ಮೈಸೂರು: ನಿನ್ನೆ ರಾತ್ರಿ ದಸರಾ ಗಜಪಡೆಯ ಧನಂಜಯ್ ಮತ್ತು ಕಂಜನ್ ಆನೆಗಳ ನಡುವೆ ಗಲಾಟೆ ನಡೆದಿತ್ತು.ಇಂದು ಎಂದಿನಂತೆ ಅಭಿಮನ್ಯು ನೇತೃತ್ವದಲ್ಲಿ ಗಜಪಡೆಯ ತಾಲೀಮು ನಡೆದಿದೆ. ಮೈಸೂರು ಅರಮನೆಯಿಂದ ಗಜಪಡೆ ತಾಲೀಮು ಪ್ರಾರಂಭಿಸಿದವು. ತಾಲೀಮಿನಲ್ಲಿ ಧನಂಜಯ ಹಾಗು ಕಂಜನ್ ಆನೆ ಭಾಗಿಯಾಗಿದ್ದು, ಒಂದೇ ಸಾಲಿನಲ್ಲಿ ಸಾಗಿದರೂ ಕಂಜನ್ ಮತ್ತು ಧನಂಜಯ ನಡುವೆ ಅಂತರ ಕಾಯ್ದಿರಿಸಲಾಗಿದೆ. ಆನೆಗಳ ಸಾಲಿನಲ್ಲಿ 4ನೇ ಆನೆಯಾಗಿ ಕಂಜನ್ ಸಾಗಿದರೆ ಕೊನೆಯಲ್ಲಿ ಧನಂಜಯ ಸಾಗಿದ್ದಾನೆ. ಸದ್ಯಕ್ಕೆಎರಡೂ ಆನೆಗಳು ಶಾಂತವಾಗಿವೆ. ಆದರೆ ಎರಡೂ ಆನೆಗಳು ಮುಖಾಮುಖಿಯಾಗದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗು ಸಿಬ್ಬಂದಿ ವರ್ಗ ಮುನ್ನೆಚ್ಚರಿಕೆ ವಹಿಸಿದ್ದಾರೆ.
ಇನ್ನು ದಸರಾ ಗಜಪಡೆ ದಾಂಧಲೆ ಕುರಿತು ಸಿಸಿಎಫ್ ಟಿ ಹೀರಾಲಾಲ್ ಸ್ಪಷ್ಟನೆ ನೀಡಿದ್ದು, ನಿನ್ನೆ ರಾತ್ರಿ ಆನೆಗಳಿಗೆ ಆಹಾರ ಕೊಡುವಾಗ ಕಂಜನ್ ಮತ್ತು ಧನಂಜಯ ಆನೆಗಳ ನಡುವೆ ಜಗಳ ಆಗಿದೆ. ಗಂಡಾನೆಗಳ ಸ್ವಭಾವ ಹಾಗಯೇ ಇರುತ್ತದೆ. ಯಾರು ಆತಂಕ ಪಡುವ ಅಗತ್ಯವಿಲ್ಲ. ಪ್ರತಿ ಬಾರಿಯೂ ಆನೆಗಳಿಗೆ ಆಹಾರ ಕೊಡುವಾಗ ಹೆಣ್ಣಾನೆ ಜೊತೆಯಲ್ಲಿರುತ್ತಿತ್ತು. ನಿನ್ನೆ ರಾತ್ರಿ ಆಹಾರ ಕೊಡುವಾಗ ಹೆಣ್ಣಾನೆ ಜೊತೆಯಲ್ಲಿ ಇಲ್ಲದ ಕಾರಣ ಧನಂಜಯ ಆನೆ ಕಂಜನ್ ಆನೆ ವಿರುದ್ಧ ಕಾದಾಟಕ್ಕೆ ಮುಂದಾಗಿದೆ. ಧನಂಜಯ ಆನೆ ಕಂಜನ್ ಆನೆಯನ್ನು ಓಡಿಸಿಕೊಂಡು ಹೋಗಿದೆ. ಈ ವೇಳೆ ಕಂಜನ್ ಆನೆಯ ಮೇಲಿದ್ದ ಮಾವುತ ಕೆಳಕ್ಕೆ ಜಿಗಿದಿದ್ದಾನೆ. ಅರಮನೆಯಿಂದ ಹೊರಗೆ ಹೋಗುತ್ತಿದ್ದಂತೆ ಧನಂಜಯ ನಿಯಂತ್ರಣಕ್ಕೆ ಬಂದಿದೆ. ಈ ಘಟನೆ ಹಠಾತ್ ನಡೆದಿದ್ದು, ಕಂಜನ್ ಮತ್ತು ಧನಂಜಯ ಆನೆಗೆ ಮದ ಬಂದಿಲ್ಲ. ಇದನ್ನು ಈಗಾಗಲೇ ಪರೀಕ್ಷೆ ಮಾಡಲಾಗಿದೆ.
ಕಂಜನ್ ಆನೆ ರಸ್ತೆಗೆ ಹೋಗುತ್ತಿದಂತೆ ಜನರನ್ನು ನೋಡಿ ಗಾಬರಿಯಾಗಿ ಸುಮ್ಮನಾಗಿದೆ. ಜನರು ಆನೆಗಳನ್ನು ದೂರದಿಂದಲೇ ನೋಡಬೇಕು. ಯಾರು ಹತ್ತಿರಕ್ಕೆ ಬರಬಾರದು ಎಂದಿದ್ದಾರೆ.