ಔಷಧ ವ್ಯಾಪಾರಿಗಳ ಸಂಘದ ಅಧ್ಯಕ್ಷ ಬಿ. ಯು. ದೇವೇಂದ್ರ ಮನವಿ
ಪ್ರತಿನಿಧಿ ವರದಿ ಗೋಣಿಕೊಪ್ಪ
ಯುವ ಸಮೂಹದ ಭವಿಷ್ಯಕ್ಕೆ ಕಂಠಕವಾಗುವ ಔಷಧಗಳನ್ನು ಮಾರಾಟ ಮಾಡದಂತೆ ಎಚ್ಚರವಹಿಸಬೇಕು ಎಂದು ಗೋಣಿಕೊಪ್ಪ ಔಷಧ ವ್ಯಾಪಾರಿಗಳ ಸಂಘದ ಅಧ್ಯಕ್ಷ ಬಿ.ಯು.ದೇವೇಂದ್ರ ಮನವಿ ಮಾಡಿಕೊಂಡರು.
ದುರ್ಗಾಬೋಜಿ ಸಭಾಂಗಣದಲ್ಲಿ ಆಯೋಜಿಸಿದ್ದ ಗೋಣಿಕೊಪ್ಪ ಔಷಧ ವ್ಯಾಪಾರಿಗಳ ಸಂಘದ ಮಹಾಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಯುವ ಸಮೂಹ ಮಳಿಗೆಗಳಿಗೆ ಆಗಮಿಸಿ ಅವರಿಗೆ ಬೇಕಾದ ಔಷಧಗಳ ಬೇಡಿಕೆ ಇಡುತ್ತಾರೆ. ಇದಕ್ಕೆ ನಾವು ಸ್ಪಂದಿಸಬಾರದು. ಯುವ ಸಮೂಹದ ಭವಿಷ್ಯ ಕಾಪಾಡುವ ನಿಟ್ಟಿನಲ್ಲಿ ಅವರು ಕೇಳುವ ಔಷಧಗಳನ್ನು ಮಾರಾಟ ಮಾಡದಂತೆ ಎಚ್ಚರವಹಿಸಬೇಕಿದೆ. ಈ ನಿಟ್ಟಿನಲ್ಲಿ ಎಚ್ಚರಿಕೆ ಅಗತ್ಯ ಎಂದರು.
ಸಂಘದ ಸದಸ್ಯರು ರೋಗಿಗಳ ಬೇಡಿಕೆಗೆ ಪೂರಕವಾಗಿ ಔಷಧ ಒದಗಿಸುವ ಕಾರ್ಯ ಮಾಡುತ್ತಿದ್ದೇವೆ. ಇದೊಂದು ಮಹತ್ಕಾರ್ಯವಾಗಿದೆ. ಈ ನಿಟ್ಟಿನಲ್ಲಿ ನಮ್ಮ ಸೇವೆ ಮುಂದುವರಿಯಬೇಕಿದೆ. ಲಾಭಕ್ಕಿಂತ ಸೇವೆ ಪರಿಗಣನೆ ಹೆಚ್ಚಾಗಬೇಕು ಎಂದು ಅವರು ಸಲಹೆ ನೀಡದರು.
ಜಿಲ್ಲಾ ಕಾರ್ಯದರ್ಶಿ ಕೆ.ವಸಂತ್ ಕುಮಾರ್ ಮಾತನಾಡಿ, ಸಂಘ ಬೆಳೆಯಲು ಸಂಘಟನೆ ಅಗತ್ಯ. ಸದಸ್ಯ ಪಾತ್ರ ಮುಖ್ಯವಾಗುತ್ತದೆ. ಪಾರ್ಮ ಭವನ ನಿರ್ಮಾಣದ ಕನಸು ಈಡೇರಲು ನಾವು ಸನೀಹದಲ್ಲಿದ್ದೇವೆ. ಕಟ್ಟಡ ನಿರ್ಮಾಣದ ಕಾನೂನು ಹೋರಾಟವನ್ನು ಗೆದ್ದಿದ್ದೇವೆ. ಇದರಂತೆ ಕಟ್ಟಡದ ಕಾಮಗಾರಿ ಪೂರ್ಣಗೊಳಿಸಲು ಎಲ್ಲರ ಸಹಕಾರ ಅಗತ್ಯ. ಶೇ.90 ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, ಈ ನಿಟ್ಟಿನಲ್ಲಿ ಸದಸ್ಯರು ಒಂದಾಗಿ ಭವನ ಪೂರ್ಣಗೊಳಿಸಲು ಕೈಜೋಡಿಸಬೇಕಿದೆ ಎಂದರು.
ಗೋಣಿಕೊಪ್ಪದಲ್ಲಿ ಗಣೇಶ್ ಮೆಡಿಕಲ್ನಲ್ಲಿ ಔಷಧಕ್ಕೆ ರಿಯಾಯಿತಿ ನೀಡುವ ಬಗ್ಗೆ ಹಾಕಿರುವ ನಾಮ ಫಲಕ ತೆಗೆಯುವಂತೆ ಕ್ರಮಕೈಗೊಳ್ಳಲು ಲಿಖತ ಪತ್ರ ನೀಡಲು ನಿರ್ಧರಿಸಲಾಯಿತು.
