ಸುಪ್ರೀಂಕೋರ್ಟ್ಗೆ ಸಲ್ಲಿಸಿದ ವರದಿ ಬಗ್ಗೆ ಕಾವೇರಿಸೇನೆ ರವಿ ಚಂಗಪ್ಪ ಆಕ್ಷೇಪ
ಪ್ರತಿನಿಧಿ ವರದಿ ಮಡಿಕೇರಿ
ಮಡಿಕೇರಿ ಪೂರ್ವ ಮೀಸಲು ಅರಣ್ಯ ಪ್ರದೇಶಕ್ಕೆ ಸಂಬಂಧಿಸಿದ್ದಂತೆ ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್) ಭಾಸ್ಕರ್ ಸುಪ್ರೀಂಕೋರ್ಟ್ಗೆ ಸತ್ಯಾಂಶ ಮರೆಮಾಚಿ ಪ್ರಮಾಣ ಪತ್ರ ಸಲ್ಲಿಸಿದ್ದಾರೆಂದು ಕಾವೇರಿಸೇನೆ ಜಿಲ್ಲಾ ಸಂಚಾಲಕ ಕಿಮ್ಮುಡೀರ ರವಿ ಚಂಗಪ್ಪ ಆಕ್ಷೇಪ ವ್ಯಕ್ತ ಪಡಿಸಿದ್ದಾರೆ.
ಸುಪ್ರೀಂಕೋರ್ಟ್ನಲ್ಲಿ ಕಾವೇರಿಸೇನೆ ಹೂಡಿರುವ ದಾವೆಗೆ ಸಂಬಂಧಿಸಿದ್ದಂತೆ ನ್ಯಾಯಾಲಯದ ಆದೇಶದನ್ವಯ ಜಂಟಿ ಸರ್ವೇ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ಪ್ರಭಾವಿಗಳನ್ನು ರಕ್ಷಿಸುವ ಉದ್ದೇಶದಿಂದ ಡಿಸಿಎಫ್ ಪ್ರಮಾಣ ಪತ್ರ ಸಲ್ಲಿಸಿದ್ದಾರೆಂದು ಅತೃಪ್ತಿ ವ್ಯಕ್ತ ಪಡಿಸಿದ್ದಾರೆ. ೭-೨-೧೯೨೨ ರ ನೋಟೀಫೀಕೇಶನ್ಗೆ ಸಂಬಂಧಿಸಿದ್ದಂತೆ ವಾಸ್ತವಕ್ಕೆ ದೂರವಾದ ಮಾಹಿತಿ ನೀಡಲಾಗಿದೆ ಎಂದು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.
ಮಡಿಕೇರಿ ಪೂರ್ವ ಮೀಸಲು ಅರಣ್ಯ ಪ್ರದೇಶದ ಒತ್ತುವರಿಗೆ ಸಂಬಂಧಿಸಿದ್ದಂತೆ ಮಡಿಕೇರಿ ವಿಭಾಗದ ಡಿಸಿಎಫ್ ೨೭-೦೪-೧೯೭೮ ರಲ್ಲಿ ಸಲ್ಲಿಸಿದ ವರದಿಯನ್ನಿಟ್ಟುಕೊಂಡು ನ್ಯಾಯಾಲಯದಲ್ಲಿ ದಾವೆ ಹೂಡಲಾಗಿದೆ. ೧೯೭೮ರ ವರದಿಯಲ್ಲಿ ೬೮ ಜನರು ಮಡಿಕೇರಿ ಪೂರ್ವ ಮೀಸಲು ಅರಣ್ಯ ಪ್ರದೇಶ ಒತ್ತುವರಿ ಮಾಡಿಕೊಂಡಿರುವುದನ್ನು ಸ್ಪಷ್ಟವಾಗಿ ಉಲ್ಲೇಖಿಸಲಾಗಿತ್ತು. ೦.೦೨ ಎಕರೆ ಯಿಂದ ೦.೭೯ ಎಕರೆಯಷ್ಟು ಜಾಗ ಒತ್ತುವರಿ ಮಾಡಿಕೊಂಡಿದ್ದಾರೆ. ಅಧಿಕೃತ ನಕ್ಷೆ ಇಟ್ಟುಕೊಂಡು ಕಂದಾಯ ಹಾಗೂ ಅರಣ್ಯ ಇಲಾಖೆಯವರು ಜಂಟಿ ಸರ್ವೇ ನಡೆಸಿದ್ದರು. ಆದರೆ, ಹಾಲಿ ಡಿಸಿಎಫ್ ಈ ವರದಿಯನ್ನು ಮರೆಮಾಚಿದ್ದಾರೆಂದು ದೂರಿದ್ದಾರೆ.
