ಮೈಸೂರು: ಎಸ್ಐಟಿ ಎನ್ನುವುದು ಸಿದ್ದರಾಮಯ್ಯ, ಶಿವಕುಮಾರ್ ತನಿಖಾ ಸಂಸ್ಥೆ ಇದ್ದಂತೆ. ಎಸ್ಐಟಿಯವರು ಮಾಡುವುದು ತನಿಖೆಯಲ್ಲ, ಬದಲಾಗಿ ಅವರು ಮಾಡುವುದು ಇವರ ಗುಲಾಮಗಿರಿ ಎಂದು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಮೈಸೂರಿನಲ್ಲಿಂದು ಹೇಳಿದ್ದಾರೆ.
ಮುನಿರತ್ನ ಪ್ರಕರಣದ ತನಿಖೆಗೆ ಎಸ್ಐಟಿ ರಚನೆ ವಿಚಾರವಾಗಿ ಮಾಧ್ಯಮಗಳ ಪ್ರಶ್ನಗೆ ಪ್ರತಿಕ್ರಿಯಿಸಿದ ಅವರು, ಎಸ್ಐಟಿ ಎನ್ನುವುದು ಸಿದ್ದರಾಮಯ್ಯ, ಶಿವಕುಮಾರ್ ತನಿಖಾ ಸಂಸ್ಥೆ ಇದ್ದಂತೆ. ಎಸ್ಐಟಿಯವರು ಮಾಡುವುದು ತನಿಖೆಯಲ್ಲ, ಬದಲಾಗಿ ಅವರು ಮಾಡುವುದು ಇವರ ಗುಲಾಮಗಿರಿ. ಯಾವನೋ ಸುಬ್ರಹ್ಮಣೇಶ್ವರ ರಾವ್ ಅಂತೆ ಅವನ ಮೂಲಕವೂ ಈಗ ನನ್ನ ಮೇಲೆ ತನಿಖೆ ಮಾಡಿಸುತ್ತಾರಂತೆ. ನಾನು ಯಾರ ಮೇಲಿನ ಎಸ್ಐಟಿ ತನಿಖೆಯ ಬಗ್ಗೆಯೂ ಮಾತನಾಡುವುದಿಲ್ಲ. ಎಸ್ಐಟಿ ಹೇಗೆ ಕಾರ್ಯ ಮಾಡುತ್ತೆ ಎಂಬುದು ಜನರಿಗೆ ಗೊತ್ತಾಗಲಿ ಎಂದು ಹೇಳಿದರು.
ನಿನ್ನೆಯ ಕಾಂಗ್ರೆಸ್ ಸಚಿವರ ಪತ್ರಿಕಾಗೋಷ್ಟಿ ಕಾಂಗ್ರೆಸ್ ನ ಟೂಲ್ ಕಿಟ್. ನಿನ್ನೆ ಯಾರೋ ಅವರಿಗೆ ಸರಿಯಾಗಿ ಸ್ಕ್ರಿಪ್ಟ್ ಕೂಡ ಬರೆದುಕೊಟ್ಟಿಲ್ಲ. ಅದರಲ್ಲೇ ಅವರು ಸಿಕ್ಕಿ ಬೀಳುತ್ತಾರೆಂದು ಕುಮಾರಸ್ವಾಮಿ ಕುಟುಕಿದ್ದಾರೆ.ಈಗ ಕೆಲವರಿಗೆ ಒಕ್ಕಲಿಗರ ಮೇಲೆ ಪ್ರೀತಿ ಹುಟ್ಟುತ್ತಿದೆ. ಮೈಸೂರಿನಲ್ಲಿ ದೇವೇಗೌಡರ ಫೋಟೊಗೆ ಚಪ್ಪಲಿ ಹಾರ ಹಾಕಿಸಿದ್ದು ಯಾರು? ಆಗ ಒಕ್ಕಲಿಗರ ಸ್ವಾಭಿಮಾನ ಎಲ್ಲಿಗೆ ಹೋಗಿತ್ತು? ಎಂದು ಪ್ರಶ್ನಿಸಿದರು. ನಮ್ಮ ಸಮಾಜದ ಸ್ವಾಮೀಜಿಗೆ ಸಾಫ್ಟ್ ಆಗಿ ಇರಲು ಹೇಳಿದ್ದೇನೆಂದು ಕೆಲವರು ಹೇಳಿದ್ದಾರೆ.ನಾನ್ಯಾಕೆ ಇಂತಹವೆಲ್ಲಾ ಮಾಡಲಿ ಹೇಳಿ ಎಂದು ವಾಗ್ದಾಳಿ ನಡೆಸಿದರು.
ಸತ್ತವರ ಹೆಸರಿನಲ್ಲಿ ಹೆಬ್ಬೆಟ್ಟು ಪಡೆದು ಜಮೀನು ಹೊಡೆದಿದ್ದು ಯಾರು? ಡಿ ಕೆ ಶಿವಕುಮಾರ್ ಗೆ ಅಂತಹದ್ದು ಗೊತ್ತಿದೆ.
