ಮೈಸೂರು: ರಾಜ್ಯ ಸರ್ಕಾರ ಮುಸ್ಲೀಂ ಪುಂಡರ ಮೇಲೆ ನಿಯಂತ್ರಣ ಹೇರಬೇಕಿದ್ದು, ನಿಯಂತ್ರಣ ಹೇರದಿದ್ದರೇ ನಮ್ಮ ರಕ್ಷಣೆಯ ಜವಾಬ್ದಾರಿ ನಮಗೆ ಗೊತ್ತಿದೆ ಎಂದು ರಾಜ್ಯ ಸರ್ಕಾರಕ್ಕೆ ಮಾಜಿ ಸಂಸದ ಪ್ರತಾಪ ಸಿಂಹ ಎಚ್ಚರಿಕೆ ನೀಡಿದ್ದಾರೆ.
ಮೈಸೂರಿನಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಗಮಂಗಲ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮಾಯಕ ಹಿಂದೂಗಳ ಬಂಧನ ನಡೆದರೆ ನಾವು ಮತ್ತೆ ನಾಗಮಂಗಲಕ್ಕೆ ಬರುತ್ತೇವೆ ಹಾಗೂ ಪೊಲೀಸ್ ಠಾಣೆಗೂ ಬರುತ್ತೇವೆ. ಸರ್ಕಾರ ಗಲಾಟೆ ಶುರು ಮಾಡಿದವರ ಮೇಲೆ ಕಠಿಣ ಕ್ರಮವನ್ನು ಕೈಗೊಳ್ಳಬೇಕಿದೆ. ಗಲಾಟೆ ಶುರು ಮಾಡಿದವರನ್ನು ಬಿಟ್ಟು ಅದಕ್ಕೆ ಪ್ರತಿಕ್ರಿಯೆ ಕೊಟ್ಟವರ ಮೇಲೆ ಕ್ರಮ ಕೈಗೊಂಡರೆ ಅದರ ಅರ್ಥ ಏನು? ಎಂದು ಪ್ರಶ್ನಿಸಿದ ಅವರು, ಪೊಲೀಸರಿಗೆ ಸರ್ಕಾರ ಸ್ವತಂತ್ರವೇ ನೀಡಿಲ್ಲ. ತಮ್ಮ ತಾಲಿಬಾನ್ ಮನಸ್ಥಿತಿಯಂತೆ ಪೊಲೀಸರ ಕರ್ತವ್ಯ ನಿಯಂತ್ರಿಸುತ್ತಿದ್ದಾರೆ. ಸರ್ಕಾರ ಹೇಗೆ ಇರುತ್ತದೊ ಹಾಗೇ ಇಲಾಖೆಯೂ ಇರುತ್ತದೆ. ಆಳುವವನು ಮೊದಲು ನೆಟ್ಟಗಿರಬೇಕು. ಅವರೇ ಮುಸ್ಲೀಂ ಓಲೈಕೆಗೆ ಸರ್ಕಾರ ಮುಂದಾದರೆ ಇಂತಹ ಸ್ಥಿತಿ ಬರುತ್ತದೆ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.
ಗಣೇಶ ಮೆರವಣಿಗೆಳಲ್ಲಿ ನಾವು ಕೂಡ ಕೈಯಲ್ಲಿ ಪೆಟ್ರೋಲ್ ಬಾಂಬ್ ಹಾಗೂ ತಲ್ವಾರ್ ಹಿಡಿಯಬೇಕಾಗುತ್ತೆ
ರಾಜ್ಯ ಸರ್ಕಾರ ಮೊದಲು ಮುಸ್ಲಿಮರ ಕೈಯಲ್ಲಿರುವ ಪೆಟ್ರೋಲ್ ಬಾಂಬ್, ತಲ್ವಾರ್ಗಳನ್ನ ಕಿತ್ತುಕೊಳ್ಳಬೇಕಿದೆ. ಇಲ್ಲದಿದ್ದರೆ ಮುಂದೆ ನಡೆಯುವ ಗಣೇಶ ಮೆರವಣಿಗೆಳಲ್ಲಿ ನಾವು ಕೂಡ ಕೈಯಲ್ಲಿ ಪೆಟ್ರೋಲ್ ಬಾಂಬ್ ಹಾಗೂ ತಲ್ವಾರ್ಗಳನ್ನ ಹಿಡಿದುಕೊಳ್ಳಬೇಕಾಗುತ್ತದೆ. ಈ ರೀತಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟರೆ ಅದಕ್ಕೆ ಸರ್ಕಾರವೇ ನೇರ ಹೊಣೆಯಾಗುತ್ತದೆ. ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಅದ್ದೂರಿಯಾಗಿ ಗಣೇಶ ಮೆರವಣಿಗೆ ನಡೆಯುತ್ತದೆ. ಆದ್ದರಿಂದ ರಾಜ್ಯ ಸರ್ಕಾರ ಮುಸ್ಲೀಂ ಪುಂಡರ ಮೇಲೆ ನಿಯಂತ್ರಣ ಹೇರಬೇಕಿದ್ದು, ನಿಯಂತ್ರಣ ಹೇರದಿದ್ದರೇ ನಮ್ಮ ರಕ್ಷಣೆಯ ಜವಾಬ್ದಾರಿ ನಮಗೆ ಗೊತ್ತಿದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಆರ್ಎಸ್ಎಸ್ ಸಮನ್ವಯ ಸಭೆ ವಿಚಾರವಾಗಿ ಮಾತನಾಡಿದ ಅವರು, ನಾನು ಸಭೆಯಲ್ಲಿ ಯಾವ ಅಸಮಾಧಾನ ವ್ಯಕ್ತಪಡಿಸಿಲ್ಲ. ಸಭೆಯ ಕೊನೆಯ ಬೆಂಚ್ನಲ್ಲಿ ಕುಳಿತು ಅವರು ಹೇಳಿದ್ದನ್ನೆಲ್ಲಾ ಕೇಳಿ ಎದ್ದು ಬಂದಿದ್ದೇನೆ. ಆರ್ಎಸ್ಎಸ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸುವಷ್ಟು ನಾನು ದೊಡ್ಡವಲ್ಲ. ನಾನು ಆರ್ಎಸ್ಎಸ್ನಿಂದಲೇ ಬೆಳೆದವನಾಗಿದ್ದು, ನನ್ನ ಜ್ಞಾನರ್ಜನೆಯಲ್ಲಿ ಆರ್ಎಸ್ಎಸ್ ಪಾತ್ರ ದೊಡ್ಡದಿದೆ, ಹೀಗಿರುವಾಗಿ ಅವರ ಮೇಲೆ ನಾನೇಕೆ ಅಸಮಾಧಾನ ವ್ಯಕ್ತಪಡಿಸಲಿ ಎಂದರು.
