ಪ್ರತಿನಿಧಿ ವರದಿ ಮೈಸೂರು
ಮೈಸೂರಿನ ಕೆ.ಆರ್.ಆಸ್ಪತ್ರೆ ವೈದ್ಯರು ದೇಶದಲ್ಲೇ ಅಪರೂಪ ಎನಿಸಿರುವ ಬಲಭಾಗದ ಯಕೃತ್ ಶಸ್ತ್ರ ಚಿಕಿತ್ಸೆ ನಡೆಸುವ ಮೂಲಕ ಗಮನ ಸೆಳೆದಿದ್ದಾರೆ.
ಲಿವರ್ ಕ್ಯಾನ್ಸರ್ನಿಂದ ಬಳಲುತ್ತಿದ್ದ 72 ವರ್ಷದ ವೃದ್ಧನಿಗೆ ಬಲಭಾಗದ ಯಕೃತ್ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ್ದು, ಶಸ್ತ್ರಚಿಕಿತ್ಸೆ ನಡೆಸಿದ ಕೇವಲ ಎರಡು ವಾರದಲ್ಲಿ ರೋಗಿಯು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ಮೂಲದ ವೃದ್ಧನ ಯಕೃತ್ನ ಅರ್ಧಭಾಗ ಕತ್ತರಿಸಿ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ್ದು, ರೋಗಿಯ ಆರೋಗ್ಯದಲ್ಲಿ ವ್ಯತ್ಯಾಸ ಆಗದಂತೆ ಎಚ್ಚರವಹಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಕೆ.ಆರ್.ಆಸ್ಪತ್ರೆಯ ಕ್ಯಾನ್ಸರ್ ಶಸ್ತ್ರ ಚಿಕಿತ್ಸಕ ಡಾ. ನವೀನ್ ಗೌಡ, 72 ವರ್ಷ ವಯೋವೃದ್ಧರಾಗಿರುವ ಕಾರಣ ಶಸ್ತ್ರಚಿಕಿತ್ಸೆ ಮಾಡುವುದು ಸವಾಲಾಗಿತ್ತು. ಯಕೃತ್ ಭಾಗದ ಶೇ.60 ಭಾಗ ತೆಗೆದು ಆಪರೇಷನ್ ಮಾಡಿ ಜೀವ ಉಳಿಸುವುದು ಕಷ್ಟಸಾಧ್ಯ. ಆದರೆ ನಮ್ಮ ಸಿಬ್ಬಂದಿಯ ಕಠಿಣ ಶ್ರಮದಿಂದ ಇದು ಸಾಧ್ಯವಾಗಿದ್ದು, ಯಾವುದೇ ಅತ್ಯಾಧುನಿಕ ಉಪಕರಣಗಳಿಲ್ಲದೆ ವೈದ್ಯರ ಶ್ರಮದಿಂದ ರೋಗಿ ಕೇವಲ ಎರಡು ವಾರದಲ್ಲಿಯೇ ಪೂರ್ಣ ಗುಣಮುಖರಾಗಿದ್ದಾರೆ ಎಂದರು.
ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ ತಂಡದಲ್ಲಿ ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಮುಖ್ಯಸ್ಥ ಡಾ.ಎಸ್.ಚಂದ್ರಶೇಖರ್, ಸರ್ಜಿಕಲ್ ಗ್ಯಾಸ್ಟ್ರೋ ವಿಭಾಗದ ಡಾ.ಶ್ರೀವತ್ಸ, ಅರವಳಿಕೆ ವಿಭಾಗದ ಡಾ.ವಿ.ವೈ.ಶ್ರೀನಿವಾಸ್, ಡಾ.ದೀಪಾ, ಡಾ.ಪೂಲನ್ ಇದ್ದರು.
====================