ಬೆನಗಾನಹಳ್ಳಿ ಜಮೀನು ವಿಚಾರದಲ್ಲಿ ಏನೇನಾಗಿದೆ ಎಂಬುದು ಡಿ ಕೆ ಸುರೇಶ್ ಮರೆತು ಹೋಯಿತಾ? ನನಗೆ ಅಂತಹ ಯಾವ ವ್ಯವಹಾರಗಳು ಗೊತ್ತಿಲ್ಲ ಎಂದಿದ್ದಾರೆ.
ಡಿನೋಟಿಫಿಕೇಷನ್ ಆರೋಪ ವಿಚಾರವಾಗಿ, ಮಿಸ್ಟರ್ ಕೃಷ್ಣ ಭೈರೇಗೌಡ ಯಾರನ್ನೋ ಮೆಚ್ಚಿಸಲು ಏನೇನೋ ಮಾತನಾಡಬೇಡಿ. ನೀನೆನು ಸತ್ಯ ಹರಿಶ್ಚಂದ್ರನಾ, ಕಂದಾಯ ಇಲಾಖೆಯಲ್ಲಿ ಏನೇನು ಮಾಡಿದ್ದೀಯಾ ಗೊತ್ತಿದೆ. ನೀವು ಏನೇ ಮಾಡಿದರೂ ನನ್ನದು ಏನು ಸಿಗುವುದಿಲ್ಲ. ಕೃಷ್ಣ ಭೈರೇಗೌಡ ಫಾರಿನ್ ನಲ್ಲಿ ಓದಿದವನು, ಬಹಳ ಮೇಧಾವಿ ಎಂದುಕೊಂಡಿದ್ದೆ. ಆದರೆ ಕೃಷ್ಣ ಭೈರೇಗೌಡ ಹೆಬ್ಬೆಟ್ಟು ಎಂದುಕೊಂಡಿರಲಿಲ್ಲ. ಯಾವನೋ ಏನೋ ಬರೆದು ಕೊಟ್ಟ, ಅದನ್ನ ಇವರು ತಂದು ಓದಿದ್ದಾರೆ.ನಾನು ಎಲ್ಲಿಗೂ ಕದ್ದು ಓಡಿ ಹೋಗೋದಿಲ್ಲ. ನನ್ನ ರಕ್ಷಣೆ ಮಾಡಿ ಎಂದು ಯಾರ ಮುಂದೆಯೂ ಗೋಗರೆಯುವುದಿಲ್ಲ.ನಾನು ಯಾವುದೇ ಅಲ್ಕಾ ಕೆಲಸಗಳನ್ನು ಮಾಡಿಲ್ಲ. ಡಿನೋಟಿಫಿಕೇಷನ್ ಆಗಿದೆ, ಅದನ್ನು ನಾನು ಮಾಡಿದ್ದೇನಾ? ಆ ಜಮೀನು ತೆಗೆದುಕೊಂಡಿರುವುದು ನನ್ನ ಪತ್ನಿಯ ಅತ್ತೆ. ನನಗೂ ಅವರಿಗೆ ಸಂಬಂಧ ಇಲ್ಲ ಎಂದು ಸಿಎಂ ರೀತಿ ಹೇಳುವುದಿಲ್ಲ.ನನ್ನ ಉಳಿಸಿ ಎಂದು ಕೈ ಕಟ್ಟುವ ಪರಿಸ್ಥಿತಿ ಬಂದರೆ ನಾನು 5 ಸೆಕೆಂಡ್ ಕೂಡ ರಾಜಕಾರಣದಲ್ಲಿ ಇರುವುದಿಲ್ಲ
2015ರಲ್ಲೇ ಕೇಸ್ ಆಗಿತ್ತು. ಆ ನಂತರ ತನಿಖೆ ಮಾಡಿ ಬಿ ರಿಪೋರ್ಟ್ ಸಹ ಹಾಕಿದ್ದಾರೆ. ಈಗ ಅದಕ್ಕೆ ಮರು ಜೀವ ಕೊಡಲು ಪ್ರಯತ್ನಿಸುತ್ತಿದ್ದಾರೆ. ನಾನು ಯಾರಿಗೋ ಟೋಪಿ ಹಾಕಿ ಜಮೀನು ಪಡೆದಿಲ್ಲ. ನನಗೂ ಯಡಿಯೂರಪ್ಪನವರಿಗು ರಾಜಕೀಯ ಸಂಘರ್ಷ ಯಾವ ರೀತಿ ಇತ್ತು ಎಂಬುದು ಎಲ್ಲರಿಗೂ ಗೊತ್ತಿದೆ. ಅವತ್ತು ಅವರೇಕೆ ನನಗೆ ಸಹಾಯ ಮಾಡುತ್ತಾರೆ.ಕಳೆದ ಮೂರು ತಿಂಗಳಿನಿಂದಲೂ ಈ ಸರ್ಕಾರ ನನ್ನ ವಿರುದ್ಧ ದಾಖಲೆ ಹುಡುಕಿಸುತ್ತಿದೆ. ಯಾವುದೂ ಸಿಗದ ಕಾರಣ ಹಳೇ ಕೇಸ್ ಗೆ ಜೀವ ಕೊಡುವ ಕೆಲಸ ಮಾಡುತ್ತಿದ್ದಾರೆ ಎಂದಿದ್ದಾರೆ.