ಮಹಿಷಾ ದಸರಾ ನಡೆಸುವವರು ಅವರ ಮನೆಗಳಲ್ಲಿ ನಡೆಸಲಿ
ಮಹಿಷಾ ದಸರಾ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ನಾನು ಎಂಪಿಯಾಗಿದ್ದರು, ಆಗದಿದ್ದರೂ ತಾಯಿ ಚಾಮುಂಡಿಗೆ ಅವಮಾನವಾಗುವುದಕ್ಕೆ ಬಿಡುವುದಿಲ್ಲ. ಬೆಟ್ಟದಲ್ಲಿ ಮಹಿಷಾ ದಸರಾ ನಡೆಸಲು ಬಿಡುವುದಿಲ್ಲ. ಯಾರ ನಿಲುವುಗಳು ಏನೇ ಇರಲಿ. ನನ್ನ ನಿಲ್ಲುವು ಮಾತ್ರ ಯಾವತ್ತಿಗೂ ಒಂದೇ ಆಗಿದೆ. ಮಹಿಷಾ ದಸರಾ ನಡೆಸುವವರು ಅವರ ಮನೆಗಳಲ್ಲಿ ನಡೆಸಲಿ. ನಮಗೆ ಮಹಿಷನಂಥ ಮಕ್ಕಳೇ ಹುಟ್ಟಲ್ಲಿ ಎಂದು ದಿನವೂ ಪೂಜೆ ಮಾಡಲಿ. ಅದಕ್ಕೆ ನಮ್ಮ ವಿರೋಧವಿಲ್ಲ ಎಂದು ಹೇಳಿದರು.
ಸಿಎಂ ತಲೆದಂಡ ಖಚಿತ
ವಾಲ್ಮೀಕಿ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ತಲೆದಂಡ ಖಚಿತ ಎಂದು ಪ್ರತಾಪ್ ಸಿಂಹ ಭವಿಷ್ಯ ನುಡಿದರು. ಮುಡಾ ಹಗರಣ ವಿಚಾರ ಕೋರ್ಟ್ನಲ್ಲಿದೆ. ಆ ಕೇಸ್ ವಿಚಾರ ಏನೇ ಆಗಲಿ ಅದು ಬೇರೆ ವಿಚಾರ. ಆದರೆ ವಾಲ್ಮೀಕಿ ಹಗರಣದಲ್ಲಿ ಸಿಎಂ ತಲೆದಂಡ ನಿಶ್ಚಿತ. ಅರ್ಥಿಕ ಹಗರಣ ಆದಾಗ ಅದಕ್ಕೆ ಅರ್ಥಿಕ ಸಚಿವರೆ ಹೊಣೆಗಾರರು. 88 ಕೋಟಿ ಅವ್ಯವಹಾರ ಆಗಿದೆ ಎಂದು ಮುಖ್ಯಮಂತ್ರಿಗಳೇ ಒಪ್ಪಿಕೊಂಡಿದ್ದಾರೆ. ವಾಲ್ಮೀಕಿ ನಿಗಮದ ದುಡ್ಡಲ್ಲಿ ಬಳ್ಳಾರಿ ಲೋಕಸಭಾ ಚುನಾವಣೆ ಮಾಡಲಾಗಿದ್ದು, ಈ ಹಣವನ್ನ ಹೆಂಡ ಖರೀದಿಗೆ ಬಳಸಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ರಾಜೀನಾಮೆ ನಿಶ್ಚಿತ ಎಂದ ಅವರು, ಮುಡಾ ವಿಚಾರದಲ್ಲಿ ನಾನು ಮೊದಲೇ ಸೈಟ್ ವಾಪಾಸ್ ಕೊಡಿ ಅಂತಾ ಹೇಳಿದ್ದೆ, ನನ್ನ ಮಾತು ಸಿಎಂ ಕೇಳಲಿಲ್ಲ. ಈಗ ಮುಂಚಿತವಾಗಿಯೆ ರಾಜೀನಾಮೆ ಕೊಡಿ ಅಂದರೆ ನನ್ನಂಥ ಸಣ್ಣವನ ಮಾತು ಅವರು ಕೇಳುತ್ತಾರಾ? ಎಂದು ಪ್ರಶ್ನಿಸಿದರು.