ಜಂಟಿ ಕಾರ್ಯದರ್ಶಿ ಕೆ.ಡಿ.ಶಾಂತಕುಮಾರ ವಾರ್ಷಿಕ ವರದಿ ವಾಚಿಸಿದರು. ಖಜಾಂಚಿ ಎನ್.ಯು.ಭೀಮಯ್ಯ ಲೆಕ್ಕಪತ್ರ ಮಂಡಿಸಿದರು. ಸಲಹೆಗಾರ ಮೂಕಳೇರ ಮಧು ಕುಮಾರ್ ಸಂಘ ಅಸ್ತಿತ್ವಕ್ಕೆ ಕಾರಣಕರ್ತರಾದವರನ್ನು ನೆನಪಿಸಿಕೊಂಡರು. ಉಪಾಧ್ಯಕ್ಷ ಕೆ.ಎಂ.ರವಿಕುಮಾರ್, ಕಾರ್ಯದರ್ಶಿ ಎಚ್.ವಿ.ಕೃಷ್ಣಪ್ಪ ಇದ್ದರು.
ನಿರಂತರ ಕಲಿಕಾ ಕಾರ್ಯಕ್ರಮ: ಜಿಲ್ಲಾ ಸಂಘದ ಆಡಳಿತ ಮಂಡಳಿ ಸಭೆ ಮತ್ತು ನಿರಂತರ ಕಲಿಕಾ ಕಾರ್ಯಕ್ರಮ ಈ ಸಂದರ್ಭ ನಡೆಯಿತು. ವ್ಯಾಪಾರ, ಮಾರಾಟದಲ್ಲಿ ವಹಿಸಬೇಕಿರುವ ಮುಂಜಾಗೃತೆ ಮತ್ತು ಪಾರ್ಮ ಭವನ ನಿರ್ಮಾಣದ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು. ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದ ಅಧ್ಯಕ್ಷ ಅಂಬೆಕಲ್ ನವೀನ್ ಕುಶಾಲಪ್ಪ ಮಾತನಾಡಿ, ಔಷಧ ವ್ಯಾಪಾರಿಗಳು ಸಮಾಜ ಸೇವೆಯಲ್ಲಿ ತೊಡಗಿಕೊಳ್ಳಬೇಕಿದೆ. ಗೋಣಿಕೊಪ್ಪ ಸಂಘ ಜಿಲ್ಲೆಗೆ ಮಾದರಿ ಸಂಘವಾಗಿ ಮುಂದುವರಿಯುತ್ತಿದೆ ಎಂದರು.
ಸನ್ಮಾನ: ಗೋಣಿಕೊಪ್ಪ ಔಷಧ ವ್ಯಾಪಾರಿಗಳ ಸಂಘದ ಅಧ್ಯಕ್ಷ ಬಿ.ಯು.ದೇವೇಂದ್ರ, ಜಿಲ್ಲಾ ಸಂಘವನ್ನು ಸಮರ್ಥವಾಗಿ ನಿಭಾಯಿಸಿಕೊಂಡು ರಾಜ್ಯ ಉಪಾಧ್ಯಕ್ಷರಾಗಿರುವ ಅಂಬೆಕಲ್ ಜೀವನ್ ಕುಶಾಲಪ್ಪ, ರಾಜ್ಯ ಸಂಘದ ಕಾರ್ಯಕಾರಿಣಿ ಸದಸ್ಯ ಡಿ.ಐ.ಪುರುಷೋತ್ತಮ, ಜಿಲ್ಲಾ ಕಾರ್ಯದರ್ಶಿ ಕೆ.ವಸಂತ್ಕುಮಾರ್, ಖಜಾಂಚಿ ಪ್ರಸಾದ್ ಗೌಡ ಅವರುಗಳನ್ನು ಸನ್ಮಾನಿಸಲಾಯಿತು. ಜಿಲ್ಲಾ ಸಂಘದ ಉಪಾಧ್ಯಕ್ಷ ರ್ವೆನ್ ಫರ್ನಾಂಡೀಸ್, ಕಾರ್ಯದರ್ಶಿ ಪುರುಷೋತ್ತಮ, ಖಜಾಂಚಿ ಪ್ರಸಾದ್ ಗೌಡ, ಕಮಿಟಿ ಸದಸ್ಯ ವಸಂತ್ಕುಮಾರ್, ಎ.ಕೆ.ವಿನೋದ್ ಇದ್ದರು.
ಫೋಟೋ 19 ಜಿಕೆಪಿ 01: ದುರ್ಗಾಬೋಜಿ ಸಭಾಂಗಣದಲ್ಲಿ ಆಯೋಜಿಸಿದ್ದ ಗೋಣಿಕೊಪ್ಪ ಔಷಧ ವ್ಯಾಪಾರಿಗಳ ಸಂಘದ ಮಹಾಸಭೆಯಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು.