಿಟ್ಟು ಬಿಡಿ ಎನ್ನುತ್ತಿದ್ದಾರೆ.
ನಟ ದರ್ಶನ್ ಫಾರಂ ಹೌಸ್ ಬಳಿ ನೀರವ ಮೌನ
ಮೈಸೂರಿನ ಟಿ ನರಸೀಪುರ ಮುಖ್ಯ ರಸ್ತೆಯ ಮೇಗಳಾಪುರ ಗ್ರಾಮದ ಸಮೀಪದಲ್ಲಿರುವ ದರ್ಶನ್ ಒಡೆತನದ ತೂಗುದೀಪ ಫಾರಂ ಹೌಸ್ ಮೌನಕ್ಕೆ ಜಾರಿದೆ. ನಟ ದರ್ಶನ್ ಕಾಣದ ಪ್ರಾಣಿ-ಪಕ್ಷಿಗಳು ಸೊರಗಿ ಹೋಗಿವೆ. ಪ್ರತಿ ವಾರ ಫಾರಂ ಹೌಸ್ ಗೆ ಬರುತ್ತಿದ್ದ ನಟ ದರ್ಶನ್, ಪ್ರಾಣಿ-ಪಕ್ಷಿಗಳ ಆರೈಕೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿದ್ದರು. ಪ್ರಾಣಿಗಳೆಂದರೆ ದರ್ಶನ್ ಗೆ ಬಹಳ ಅಚ್ಚು ಮೆಚ್ಚು. ಆದರೀಗ ನಟ ದರ್ಶನ್ ಜೈಲು ಪಾಲಾಗಿದ್ದು ತನ್ನ ʼಒಡೆಯʼನನ್ನು ಕಾಣದ ಪ್ರಾಣಿ ಪಕ್ಷಿಗಳು ಸೊರಗಿವೆ. ಇವುಗಳ ಆರೈಕೆಯಲ್ಲಿ ತೊಡಗಿರುವ ಫಾರಂ ಹೌಸ್ ಕೆಲಸಗಾರರು ಫಾರಂ ನ ಪಕ್ಷಿಗಳಿಗೆ ಧಾನ್ಯ ಕೊಟ್ಟು ಸಲಹುತ್ತಿದ್ದಾರೆ.