– ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ. ಮಹದೇವಪ್ಪ ಹೇಳಿಕೆ
– ದಸರಾ ಮಹೋತ್ಸವಕ್ಕೆ ಪ್ರಾಯೋಜಕತ್ವ ನೀಡಲು ಮನವಿ
ಪ್ರತಿನಿಧಿ ವರದಿ ಮೈಸೂರು
ದಸರಾ ಸಂಭ್ರಮದಲ್ಲಿ ಪ್ರಾಯೋಜಕತ್ವ ನೀಡುವ ಮೂಲಕ ತಮ್ಮ ವ್ಯಾಪಾರ, ವಹಿವಾಟು ವಿಸ್ತರಿಸುವ ಅವಕಾಶವನ್ನು ಸದುಪಯೋಗಿಸಿಕೊಳ್ಳಿ ಎಂದು ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು
ನಗರದ ಲಲಿತ ಮಹಲ್ ಪ್ಯಾಲೇಸ್ನಲ್ಲಿ ಬುಧವಾರ ನಡೆದ ದಸರಾ ಪ್ರಾಯೋಜಕರ ಸಭೆಯಲ್ಲಿ ಮಾತನಾಡಿದ ಅವರು, ದಸರಾ ಕಾರ್ಯಕ್ರಮಕ್ಕೆ ದೇಶವಿದೇಶದಿಂದ ಪ್ರವಾಸಿಗರು ಆಗಮಿಸಲಿದ್ದು, ತಮ್ಮ ಉತ್ಪನ್ನಗಳ, ಕಂಪನಿ, ಕೈಗಾರಿಕೆಗಳನ್ನು, ಜನರ ಬಳಿಗೆ ಕೊಂಡೊಯ್ಯಲು ಉತ್ತಮ ವೇದಿಕೆ ಇದಾಗಿದೆ. ಅಲ್ಲದೇ ವಿಜೃಂಭಣೆಯ ದಸರಾದಲ್ಲಿ ಪಾಲುದಾರರಾದ ಕೀರ್ತಿ ನಿಮ್ಮದಾಗಲಿದೆ. ಪ್ರಾಯೋಜಕತ್ವದಲ್ಲಿ ಜಂಬೂಸವಾರಿ, ಅಂಬಾರಿ, ಪ್ಲಾಟಿನಂ, ಗೋಲ್ಡನ್, ಸಿಲ್ವರ್ ಎಂಬ ವಿಭಾಗವಿದ್ದು, ಅಗತ್ಯ ಇರುವುದನ್ನು ತಾವು ಆಯ್ಕೆ ಮಾಡಿಕೊಳ್ಳಬಹುದು. ಅಲ್ಲದೆ ವಿವಿಧ ಕಾರ್ಯಕ್ರಮಗಳಲ್ಲಿ ಸ್ಥಳಾವಕಾಶದ ಅವಕಾಶತೆ ಇದ್ದು, ಅದನ್ನು ಬಳಸಿಕೊಳ್ಳಬಹುದಾಗಿದೆ. ಆದರೆ ಪ್ರಾಯೋಜಕತ್ವ ನೀಡುವ ವಿಚಾರದಲ್ಲಿ ಯಾವುದೇ ಒತ್ತಾಯವಿಲ್ಲ, ಆಸಕ್ತರು ಸ್ವಯಂಪ್ರೇರಿತವಾಗಿ ಮುಂದೆ ಬರಬಹುದು ಎಂದರು.
ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ ಮಾತನಾಡಿ, ಈ ಹಿಂದೆಯೂ ಪ್ರಾಯೋಜಕತ್ವ ನೀಡುವ ಮೂಲಕ ದಸರೆಯ ಯಶಸ್ಸಿಗೆ ಎಲ್ಲರೂ ಸಂಪೂರ್ಣ ಸಹಕಾರ ನೀಡಿದ್ದು, ಈ ಬಾರಿಯೂ ಸಹಕಾರ ಬಯಸುತ್ತೇವೆ. ತಮಗೆ ಅನುಕೂಲವಾಗುವಂತಹ ಪ್ರಾಯೋಜಕತ್ವವನ್ನು ತಾವು ಉಪಯೋಗಿಸಿಕೊಳ್ಳಬಹುದಾಗಿದ್ದು, ತಕ್ಷಣಕ್ಕೆ ತಿಳಿಸಲಾಗದಿದ್ದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲೂ ತಿಳಿಸಬಹುದು ಎಂದು ಹೇಳಿದರು.
ಪ್ರವಾಸೋದ್ಯಮ ಇಲಾಖೆ ಜಂಟಿ ನಿರ್ದೇಶಕಿ ಎಂ.ಕೆ. ಸವಿತಾ ಮಾತನಾಡಿ, ದಸರಾ ಮಹೋತ್ಸವದಲ್ಲಿ ಪ್ರಾಯೋಜಕತ್ವ ನೀಡುವ ಮೂಲಕ ಎಲ್ಲ ಕಾರ್ಯಗಳಲ್ಲಿ ತಮ್ಮ ಜಾಹೀರಾತುಗಳನ್ನು ಹಾಕಬಹುದು. ಜಂಬೂ ಸವಾರಿ ಪ್ರಾಯೋಜಕತ್ವದಲ್ಲಿ 2 ಕೋಟಿ, ಅಂಬಾರಿ ಪ್ರಾಯೋಜಕತ್ವದಲ್ಲಿ 1 ಕೋಟಿ, ಪ್ಲಾಟಿನಂ ಪ್ರಾಯೋಜಕತ್ವದಲ್ಲಿ 75 ಲಕ್ಷ, ಗೋಲ್ಡನ್ ಪ್ರಾಯೋಜಕತ್ವದಲ್ಲಿ 50 ಲಕ್ಷ, ಸಿಲ್ವರ್ ಪ್ರಾಯೋಜಕತ್ವದಲ್ಲಿ 25 ಲಕ್ಷ ಸ್ಪಾನ್ಸರ್ ನೀಡಲು ಅವಕಾಶ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ನಗರ ಪೊಲೀಸ್ ಆಯುಕ್ತೆ ಸೀಮಾಲಾಟ್ಕರ್, ಸಿಇಒ ಕೆ.ಎಂ.ಗಾಯತ್ರಿ, ಎಸ್ಪಿ ವಿಷ್ಣುವರ್ಧನ ಸೇರಿದಂತೆ ಉದ್ಯಮಿಗಳು, ಅಧಿಕಾರಿಗಳು ಇದ್ದರು.