ಮೈಸೂರು: ಗಣೇಶ ಹಬ್ಬದ ದಿನ ಮೈಸೂರಿನಲ್ಲೂ ಗಲಭೆ ಸೃಷ್ಟಿಸುವ ಹುನ್ನಾರವನ್ನು ಆರ್ ಎಸ್ ಎಸ್, ಬಿಜೆಪಿ, ಜೆಡಿಎಸ್ ನವರು ಮಾಡಿದ್ದರು. ಅದನ್ನು ವಿಫಲಗೊಳಿಸುವಲ್ಲಿ ಕಾಂಗ್ರೆಸ್ ಯಶಸ್ವಿ ಆಗಿದೆ. ಆದರೆ ನಾಗಮಂಗಲದಲ್ಲಿ ಗಲಭೆ ಮಾಡಿ ಸ್ವಲ್ಪ ಸಕ್ಸಸ್ ಆಗಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಂ ಲಕ್ಷಣ್ ಗಂಭೀರ ಆರೋಪ ಮಾಡಿದ್ದಾರೆ.
ಮೊದಲು ಮೈಸೂರಿನಲ್ಲಿ ಕೋಮು ಗಲಭೆ ಮಾಡಲು ಬಿಜೆಪಿ, ಆರ್ ಎಸ್ ಎಸ್, ಜೆಡಿಎಸ್ ಪ್ಲಾನ್ ಮಾಡಿದ್ದರು, ಅವರ ಪ್ಲಾನ್ ಮೈಸೂರಿನಲ್ಲಿ ಫೆಲ್ಯೂರ್ ಆಗಿದೆ. ಆದರೆ ನಾಗಮಂಗಲದಲ್ಲಿ ನಡೆದಿರುವ ಗಲಭೆಯೂ ಬಿಜೆಪಿ, ಜೆಡಿಎಸ್, ಆರ್ ಎಸ್ ಎಸ್ ನವರು ಪೂರ್ವನಿಯೋಜಿತ ಕೃತ್ಯವಾಗಿದೆ. ನಾಗಮಂಗಲ ಗಲಭೆ ಕೃತ್ಯದಲ್ಲಿ ಭಾಗಿಯಾದವರು ಬಹುತೇಕ ಯುವಕರು. 20 ಮಂದಿ ಹಿಂದೂಗಳು, 30 ಮಂದಿ ಮುಸ್ಲಿಮರು ಭಾಗಿಯಾಗಿದ್ದಾರೆ. ಇದು ಬಿಜೆಪಿ, ಜೆಡಿಎಸ್, ಆರ್ ಎಸ್ ಎಸ್ ನವರು ಮಾಡಿದ ಪೂರ್ವನಿಯೋಜಿತ ಕೃತ್ಯವಾಗಿದೆ.ಇವರು ಪ್ಲಾನ್ ಮಾಡಿರುವ ದಾಖಲೆಗಳನ್ನು ಗೃಹ ಸಚಿವರು ಬಿಡುಗಡೆ ಮಾಡುತ್ತಾರೆ. ಗಲಭೆಯಾದ ಮೇಲೆ ನಾಗಮಂಗಲಕ್ಕೆ ಹೋಗಿ ಪ್ರಚೋದನಕಾರಿ ಹೇಳಿಕೆಗಳನ್ನು ಕೊಟ್ಟಿದ್ದಾರೆ. ವಿಜಯೇಂದ್ರ, ಅಶೋಕ್ ಅವರು ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡು ತುಚ್ಚವಾಗಿ ಬೈಯ್ದಿದ್ದಾರೆ. ಇವರ ವಿರುದ್ಧ ಗೂಂಡಾ ಕಾಯಿದೆಯಡಿ ಪ್ರಕರಣ ದಾಖಲು ಮಾಡಬೇಕು ಎಂದು ಆಗ್ರಹಿಸಿದರು.