ಶಾಸಕ ಮುನಿರತ್ನ ಬಂಧನ ವಿಚಾರದಲ್ಲಿ ಸರ್ಕಾರ ದ್ವಿಮುಖ ನೀತಿ ಅನುಸರಿಸಿದೆ. ಇದೇ ರೀತಿಯ ಆರೋಪಕ್ಕೆ ಗುರಿಯಾಗಿರುವ ಕಾಂಗ್ರೆಸ್ ಶಾಸಕ ಚೆನ್ನಾರೆಡ್ಡಿಯನ್ನು ಇದುವರೆಗೂ ಬಂಧಿಸಿಲ್ಲ.
ಚೆನ್ನಾರೆಡ್ಡಿ ಗೃಹ ಸಚಿವರ ನಿವಾಸದಲ್ಲೇ ಓಡಾಡಿಕೊಂಡಿದ್ದಾರೆ ಎಂದು ಬಿಜೆಪಿ ಶಾಸಕ ಶ್ರೀವತ್ಸ ಹೇಳಿದ್ದಾರೆ.
ಮೈಸೂರಿನ ಅಗ್ರಹಾರದ ನೂರೊಂದು ಗಣಪತಿ ದೇಗುಲದ ಬಳಿ ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮುನಿರತ್ನ ಬಂಧನ ಮಾಡಿ ಸರ್ಕಾರ ದ್ವಿಮುಖ ನೀತಿ ಅನುಸರಿಸಿದೆ. ಇದೇ ರೀತಿಯ ಆರೋಪಕ್ಕೆ ಗುರಿಯಾಗಿರುವ ಕಾಂಗ್ರೆಸ್ ಶಾಸಕ ಚೆನ್ನಾರೆಡ್ಡಿ ಗೃಹ ಸಚಿವರ ನಿವಾಸದಲ್ಲೇ ಓಡಾಡಿಕೊಂಡಿದ್ದಾರೆ ಇದುವರೆಗೂ ಬಂಧಿಸಿಲ್ಲ.ಅವರ ವಿರುದ್ಧ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಆದರೆ ಮುನಿರತ್ನರನ್ನು ತರಾತುರಿಯಲ್ಲಿ ಬಂಧಿಸಲಾಗಿದೆ. ಬಿಡುಗಡೆಯಾಗಿರುವ ಆಡಿಯೋದಲ್ಲಿನ ಧ್ವನಿ ನನ್ನದಲ್ಲ ಎಂದು ಮುನಿರತ್ನ ಹೇಳಿದ್ದಾರೆ. ಹಾಗಾಗಿ ಎಫ್ಎಸ್ಎಲ್ ವರದಿ ಬರುವವರೆಗೂ ಕಾಯಬೇಕಿತ್ತು. ಒಂದು ವೇಳೆ ಮುನಿರತ್ನ ಎರಡು ಸಮುದಾಯಗಳನ್ನು ಗುರಿಯಾಗಿಸಿಕೊಂಡು ಅವಾಚ್ಯ ಶಬ್ದ ಬಳಸಿ ಟೀಕಿಸಿರುವುದು ಸತ್ಯಾಂಶದಿಂದ ಕೂಡಿದ್ದರೇ ಖಂಡಿತವಾಗಿಯೂ ನಾವು ಒಪ್ಪುವುದಿಲ್ಲ ಎಂದರು.
ಇದೇ ವೇಳೆ ಮೈಸೂರಿನಲ್ಲಿ ಬಾಂಗ್ಲಾ ದೇಶಿಯರು ಅಕ್ರಮವಾಗಿ ನೆಲೆಸಿದ್ದಾರೆ ಎಂಬ ಸ್ಪೋಟಕ ಹೇಳಿಕೆ ನೀಡಿದ್ದಾರೆ ಶಾಸಕ ಶ್ರೀವತ್ಸ. ಕಳೆದ ತಿಂಗಳು ಬೆಂಗಳೂರಿನಿಂದ ಬಸ್ ನಲ್ಲಿ ಬರುವಾಗ ಏಳು ಮಂದಿ ಬಾಂಗ್ಲಾದೇಶಿಯರು ಇದ್ದರು. ಅವರ ಬಳಿ ಎರಡು ಗುರುತಿನ ಚೀಟಿಗಳು ಇದ್ದವು. ನಾವು ಬಸ್ಸನ್ನು ನೇರವಾಗಿ ಲಷ್ಕರ್ ಪೊಲೀಸ್ ಠಾಣೆಗೆ ಕರೆತಂದೆವು. ಆಗ ಪೊಲೀಸರು ಏಳು ಮಂದಿಯನ್ನು ವಶಕ್ಕೆ ಪಡೆದುಕೊಂಡು ಮುಂದಿನ ಕ್ರಮ ಕೈಗೊಂಡರು. ಮೈಸೂರಿನಲ್ಲಿ ಅಕ್ರಮವಾಗಿ ಬಾಂಗ್ಲಾದೇಶೀಯರು ನೆಲೆಸಿರುವುದಕ್ಕೆ ಇದು ಸಾಕ್ಷಿಯಾಗಿದೆ. ಪೊಲೀಸ್ ಇಲಾಖೆ ಈ ಬಗ್ಗೆ ಎಚ್ಚರಿಕೆ ವಹಿಸಬೇಕು ಹಾಗೂ ಅಕ್ರಮವಾಗಿ ನೆಲೆಸಿರುವ ವಿದೇಶಿಗರನ್ನು ಪತ್ತೆ ಹಚ್ಚಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಬಿಜೆಪಿ ಸದಸ್ಯತ್ವ ಅಭಿಯಾನ ವೇಳೆ ಬಿಜೆಪಿ ನಗರಾಧ್ಯಕ್ಷ ಎಲ್ ನಾಗೇಂದ್ರ, ಮಾಜಿ ಮೇಯರ್ ಶಿವಕುಮಾರ್ ಸೇರಿದಂತೆ ಸ್ಥಳೀಯ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಭಾಗಿಯಾಗಿದ್ದರು.