ಪ್ರತಿನಿಧಿ ವರದಿ ಮೈಸೂರು
ಮಾನಸಿಕ ಒತ್ತಡ ಕಡಿಮೆ ಮಾಡಲು ಸಂಗೀತ ಸಹಕಾರಿ ಎಂದು ಜಯದೇವ ಹೃದ್ರೋಗ ಆಸ್ಪತ್ರೆಯ ವೈದ್ಯ ಡಾ.ಕೆ.ಆರ್. ಮಂಜುನಾಥ್ ಹೇಳಿದರು.
ನಕ್ಷತ್ರ ಅಕಾಡೆಮಿ ಆಫ್ ಆರ್ಟ್ಸ್ ಮಲ್ಟಿ ಟ್ಯಾಲೆಂಟ್ ಕ್ರಿಯೇಟರ್ಸ್ ವತಿಯಿಂದ ಕುವೆಂಪುನಗರದ ನಕ್ಷತ್ರ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಸುಗಮ ಸಂಗೀತ ತರಬೇತಿ ಕಾರ್ಯಕ್ರಮದ ಉದ್ಘಾಟನೆ ಹಾಗೂ ಕಲಾವಿದರಿಗೆ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪ್ರಸ್ತುತ ಎಲ್ಲ ಕ್ಷೇತ್ರಗಳಲ್ಲೂ ಕೆಲಸದ ಒತ್ತಡವಿದ್ದು, ಆರೋಗ್ಯದ ದೃಷ್ಟಿಯಿಂದ ಇದನ್ನು ಕಡಿಮೆ ಮಾಡಿಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಸಂಗೀತ ಕೇಳಿದರೆ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಹಾಗೂ ಸಮಾಜದಲ್ಲಿ ಇತರರೊಂದಿಗೆ ಬೆರೆಯಲು ಅವಕಾಶ ಸಿಗುತ್ತದೆ. ಹೀಗಾಗಿ ಇಲ್ಲಿ ಗುಣಮಟ್ಟದ ತರಬೇತಿ ನೀಡಿ ಎಂದು ಸಲಹೆ ನೀಡಿದರು.
ಕರ್ನಾಟಕ ಪೊಲೀಸ್ ಅಕಾಡೆಮಿ ಡಿವೈಎಸ್ಪಿ ಕುಮಾರ್ ಮಾತನಾಡಿ, ಪೊಲೀಸರಿಗೆ ಒತ್ತಡ, ವೈಯಕ್ತಿಕ ಹಾಗೂ ಆರ್ಥಿಕ ನಿರ್ವಹಣೆ ತರಬೇತಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಪ್ರತಿಯೊಂದು ಕೆಲಸದಲ್ಲೂ ಒತ್ತಡ ಸಹಜವಾಗಿದ್ದು, ಸಂಗೀತ, ಪ್ರಕೃತಿ ವೀಕ್ಷಣೆ, ಪ್ರವಾಸ ಸೇರಿದಂತೆ ಬೇರೆ ಬೇರೆ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ ಒತ್ತಡದಿಂದ ಹೊರಬರಲು ಸಾಧ್ಯ ಎಂದ ಅವರು, ಸಂಗೀತ ತರಬೇತಿಯಲ್ಲಿ ಅಸಭ್ಯ ಗೀತೆಗಳನ್ನು ಕಲಿಸಬೇಡಿ. ಬದಲಿಗೆ ರೌದ್ರ, ಶೋಕ, ಶೃಂಗಾರ ಹೀಗೆ ಎಲ್ಲ ರೀತಿಯ ರಸಗಳಲ್ಲಿ ಹಾಡುವುದನ್ನು ಕಲಿಸಿ ಎಂದು ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಮಾತನಾಡಿ, ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ಎಲ್ಲ ರೀತಿಯ ಸಂಗೀತ ಚಟುವಟಿಕೆಗಳಿಗೆ ಪ್ರೋತ್ಸಾಹ ಸಿಗುತ್ತಿದೆ. ಇಂದು ಗಾಯಕರಿಗೆ ಹತ್ತಾರು ವೇದಿಕೆಗಳಲ್ಲಿ ಅವಕಾಶವಿದ್ದು, ಟಿವಿ ರಿಯಾಲಿಟಿ ಶೋಗಳಲ್ಲೂ ಕೂಡ ಹೆಸರು ಮಾಡಬಹುದು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಗಾಯಕರಾದ ಆಶಾ ಮಹದೇವ್, ಪ್ರೇಮಲತಾ, ಭಾರ್ಗವಿ, ಪ್ರಿಯಾ, ಡಾ. ಸೌಮ್ಯಾ, ಗೌರಿ ಒಸ್ಲಾಲ್, ಅಪೂರ್ವ, ಗುರುರಾಜ್, ಕುಮಾರಸ್ವಾಮಿ, ಆರ್. ಲಕ್ಷ್ಮಣ್, ಆದಿಲ್ ಪಾಷ, ನಾರಾಯಣಸ್ವಾಮಿ, ಪ್ರೇಮ್ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಮನೋಶಾಸ್ತ್ರಜ್ಞೆ ಡಾ.ರೇಖಾ ಮನಶಾಂತಿ, ಕೆಎಂಪಿಕೆ ಚಾರಿಟಬಲ್ ಟ್ರಸ್ಟಿನ ಅಧ್ಯಕ್ಷ ವಿಕ್ರಂ ಅಯ್ಯಂಗಾರ್, ಗಾಯಕ ಅಮ್ಮ ರಾಮಚಂದ್ರ, ಸ್ತ್ರೀರೋಗ ತಜ್ಞೆ ಡಾ.ರೇಖಾ ಅರುಣ್, ಎಂಎಂಕೆಆರ್ಎಸ್ಬಿ ಅಧ್ಯಕ್ಷೆ ಮೋಹನ ಮಾಧುರ್ಯ, ಶೋಭಾರಾಣಿ ಮೊದಲಾದವರು ಇದ್ದರು.