ಕರ್ಣಂಗೇರಿ ಗ್ರಾಮ ವ್ಯಾಪ್ತಿಗೆ ಸೇರಿದ ಸರ್ವೇ ನಂ.೨೮೯/೧ ರಲ್ಲಿನ ೫೪.೩೦ ಎಕರೆ ಹಾಗೂ ಸರ್ವೇ ನಂ.೨೮೯/೨ ರ ೦.೮೦ ಎಕರೆ ಜಾಗ ಒತ್ತುವರಿಗೆ ಸಂಬಂಧಿಸಿದ್ದಂತೆ ದಾವೆ ಹೂಡಲಾಗಿದೆ. ಸರ್ವೇ ನಂ.೨೮೯/೭ ೫೦ ಸೆಂಟ್ ಅರಣ್ಯ ಜಾಗ ಲಕ್ಷ್ಮಣ್, ಸರ್ವೇ ನಂ.೨೮೯/೨ ರಲ್ಲಿನ ೦.೭೯ ಎಕರೆ ಜಾಗ ಅರಣ್ಯ ಇಲಾಖೆ ಹಾಗೂ ಸರ್ವೇ ನಂ.೨೮೯/೩ ರಲ್ಲಿ ಗೌಡ ಸಮಾಜ ಹಾಗೂ ಗೌಡ ವಿದ್ಯಾಭಿವೃದ್ಧಿ ಸಂಘ ಇದೆ. ಅರಣ್ಯ ಪ್ರದೇಶವನ್ನು ಡಿ ನೋಟೀಫಿಕೇಶನ್ ಮಾಡಿರುವುದಕ್ಕೆ ಸಂಬಂಧಿಸಿದ್ದಂತೆ ಅಧಿಕೃತ ದಾಖಲೆಗಳಿಲ್ಲ. ೨೦೦೯-೧೦ನೇ ಸಾಲಿನಲ್ಲಿ ಸರ್ವೇ ನಂ.೨೮೯/೭ನಲ್ಲಿನ ೨೦ ಸೆಂಟ್ ಜಾಗವನ್ನು ಕೆ.ಪಿ.ವಿಠಲ ಅವರ ಹೆಸರಿನಿಂದ ಕೆ.ಜಿ.ಬೋಪಯ್ಯ ಹೆಸರಿಗೆ ವರ್ಗಾವಣೆ ಮಾಡಲಾಗಿದೆ.
ಕರ್ನಾಟಕ ಅರಣ್ಯ ಇಲಾಖೆ ೨೭-೦೪-೧೯೭೮ ರಂದು ಬಹಿರಂಗ ಪಡಿಸಿದ ಒತ್ತುವರಿದಾರರ ಪಟ್ಟಿಯಲ್ಲಿ ಸರ್ವೇ ನಂಬರ್ ೨೮೯/೭ ರಲ್ಲಿನ ಲಕ್ಷ್ಮಣ್ ಹಾಗೂ ಸರ್ವೇ ನಂ.೨೮೯/೨ ರಲ್ಲಿನ ಗೌಡ ಎಜುಕೇಷನ್ ಸೊಸೈಟಿ ಹೆಸರಿನಲ್ಲಿರುವ ೦.೭೯ ಎಕರೆ ಜಾಗ ಕೂಡ ಇದೆ. ಸರ್ವೇ ನಂ.೨೮೯/೨, ೨೮೯/೩ ರಲ್ಲಿರುವ ಜಾಗ ಮಡಿಕೇರಿ ಪೂರ್ವ ಮೀಸಲು ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಇಲ್ಲ ಎಂದು ಪ್ರಮಾಣ ಪತ್ರ ಸಲ್ಲಿಸಿರುವುದು ಸರಿಯಲ್ಲ. ಅಧಿಕೃತ ದಾಖಲೆ ಇಟ್ಟುಕೊಂಡು ಈ ಪ್ರಮಾಣ ಪತ್ರ ಸಲ್ಲಿಸಿಲ್ಲ ಎಂದು ದೂರಲಾಗಿದೆ.
