ಎಫ್ ಎಸ್ ಎಲ್ ವರದಿ ಬರುವ ಮುನ್ನವೇ ಮುನಿರತ್ನರನ್ನು ಬಂಧಿಸಿದ್ದು ಏಕೆ? ಶಾಸಕ ಮುನಿರತ್ನ ಆಡಿಯೋ ಪ್ರಕರಣದ ಹಿಂದೆ ಟೂಲ್ ಕಿಟ್ ಕೆಲಸ ಮಾಡಿದೆ, ಹನಮಂತರಾಯಪ್ಪ ಆಡಿಯೋದಿಂದ ಇದು ಸಾಭೀತಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ ಟಿ ರವಿ ಮೈಸೂರಿನಲ್ಲಿ ಗಂಭೀರ ಆರೋಪ ಮಾಡಿದ್ದಾರೆ.
ಕಾಂಗ್ರೆಸ್ ನವರು ತಮ್ಮ ಪಕ್ಷದವರಿಗೆ ಒಂದು ನ್ಯಾಯ, ಬಿಜೆಪಿಗೆ ಒಂದು ನ್ಯಾಯ ಎನ್ನುವ ನೀತಿ ಅನುಸರಿಸುತ್ತಿದ್ದಾರೆ. ಕಾಂಗ್ರೆಸ್ ಶಾಸಕ ಚೆನ್ನರೆಡ್ಡಿ ಮೇಲೂ ಅಟ್ರಾಸಿಟಿ ಪ್ರಕರಣ ದಾಖಲಾಗಿದೆ ಆದರೆ ಆತನನ್ನು ಬಂಧಿಸುವ ಬದಲು ಸಿಎಂ ತಮ್ಮ ಮನೆಯಲ್ಲಿ ಬಿರಿಯಾನಿ ಊಟ ಹಾಕಿಸಿದ್ದಾರೆ. ಅಲ್ಲದೆ ಕೃಷಿ ಸಚಿವ ಚೆಲುವರಾಯಸ್ವಾಮಿ, ನಾಗೇಂದ್ರ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರ ವಿರುದ್ಧ ದೂರು ದಾಖಲಾಗಿವೆ.
ಯಾರನ್ನು ಬಂಧಿಸುವ ಕೆಲಸ ಮಾಡಿಲ್ಲ. ಮುನಿರತ್ನ ರನ್ನು ಎಫ್ಐಆರ್ ದಾಖಲಾದ ದಿನವೇ ಬಂಧಿಸಿರುವುದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ ಎಂದಿದ್ದಾರೆ.
ಚಿಕ್ಕಮಗಳೂರಿನಲ್ಲಿ ಪ್ಯಾಲಿಸ್ತೇನ್ ಬಾವುಟ ಹಾರಿಸಿದ ವಿಚಾರವಾಗಿ ಮಾತನಾಡಿ, ಮಲೆನಾಡು ಭಯೋತ್ಪಾದಕರ ಸ್ಲೀಪರ್ ಸೆಲ್ ಗಳ ತಾಣವಾಗುತ್ತಿದೆ. ಭಯೋತ್ಪಾದಕ ಕೃತ್ಯ ಎಸಗಲು ಇಲ್ಲಿ ತರಬೇತಿ ನೀಡಲಾಗುತ್ತಿದೆ ಎಂದು ಸ್ಪೋಟಕ ಹೇಳಿಕೆ ನೀಡಿದ್ದಾರೆ. ಈ ಹಿಂದೆ ಕೊಪ್ಪದಲ್ಲಿ ಯಾಸಿನ್ ಭಟ್ಕಳ್ ನೇತೃತ್ವದಲ್ಲಿ ಭಯೋತ್ಪಾದಕ ತರಬೇತಿ ಶಿಬಿರ ನಡೆಸಲಾಗುತ್ತಿತ್ತು. ಅದನ್ನು ಪತ್ತೆ ಹಚ್ಚಿದ್ದು ಭಜರಂಗ ದಳ. ಇದು ದೇಶಕ್ಕೆ ಅಪಾಯಕಾರಿ. ಇದರ ಹಿಂದಿನ ಜಾಲವನ್ನು ತನಿಖೆಯಿಂದ ಪತ್ತೆ ಹಚ್ಚಬೇಕು ಆದರೆ ಆರೋಪಿಗಳನ್ನು ಬಿಟ್ಟು ಕಳುಹಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಗಳೂರಿನ ಬಿ ಸಿ ರೋಡ್ ನಲ್ಲಿ ಹಿಂದುಗಳಿಗೆ ಸವಾಲು ಹಾಕಿರುವ ಪ್ರಕರಣ ಕುರಿತು ಇದು ಇಡೀ ಭಾರತ ದೇಶಕ್ಕೆ ಹಾಕಿರುವ ಸವಾಲು. ಯುದ್ಧವನ್ನು ನಾವು ಯುದ್ಧವಾಗಿಯೇ ಸ್ವೀಕರಿಸಿ ಉತ್ತರ ಕೊಡುತ್ತೇವೆ.
