ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಉದ್ಘಾಟನೆಗೆ ದಿನಗಣನೆ ಪ್ರಾರಂಭವಾಗಿದೆ. ದಸರಾ ಹಿನ್ನೆಲೆ ಗಜಪಡೆ ಅಂಬಾವಿಲಾಸ ಅರಮನೆ ಆವರಣದಲ್ಲಿ ಬೀಡು ಬಿಟ್ಟಿದ್ದು ಕಾವಾಡಿಗಳು, ಮಾವುತರು ಹಾಗೂ ಕುಟುಂಬದವರು ಕೂಡ ಅರಮನೆ ಆವರಣದಲ್ಲಿ ವಾಸ್ತವ್ಯ ಹೂಡಿದ್ದಾರೆ. ದಿನೇ ದಿನೇ ಅರಮನೆ ಸೇರಿದಂತೆ ಮೈಸೂರು ನಗರದ ಪ್ರಮುಖ ಸ್ಥಳಗಳು ದಸರಾ ಹಬ್ಬದ ಕಳೆ ಮೈಗೂಡಿಸಿಕೊಳ್ತಿದೆ. ಅರಮನೆ ಆವರಣದಲ್ಲಿ ದಸರಾ ಸಿದ್ಧತಾ ಕಾರ್ಯಗಳು ಭರದಿಂದ ಸಾಗಿದ್ದು, ಅಂಬಾವಿಲಾಸ ಅರಮನೆಗೆ ಸುಣ್ಣಬಣ್ಣ ಹೊಡೆಯುವ ಕಾರ್ಯ ಶುರುವಾಗಿದೆ. ಜಗತ್ಪ್ರಸಿದ್ಧ ಅರಮನೆ ಸೇರಿದಂತೆ ಅರಮನೆ ಆವರಣದಲ್ಲಿರುವ ದೇಗುಲಗಳು, ಗೋಪುರಗಳಿಗೆ ಸುಣ್ಣ ಬಣ್ಣ ಹೊಡೆಯುವ ಕಾರ್ಯ ಪ್ರಗತಿಯಲ್ಲಿದ್ದು, ಅರಮನೆಯ ಆವರಣದ ಅಂದ ಹೆಚ್ಚಿಸಲು ಸಿಬ್ಬಂದಿಗಳು ಶ್ರಮಿಸುತ್ತಿದ್ದಾರೆ.
ಇದೆಲ್ಲದರ ಮಧ್ಯದಲ್ಲಿ ದಸರಾ ಗಜಪಡೆ ಪೋಷಿಸುತ್ತಿರುವ ಮಾವುತರು, ಕಾವಾಡಿಗಳು ಹಾಗು ಕುಟುಂಬ ಸದಸ್ಯರಿಗೆ ಬುಧವಾರ ಉಚಿತ ಆರೋಗ್ಯ ತಪಾಸಣೆ ಶಿಬಿರ ಆಯೋಜನೆ ಮಾಡಲಾಗಿತ್ತು. ಅರಮನೆ ಆವರಣದಲ್ಲಿ ನಡೆದ ಆರೋಗ್ಯ ತಪಾಸಣೆ ಶಿಬಿರದಲ್ಲಿ ವಿವಿಧ ಆರೋಗ್ಯ ಪರೀಕ್ಷೆಗಳನ್ನ ನಡೆಸಲಾಯ್ತು.ಮೈಸೂರಿನ ನಾರಾಯಣ ಹೃದಯಾಲಯದ ನುರಿತ ಹಿರಿಯ ವೈದ್ಯರು ಶಿಬಿರದಲ್ಲಿ ಭಾಗವಹಿಸಿದ್ರು. ಆರೋಗ್ಯ ತಪಾಸಣೆ ಶಿಬಿರಕ್ಕೆ ಡಿಸಿಎಫ್ ಡಾ ಪ್ರಭುಗೌಡ ಚಾಲನೆ ನೀಡಿದ್ರು. ಆರೋಗ್ಯ ತಪಾಸಣೆ ಶಿಬಿರದಲ್ಲಿ ಭಾಗಿಯಾದ ಮಾವುತರು, ಕಾವಾಡಿಗಳು ಹಾಗು ಕುಟುಂಬಸ್ಥರು, ಬಿಪಿ, ಶುಗರ್, ಇಸಿಜಿ ಸೇರಿದಂತೆ ಇನ್ನಿತರ ಆರೋಗ್ಯ ಸಂಬಂಧಿ ತಪಾಸಣೆಗಳಿಗೆ ಒಳಪಟ್ಟರು.
ಅಲ್ಲದೆ ದಸರಾ ಗಜಪಡೆಯ ಮಾವುತರು, ಕಾವಾಡಿಗಳ ಮಕ್ಕಳಿಗಾಗಿ ತಾತ್ಕಾಲಿಕ ಶಾಲೆಯ ವ್ಯವಸ್ಥೆ ಮಾಡಲಾಗಿದೆ.ಮೈಸೂರು ಅರಮನೆ ಆವರಣದಲ್ಲಿ ತಲೆ ಎತ್ತಿರುವ ತಾತ್ಕಾಲಿಕ ಶಾಲೆಯಲ್ಲಿ ಈಗ ಪಾಠ ಪ್ರವಚನ ಜೋರಾಗಿ ನಡೀತಿದೆ.ಮಾವುತರು ಕಾವಾಡಿಗಳ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ತಾತ್ಕಾಲಿಕ ಶಾಲೆಯ ವ್ಯವಸ್ಥೆ ಕಲ್ಪಿಸಲಾಗಿದೆ.
ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ನಡೆಯುತ್ತಿರುವ ತಾತ್ಕಾಲಿಕ ಶಾಲೆಯಲ್ಲಿ ಮಾವುವರು ಹಾಗೂ ಕಾವಾಡಿಗಳ ಕುಟುಂಬದ ಇಪ್ಪತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಲಿಕೆಯಲ್ಲಿ ಭಾಗಿಯಾಗಿದ್ದಾರೆ.
ಸರ್ಕಾರಿ ಶಾಲೆಗಳ ಶಿಕ್ಷಕಿಯರಾದ ದಿವ್ಯಪ್ರಿಯದರ್ಶಿನಿ, ನೂರ್ ಫಾತಿಮ, ಮೌಸೀನ್ ತಾಜ್ ರಿಂದ ಮಕ್ಕಳಿಗೆ ದಿನನಿತ್ಯದ ಪಾಠ ಬೋಧಿಸಲಾಗುತ್ತಿದೆ.
ಇದೇ ವೇಳೆ ಕಂಜನ್ ಆನೆಯ ಜೊತೆ ಆಗಮಿಸಿರುವ ರಾಜು ಎಂಬ ವ್ಯಕ್ತಿ ಕೂಡ ಮಕ್ಕಳ ಜೊತೆ ಕಲಿಕೆಯಲ್ಲಿ ಭಾಗಿಯಾಗಿದ್ದಾರೆ. ಮಕ್ಕಳ ಜತೆ ಕುಳಿತು ವಿದ್ಯಾಭ್ಯಾಸ ಮಾಡ್ತಿದ್ದಾರೆ. ವಿಶೇಷವಾಗಿ ಮಕ್ಕಳು ಅರಮನೆ ಅಂಗಳದಲ್ಲಿ ಆಟ-ಪಾಠ ಎರಡರಲ್ಲೂ ಕಾಲಕಳೆಯುತ್ತಿದ್ದಾರೆ.