ವಿಶ್ವಪ್ರಸಿದ್ಧ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ ಗಜಪಡೆಗೆ ಬುಧವಾರದಿಂದ ಮರದ ಅಂಬಾರಿ ಹೊರುವ ತಾಲೀಮು ಆರಂಭವಾಗಿದ್ದು, ಮೊದಲ ದಿನವೇ ಕ್ಯಾಪ್ಟನ್ ಅಭಿಮನ್ಯು ರಾಜ ಬೀದಿಯಲ್ಲಿ ಗಜಗಾಂಭೀರ್ಯದಿಂದ ಹೆಜ್ಜೆಹಾಕುವ ಮೂಲಕ ಗಮನ ಸೆಳೆದ.
ದಸರೆ ಹಿನ್ನೆಲೆಯಲ್ಲಿ ಕಾಡಿನಿಂದ ನಾಡಿಗೆ ಆಗಮಿಸಿರುವ ಗಜಪಡೆಗೆ ಈಗಾಗಲೇ ಹಲವು ಹಂತಗಳಲ್ಲಿ ತಾಲೀಮು ನೀಡಲಾಗಿದೆ. ಇದರ ನಡುವೆ ಸಂಜೆ ೫.೫೦ಕ್ಕೆ ಅರಮನೆ ಅಂಗಳದಿಂದ ಮರದ ಅಂಬಾರಿ ಹೊತ್ತ ಅಭಿಮನ್ಯು, ಹಿರಣ್ಯಾ ಮತ್ತು ಲಕ್ಷ್ಮೀಯೊಂದಿಗೆ ಬನ್ನಿಮಂಟಪದತ್ತ ಸಾಗಿದ. ಈ ಸಂದರ್ಭದಲ್ಲಿ ಮಂಹೇಂದ್ರ, ಧನಂಜಯ, ಭೀಮ, ಪ್ರಶಾಂತ, ಗೋಪಿ, ಕಂಜನ್, ಸುಗ್ರೀವ, ರೋಹಿತ, ಏಕಲವ್ಯ, ದೊಡ್ಡಹರವೆ ಲಕ್ಷ್ಮಿ, ವರಲಕ್ಷ್ಮಿ ಆನೆಗಳು ಸಹ ಗಜಪಡೆ ಸಾರಥಿಗೆ ಸಾಥ್ ನೀಡಿದವು. ಜಂಬೂಸವಾರಿ ಮೆರವಣಿಗೆ ಸಾಗುವ ರಾಜ ಬೀದಿಯಲ್ಲಿ ಅಭಿಮನ್ಯು ತನ್ನ ಪಡೆಯೊಂದಿಗೆ ಗಾಂಭೀರ್ಯದಿಂದ ಹೆಜ್ಜೆ ಹಾಕುತ್ತಾ ಸಾಗಿದರೆ, ದಾರಿಯುದ್ದಕ್ಕೂ ಸಾರ್ವಜನಿಕರು ಕೈಮುಗಿದು ನಮಸ್ಕರಿಸಿದರೆ, ಹೂ ಮತ್ತು ಹಣ್ಣು ವ್ಯಾಪಾರಿಗಳು ಆನೆಗಳಿಗೆ ನೀಡಿ ತಮ್ಮ ಭಕ್ತಿ ಮೆರೆದರು.
