ಪ್ರತಿನಿಧಿ ವರದಿ ಮೈಸೂರು
ವಿಶ್ವವಿಖ್ಯಾತ ದಸರಾ ಆರಂಭಕ್ಕೆ ದಿನಗಣನೆ ಶುರುವಾಗಿದ್ದು, ಅರಮನೆ ನಗರ ಮೈಸೂರಿನಲ್ಲಿ ತಯಾರಿ ಭರದಿಂದ ಸಾಗುತ್ತಿದೆ. ಅದರಂತೆ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿರುವ ಕುಶಾಲತೋಪು ಸಿಡಿಸುವ ಫಿರಂಗಿ ಗಾಡಿಗಳಿಗೆ ಗುರುವಾರ ಅರಮನೆ ಅಂಗಳದಲ್ಲಿ ಪೂಜೆ ನೆರವೇರಿತು.
ದಸರಾ ಜಂಬೂಸವಾರಿ ಮೆರವಣಿಗೆಗೂ ಮುನ್ನ ನಾಡದೇವತೆ ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ಮಾಡುವ ಸಂದರ್ಭದಲ್ಲಿ 21 ಕುಶಾಲತೋಪು ಸಿಡಿಸುವುದು ಸಂಪ್ರದಾಯವಾಗಿದೆ. ಈ ಹಿನ್ನೆಲೆಯಲ್ಲಿ ಪ್ರತಿಬಾರಿ ದಸರಾ ಆರಂಭಕ್ಕೂ ಮುನ್ನ ದಸರಾ ಗಜಪಡೆ, ಅಶ್ವರೋಹಿ ಪಡೆಗಳಿಗೆ ಪೂರ್ವಭಾವಿಯಾಗಿ ಕುಶಾಲತೋಪು ಸಿಡಿಸುವ ತಾಲೀಮಿಗೂ ನೀಡಲಾಗುತ್ತದೆ. ಹೀಗಾಗಿ ಗುರುವಾರ ಅರಮನೆ ಆವರಣದಲ್ಲಿ ಫಿರಂಗಿ ಗಾಡಿಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಅರಮನೆಯ ಅಂಬಾವಿಲಾಸ ಆವರಣದಲ್ಲಿರುವ ಆನೆ ಬಾಗಿಲಿನ ಬಳಿಯಲ್ಲಿ 11 ಫಿರಂಗಿ ಗಾಡಿಗಳನ್ನು ಸ್ವಚ್ಛ ಮಾಡಿ, ಬಳಿಕ ಸಾಲಾಗಿ ನಿಲ್ಲಿಸಿ, ವಿಭೂತಿ, ಕುಂಕುಮ, ಅರಿಶಿಣ ಹಚ್ಚಿ, ಮಾವಿನ ತೋರಣ, ಬಾಳೆ ಕಂದುಗಳನ್ನು ಕಟ್ಟಿ, ಚಾಮುಂಡೇಶ್ವರಿಯ ಫೋಟೋ ಇಟ್ಟು ಪೂಜೆ ಮಾಡಲಾಯಿತು. ಅರ್ಚಕ ಪ್ರಹ್ಲಾದ್ ರಾವ್ ಫಿರಂಗಿ ಪೂಜೆ ನೆರವೇರಿಸಿದರು.
ಜಂಬೂಸವಾರಿ ದಿನದಂದು ಚಿನ್ನದ ಅಂಬಾರಿಯಲ್ಲಿ ಇರುವ ನಾಡದೇವತೆ ಚಾಮುಂಡಿ ತಾಯಿಗೆ ಪುಷ್ಪಾರ್ಚನೆ ಮಾಡುವ ಸಂದರ್ಭದಲ್ಲಿ ಫಿರಂಗಿಗಳ ಮೂಲಕ 21 ಕುಶಾಲತೋಪು ಸಿಡಿಸಲಾಗುತ್ತದೆ. ಅರಮನೆಯ ಪಕ್ಕದ ಮಾರಮ್ಮ ದೇವಾಲಯದ ಪಕ್ಕದಲ್ಲಿರುವ ಪಾರ್ಕಿಂಗ್ ಪ್ರದೇಶದಲ್ಲಿ ಈ ಆಚರಣೆ ನಡೆಯುತ್ತದೆ. ಜೊತೆಗೆ ಗಜಪಡೆಯು ಜನರ ಶಬ್ಧಕ್ಕೆ ಹೆದರದಂತೆ ದಸರಾ ಸಮಯದಲ್ಲಿ ಮೂರು ಬಾರಿ ವಸ್ತು ಪ್ರದರ್ಶನದ ಆವರಣದಲ್ಲಿ ಗಜಪಡೆಗೆ ಸಿಡಿಮದ್ದು ತಾಲೀಮು ಕೈಗೊಳ್ಳಲು ಈ ಫಿರಂಗಿಗಳನ್ನು ಉಪಯೋಗಿಸಲಾಗುತ್ತದೆ. ಅಲ್ಲದೆ, ಪ್ರತಿನಿತ್ಯ ಅರಮನೆಯ ಒಳಗೆ ಸಿಬ್ಬಂದಿ ತಾಲೀಮು ನಡೆಸುತ್ತಾರೆ.
ಚಾಮುಂಡೇಶ್ವರಿ ಗೌರವ ಸಲ್ಲಿಸಲು ಜಂಬೂಸವಾರಿ ದಿನ 21 ಕುಶಾಲತೋಪುಗಳನ್ನು ಸಿಡಿಸುತ್ತಾರೆ. ಅದರ ಅಂಗವಾಗಿ ಫಿರಂಗಿ ಗಾಡಿಗಳಿಗೆ ಪೂಜೆ ಸಲ್ಲಿಸಲಾಗಿದ್ದು, ಮೊದಲು ಗಣಪತಿ ಹಾಗೂ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿದ ಬಳಿಕ ಫಿರಂಗಿಗಳ ಪೂಜೆ ನಡೆಯಿತು ಎಂದು ಅರ್ಚಕ ಪ್ರಹ್ಲಾದ್ ರಾವ್ ತಿಳಿಸಿದರು.
ಈ ವೇಳೆ ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್, ಡಿಸಿಪಿ ಮುತ್ತುರಾಜ್ ಸೇರಿದಂತೆ ಅರಮನೆಯ ಭದ್ರತಾ ಅಧಿಕಾರಿಗಳು ಭಾಗವಹಿಸಿದ್ದರು.
===================
ಕೋಟ್
ದಸರಾ ಸಂದರ್ಭದಲ್ಲಿ ಜಂಬೂಸವಾರಿ ಪುಷ್ಪಾರ್ಚನೆಗೂ ಮುನ್ನ 21 ಕುಶಲತೋಪುಗಳನ್ನು ಸಿಡಿಸಲು ಹಾಗೂ ಬನ್ನಿಮಂಟಪದಲ್ಲಿ ಕುಶಾಲತೋಪು ಸಿಡಿಸಲು ಫಿರಂಗಿಗಳನ್ನು ಬಳಸುತ್ತೇವೆ. ಇದಕ್ಕಾಗಿ ಪ್ರತಿ ಬಾರಿಯೂ ಸಿಬ್ಬಂದಿ ತರಬೇತಿ ನಡೆಸಲಿದ್ದು, ಫಿರಂಗಿಗಳಿಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸಲಾಯಿತು.
– ಸೀಮಾ ಲಾಟ್ಕರ್, ನಗರ ಪೊಲೀಸ್ ಆಯುಕ್ತೆ.