ಡಿವೈಎಸ್ಪಿ ಎಂ.ಧರ್ಮೇಂದ್ರ ಅವರಿಂದ 14 ಆರೋಪಿಗಳಿಗೆ ನೋಟೀಸ್ ಜಾರಿ
ಚಿಕ್ಕಮಾಳಿಗೆ ಕೊಳ್ಳೇಗಾಲ
ತಾಲೂಕಿನ ಮಧುವನಹಳ್ಳಿ ಗ್ರಾಮದ ಬಳಿಯ ಹೋಂಸ್ಟೇವೊಂದಲ್ಲಿ ಇತ್ತೀಚೆಗೆ ಜೂಜಾಟದಲ್ಲಿ ತೊಡಗಿದ್ದ 14 ಜನರನ್ನು ಬಂಧಿಸಿದ ಗ್ರಾಮಾಂತರ ಠಾಣಾ ಪೊಲೀಸರು, ಜೂಜಾಟಕ್ಕಿಟ್ಟಿದ್ದ ಲಕ್ಷಗಟ್ಟಲೇ ಹಣಕ್ಕೂ ಜಪ್ತಿಗೊಂಡ ಹಣಕ್ಕೂ ತಾಳೆ ಸಿಗದ ಆರೋಪದ ಪ್ರಕರಣದ ತನಿಖೆಯನ್ನು ಡಿವೈಎಸ್ಪಿ ಎಂ.ಧರ್ಮೇಂದ್ರ ಕೈಗೆತ್ತಿಕೊಂಡಿದ್ದಾರೆ.
ಸೆ.21ರ ಪ್ರತಿನಿಧಿ ಸಂಚಿಕೆಯಲ್ಲಿ ತಾಳೆಯಾಗದ ಜಪ್ತಿ ಹಣ ವರದಿ ಹಿನ್ನೆಲೆ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ ಅವರ ಸೂಚನೆ ಮೇರೆಗೆ ಕೊಳ್ಳೇಗಾಲ ಉಪ ವಿಭಾಗದ ಡಿವೈಎಸ್ಪಿ ಎಂ.ಧರ್ಮೇಂದ್ರ ಸೋಮವಾರವೇ ತನಿಖೆ ಆರಂಭಿಸಿದ್ದಾರೆ.
ಚಾ.ನಗರ ತಾಲೂಕಿನ ದೊಡ್ಡಮೋಳೆ ನಿವಾಸಿ ಅಪ್ಪಣ್ಣ, ಕಾಗಲವಾಡಿ ಮೂಲದ ಚಾ.ನಗರ ಹೌಸಿಂಗ್ ಬೌರ್ಡ್ ನಿವಾಸಿ ವಿನಯ್, ಮಸ್ಕಪುರದ ಕಾರು ಚಾಲಕ ಅಶ್ವಥ್, ಹೆಬ್ಸಸೂರು ಗ್ರಾಮದ ರಾಚಶೆಟ್ಟಿ, ಕಿರಗಸೂರು ಗ್ರಾಮದ ಮಹಮ್ಮದ್, ಸುರೇಶ್, ರಾಮಸಮುದ್ರದ ದುಂಡು ಮಾದೇವ, ಅಮಚವಾಡಿ ಗ್ರಾಮದ ನಾರಾಯಣಸ್ವಾಮಿ, ಮಹದೇವಸ್ವಾಮಿ, ಪುಟ್ಟನಪುರ ಗ್ರಾಮದ ಪ್ರಸನ್ನ, ಗುಂಡ್ಲುಪೇಟೆ ತಾಲೂಕಿನ ಹೊಸೂರು ಗ್ರಾಮದ ನಾಗರಾಜು, ಮಧುವನಹಳ್ಳಿ ಗ್ರಾಮದ ನಿವಾಸಿಗಳಾದ ಸಿದ್ದಪ್ಪಸ್ವಾಮಿ, ಮಹದೇವಸ್ವಾಮಿ, ಕಂಟ್ರಾಕ್ಟರ್ ಮಹದೇವಪ್ರಸಾದ್ ಅವರು ಸೆ.19 ಮುಂಜಾನೆ 1-15 ಗಂಟೆ ಸಮಯದಲ್ಲಿ ಮಧುವನಹಳ್ಳಿಯ ಹೋಂ ಸ್ಟೇವೊಂದರಲ್ಲಿ ಜೂಜಾಟವಾಡುವ ವೇಳೆ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದರು.