ಅರಣ್ಯ ಇಲಾಖೆಯ ಉನ್ನತಾಧಿಕಾರಿಯಾಗಿರುವ ತಾವು ಮಡಿಕೇರಿ ಪೂರ್ವ ಮೀಸಲು ಅರಣ್ಯ ಪ್ರದೇಶಕ್ಕೆ ಸಂಬಂಧಿಸಿದ್ದಂತೆ ಸರ್ವೇ ಆಫ್ ಇಂಡಿಯಾದಿಂದ ಮೂಲ ಸ್ಕೆಚ್ ಪಡೆದುಕೊಂಡು ಮರು ಸರ್ವೇ ನಡೆಸಬೇಕಾಗಿತ್ತು. ೧೯೭೮ರಲ್ಲಿನ ಡಿಸಿಎಫ್ ವರದಿಯನ್ನು (೬೮ ಜನ ಒತ್ತುವರಿದಾರರು) ಉಲ್ಲೇಖಿಸದೇ ಹಾಲಿ ಡಿಸಿಎಫ್ ಸುಪ್ರೀಂಕೋರ್ಟ್ಗೆ ಪ್ರಮಾಣ ಪತ್ರ ಸಲ್ಲಿಸಿದ್ದಾರೆ.
ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡುವ ಹಾಗೂ ದಾರಿ ತಪ್ಪಿಸುವ ಉದ್ದೇಶದಿಂದ ಮಡಿಕೇರಿ ಪೂರ್ವ ಮೀಸಲು ಅರಣ್ಯ ಪ್ರದೇಶ ವ್ಯಾಪ್ತಿಗೆ ಕರ್ಣಂಗೇರಿ ಗ್ರಾಮ ವ್ಯಾಪ್ತಿಯ ಸರ್ವೇ ನಂ.೨೩೬, ೨೩೭, ೨೪೦, ೨೪೭, ೨೫೦, ೨೫೧/೧, ೨೫೪, ೨೫೫, ೨೫೭, ೨೮೪, ೨೮೫, ೨೮೬, ೨೮೭, ೨೮೮, ೨೮೯/೧, ೫೧೦/೨ ಹಾಗೂ ಇಬ್ನಿವಳವಾಡಿ ಗ್ರಾಮ ವ್ಯಾಪ್ತಿಯ ಸರ್ವೇ ನಂಬರ್ ೬೬/೧ ಜಾಗ ಬರುತ್ತದೆ ಎಂದು ಮಾಹಿತಿ ನೀಡಲಾಗಿದೆ.
ಆರ್ಥಿಕವಾಗಿ ದುರ್ಬಲವಾಗಿರುವ ೧೭ಜನರನ್ನು ಒತ್ತುವರಿದಾರರೆಂದು ಉಲ್ಲೇಖಿಸಲಾಗಿದೆ. ಈ ಸಂದರ್ಭದಲ್ಲಿ ಪ್ರಭಾವಿಗಳ ಹಿತಾಸಕ್ತಿ ಕಾಪಾಡುವ ಕೆಲಸ ನಡೆದಿದೆ ಎಂದು ಆಕ್ಷೇಪ ವ್ಯಕ್ತ ಪಡಿಸಿದ್ದಾರೆ.
(ಚಿತ್ರ: ೧೯ಎಂಡಿಕೆಎಸ್೪. ರವಿ ಚಂಗಪ್ಪ)
======