ಹಿಂದೆ ನಮ್ಮ ಪೂರ್ವಜರು ಕತ್ತಿ ತೋರಿಸಿದಾಗ ಕತ್ತಿಯಿಂದಲೇ ಉತ್ತರ ಕೊಟ್ಟಿದ್ದರು. ಯುದ್ಧಕ್ಕೆ ಸವಾಲು ಹಾಕಿದಾಗ ಯುದ್ಧದ ಮೂಲಕವೇ ಗೆಲ್ಲಬೇಕು. ಸಲಹೆ ಎಲ್ಲಾ ಕೆಲಸ ಮಾಡುವುದಿಲ್ಲ.ನಾವು ಸಹ ಕತ್ತಿಯಿಂದಲೇ ಉತ್ತರ ಕೊಡುತ್ತೇವೆ. ಇಲ್ಲವಾದರೆ ನಮ್ಮ ದೇಶ ಬಾಂಗ್ಲಾದೇಶ, ಪಾಕಿಸ್ತಾನದಂತೆ ಆಗಿ ಹೋಗುತ್ತದೆ.ಅದಕ್ಕೆ ನಾವು ಅವಕಾಶ ಕೊಡುವುದಿಲ್ಲ ಎಚ್ಚರಿಕೆ ನೀಡಿದರು.
ಮೈಸೂರಿನಲ್ಲಿ ಸಿ ಟಿ ರವಿ ಹೇಳಿಕೆ.
ನಾಗಮಂಗಲ ಗಲಭೆ ಪ್ರಕರಣ ಮಾತನಾಡಿ, ಪ್ರಕರಣದ ಹಿಂದೆ ಹೊರಗಿನ ಶಕ್ತಿ ಕೆಲಸ ಮಾಡಿದೆ ಎಂಬ ಅನುಮಾನ ನನಗೆ ಇತ್ತು. ಕೇರಳದವರ ಹೆಸರು ಬಹಿರಂಗವಾಗಿರುವುದರಿಂದ ಅದು ಸಾಬೀತಾಗಿದೆ. ಪ್ರಕರಣದ ಸಂಪೂರ್ಣ ತನಿಖೆಯನ್ನು ಎನ್ಐಎ ಗೆ ವಹಿಸಬೇಕು ಎಂದು ಆಗ್ರಹಿಸಿದ್ದಾರೆ. ಮಂಡ್ಯದಲ್ಲಿ ಶೇಕಡ 90ರಷ್ಟು ಹಿಂದುಗಳಿದ್ದಾರೆ ನೀನು ಎಂದರೆ, ನಿಮ್ಮಪ್ಪ ಎನ್ನುವ ಜನ ಇದ್ದಾರೆ. ಅಂತಹ ಕಡೆ ಈ ರೀತಿ ಕೃತ್ಯ ಮಾಡಿರುವುದು ಪೂರ್ವ ನಿಯೋಜಿತ. ಗಲಾಟೆಗಿಂತ ಹೆಚ್ಚಾಗಿ ಭಯದ ವಾತಾವರಣ ನಿರ್ಮಾಣ ಮಾಡಬೇಕು, ಆತಂಕ ಸೃಷ್ಟಿ ಮಾಡಬೇಕು, ಗಲಭೆ ಮಾಡಿ ನಷ್ಟ ಉಂಟು ಮಾಡಬೇಕು ಎಂಬುದು ಅವರ ಉದ್ದೇಶವಾಗಿದೆ. ಪ್ರಕರಣದಲ್ಲಿ ಪೊಲೀಸರು ಅಸಹಾಯಕರ ರೀತಿ ನಿಂತಿದ್ದು, ವಿಡಿಯೋ ಸಾಕ್ಷಿ ಸಹ ಲಭ್ಯ ಆಗಿದೆ. ಪೊಲೀಸರಿಗೆ ಮುಸ್ಲಿಮರ ವಿರುದ್ದ ಕ್ರಮ ಕೈಗೊಳ್ಳಬೇಡಿ ಎಂದು ಸೂಚನೆ ನೀಡಲಾಗಿದೆ.
ಆ ಸೂಚನೆ ನೀಡಿದವರು ಯಾರು ಎನ್ನೋದು ಬಹಿರಂಗವಾಗಬೇಕಿದ್ದು, ಈ ಎಲ್ಲಾ ಕಾರಣಕ್ಕೆ ನಾಗಮಂಗಲ ಗಲಭೆ ಪ್ರಕರಣದ ಸಂಪೂರ್ಣ ತನಿಖೆಯನ್ನು ಎನ್ಐಎಗೆ ವಹಿಸಬೇಕು ಎಂದು ಆಗ್ರಹಿಸಿದ್ದಾರೆ.
ನಾವು ದ್ವೇಷದ ರಾಜಕಾರಣ ಮಾಡುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳುತ್ತಾರೆ ಆದರೆ ಸಿದ್ದರಾಮಯ್ಯ ನುಡಿದಂತೆ ಯಾವತ್ತು ನಡೆದುಕೊಂಡಿಲ್ಲ, ಬದಲಾಗಿ ಅವರು ಹೇಳಿದ್ದನ್ನೆಲ್ಲಾ ಉಲ್ಟಾ ಮಾಡೋರು.
ಅವರ ನಡೆಗು ನುಡಿಗು ಸಾಕಷ್ಟು ವ್ಯತ್ಯಾಸ ಇದೆ. ಹಾಗಾಗಿ ಸಿದ್ದರಾಮಯ್ಯ ಮಾತನ್ನು ಯಾರು ಕೇಳುವುದಿಲ್ಲ. ಸಿದ್ದರಾಮಯ್ಯ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.