ಎಚ್ ಡಿ ಕೋಟೆ: ಇಂದು ತಾರಕ ಅಚ್ಚುಕಟ್ಟು ಪ್ರದೇಶದ ರೈತರು ಪಟ್ಟಣದ ತಾರಕ ಕಛೇರಿಗೆ ಮುತ್ತಿಗೆ ಹಾಕಿ ಸಹಾಯಕ ಇಂಜಿನಿಯರ್ ರಾಮೇಗೌಡರೊಂದಿಗೆ ಮಾತಿನ ಚಕಮಕಿ ನಡೆಸಿದರು.
ಶಾಸಕರ ಅಧ್ಯಕ್ಷತೆಯಲ್ಲಿ ಆಗಸ್ಟ್ 21 ರಂದು ರೈತರು ಮತ್ತು ಅಧಿಕಾರಿಗಳೊಂದಿಗೆ ಸಭೆ ನಡೆಸಿ ತಕ್ಷಣವೇ ನಾಲೆಗಳಿಗೆ ನೀರು ಹರಿಸಿ ರೈತರ ಬೆಳೆಗಳಿಗೆ ಅನುಕೂಲ ಮಾಡಿ ಎಂದು ಶಾಸಕರು ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಅದರಂತೆ ಆಗಸ್ಟ್ 22 ರಂದು ನಾಲೆಗಳಿಗೆ ನೀರು ಹರಿಸಲಾಗಿದ್ದು, ಹನ್ನೆರಡು ದಿನ ಕಳೆದರೂ ಯರಹಳ್ಳಿ, ಜಕ್ಕಹಳ್ಳಿ , ತುಂಬಸೋಗೆ ಗ್ರಾಮಗಳಿಗೆ ನೀರು ಬಿಡದ ಅಧಿಕಾರಿಗಳೆ ನಿರ್ಲಕ್ಷ್ಯ ತೋರಿದ್ದಾರೆ. ನೀರು ಬರದ ಹಿನ್ನೆಲೆ ರೈತರು ನಾಟಿಗೆ ಸಿದ್ದ ಮಾಡಿದ್ದ ಭತ್ತ ಮೊಳಕೆ ಬಂದು ಹಾಳಗುತ್ತಿದ್ದು, ಇಂದು ಎಇಇ ರಾಮೇಗೌಡ ಅವರ ಮುಂದೆ ರೈತರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ನೀರನ್ನು ಕೊಡದಿದ್ದರೆ ವಿಷವನ್ನಾದರೂ ಕೊಡಿ ಪ್ರಾಣ ಬಿಡುತ್ತೇವೆ ಎಂದು ರೈತರು ಪಲಟ್ಟು ಹಿಡಿದು ಸ್ಥಳದಲ್ಲಿ ಕೆಲಕಾಲ ಕಛೇರಿಯ ಬಾಗಿಲನ್ನು ಹಾಕಿ ಧಿಕ್ಕಾರ ಕೂಗುತ್ತಾ ಪ್ರತಿಭಟನೆ ನಡೆಸಿದರು. ಕಡೆಗೂ ರೈತರ ಮನವೊಲಿಸುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದು, ಮೂರು ದಿನಗಳಲ್ಲಿ ನಾಲೆಗೆ ಸಮರ್ಪಕವಾಗಿ ನೀರನ್ನು ಹರಿಸುವುದಾಗಿ ಹೇಳಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ರೈತರು ಸರಿಯಾದ ಸಮಯದಲ್ಲಿ ನೀರು ಹರಿಸದಿದ್ದಲ್ಲಿ ತಾಲೂಕಿನಾದ್ಯಂತ ಉಗ್ರ ಪ್ರತಿಭಟನೆ ಮಾಡುವುದಾಗಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ವಿಷಯ ತಿಳಿದ ಪೋಲಿಸ್ ನವರು ಮಧ್ಯ ಪ್ರವೇಶಿಸಿ ರೈತರನ್ನು ಮನವಲಿಸಿ ಇನ್ನೆರಡು ದಿನದಲ್ಲಿ ನೀರು ಹರಿಸುವ ಭರವಸೆ ನೀಡಿದ ಮೇಲೆ ಪ್ರತಿಭಟನೆ ಕೈಬಿಡಲಾಯಿತು.