ಗಜಪಡೆಗೆ ವಿಶೇಷ ಪೂಜೆ:
ಮರದ ಅಂಬಾರಿ ತಾಲೀಮು ಹಿನ್ನೆಲೆ ಸಂಜೆ ೪ಕ್ಕೆ ಅರಮನೆ ಅಂಗಳದಲ್ಲಿನ ಕೋಡಿ ಸೋಮೇಶ್ವರ ದೇವಾಲಯ ಅಭಿಮನ್ಯುವಿನ ಹೆಗಲಿಗೆ ಗಾದಿ ಮತ್ತು ನಮ್ದ ಬಿಗಿದು, ರಾಜವಂಶಸ್ಥರು ವಾಸಿಸುವ ಖಾಸಗಿ ಅರಮನೆಯ ಮುಂಭಾಗಲ್ಲಿರುವ ಅಂಬಾರಿ ಕಟ್ಟುವ ಜಾಗಕ್ಕೆ ಕರೆತರಲಾಯಿತು. ಬಳಿಕ ಅರ್ಚಕ ಪ್ರಹ್ಲಾದ್ ರಾವ್ ಅವರು ಅಭಿಮನ್ಯು ನೇತೃತ್ವದ ಗಜಪಡೆ ಹಾಗೂ ಮರದ ಅಂಬಾರಿಗೆ ಪೂಜೆ ನೆರವೇರಿಸಿದರು. ಮೊದಲಿಗೆ ಎಲ್ಲಾ ಆನೆಗಳಿಗೂ ತೀರ್ಥ ಪ್ರೋಕ್ಷಣೆ ಮಾಡಿದ ಅವರು, ಹೂ ಮುಡಿಸಿ, ಅರಿಶಿನಿ, ಕುಂಕುಮ ಮತ್ತು ಗಂಧ ಹಚ್ಚಿ, ೪.೪೦ರಿಂದ ೫ಗಂಟೆಯವರೆಗೆ ಪೂಜೆ ಸಲ್ಲಿಸಿದರು. ಬಳಿಕ ಎಲ್ಲಾ ಆನೆಗಳಿಗೂ ಪಂಚಫಲ, ಕಬ್ಬು, ಬೆಲ್ಲ ನೀಡಲಾಯಿತು.
ನಂತರ ಅಂಬಾರಿ ಕಟ್ಟುವ ಸ್ಥಳದ ಬಳಿಗೆ ಬಂದ ಅಭಿಮನ್ಯವಿಗೆ ೫.೧೫ರಿಂದ ೫.೪೦ರವರೆಗೆ ಅಂಬಾರಿ ಕಟ್ಟುವ ಕಾರ್ಯ ನಡೆಯಿತು. ಮರದ ಅಂಬಾರಿಯನ್ನು ಹೊತ್ತ ಅಭಿಮನ್ಯು ರಾಜವಂಶ್ಥರ ಖಾಸಗಿ ಅಮರನೆ ಎದುರು ನಿಂತು ನಮಿಸಿ, ತಾಲೀಮು ಆರಂಭಿಸಲಾಯಿತು. ಹಿರಣ್ಯಾ ಮತ್ತು ಲಕ್ಷ್ಮಿಯೊಂದಿಗೆ ೨೮೦ ಕೆಜಿ ತೂಕದ ಮರದ ಅಂಬಾರಿ ಹಾಗೂ ಗಾದಿ, ನಮ್ದ ಮತ್ತು ಮರಳಿನ ಮೂಟೆ ಸೇರಿ ೭೫೦ ಕೆಜಿ ಭಾರ ಹೊತ್ತು ಅರಮನೆಯಿಂದ ಬನ್ನಿ ಮಂಟಪದವರೆಗೆ ಸಾಗಿದ. ಬಳಿಕ ಅಲ್ಲಿಂದ ವಾಪಾಸ್ ಅರಮನೆಗೆ ಯಾವ ಆಯಾಸವಿಲ್ಲದೇ ತಾಲೀಮು ನಡೆಸಿ ಯಶಸ್ವಿಯಾದ.
ಮರದ ಅಂಬಾರಿ ತಾಲೀಮಿನ ಸಂದರ್ಭದಲ್ಲಿ ಡಿಸಿಎಫ್ ಡಾ.ಐ.ಬಿ. ಪ್ರಭುಗೌಡ, ಎಸಿಪಿ ಚಂದ್ರಶೇಖರ್, ವೈದ್ಯ ಮುಜೀಬ್, ಆರ್ಎಫ್ಒ ಸಂತೋಷ್ ಇತರರಿದ್ದರು.