ಈ ಬಂಧಿತ ಆರೋಪಿಗಳು ಜೂಜಾಟದ ವೇಳೆ 1,01,680 ರೂ.ಗಳನ್ನು ಪಣಕ್ಕಿಟ್ಟಿದ್ದರು ಎಂದು ಗ್ರಾಮಾಂತರ ಠಾಣಾ ಪೊಲೀಸರು 191/2024ರಂತೆ ಎಫ್ಐಆರ್ ದಾಖಲಿಸಿದ್ದರು. ಜೂಜಾಟ ನಡೆದ ಸ್ಥಳ ಮಧುವನಹಳ್ಳಿ ಬಳಿಯ ಹೋಂ ಸ್ಟೇ ಎಂಬುದಾಗಿದ್ದರೂ, ಅದು ಕೊಳ್ಳೇಗಾಲ-ಒಡೆಯರಪಾಳ್ಯ ಮುಖ್ಯ ರಸ್ತೆಯಿಂದ ಸಿದ್ದೇಶ್ವರ ಬೆಟ್ಟಕ್ಕೆ ಹೋಗುವ ಸಾರ್ವಜನಿಕ ಸ್ಥಳ ಎಂದು ಪೊಲೀಸರು ಎಫ್ಐಆರ್ ನಲ್ಲಿ ತೋರಿಸಲಾಗಿದೆ. ಆದರೆ, ಇದರ ಹಿಂದಿನ ಅಸಲಿಯತ್ತು ಬೇರೆಯೇ ಇದೆ ಎಂಬುದು ಸಾರ್ವಜನಿಕ ವಲಯದಲ್ಲಿ ಮಾರನೇ ದಿನದಿಂದಲೇ ಚರ್ಚೆಗೀಡಾಗಿತ್ತು.
ಪೊಲೀಸರು ಎಫ್ಐಆರ್ನಲ್ಲಿ ತೋರಿಸಿರುವ ಜೂಜಾಟದ ಜಪ್ತಿ ಹಣದ ಮೊತ್ತಕ್ಕೂ ಜೂಜಾಟ ಸ್ಥಳದಲ್ಲಿ ದೊರೆತ 11 ಲಕ್ಷಕ್ಕೂ ಹೆಚ್ಚು ಹಣಕ್ಕೂ ತಾಳೆ ಹೊಂದದ ಕುರಿತು ಹಾಗೂ ಜೂಜಾಟ ಪ್ರಕರಣದಲ್ಲಿ ಇತರ ಮೂವರು ಆರೋಪಿಗಳನ್ನು ಪ್ರಕರಣದಿಂದ ಬೇಕೆಂದೇ ಕೈಬಿಡಲಾಗಿದೆ ಎಂಬ ವಿಷಯ ಬಂಧಿತ ಜೂಜುಕೋರರ ಆಪ್ತ ವಲಯದಲ್ಲಿ ಬಿಸಿ ಬಿಸಿ ಚರ್ಚೆ ಭುಗಿಲೆದಿತ್ತು. ಇದೇ ಮಾಹಿತಿಯನ್ನು ಆಧರಿಸಿ ಪ್ರಕಟಿಸಿದ್ದ ಪ್ರತಿನಿಧಿ ವರದಿಯನ್ನು ಆಧರಿಸಿ, ಇದೀಗ ಎಸ್ಪಿ ಸೂಚನೆಯಂತೆ ಡಿವೈಎಸ್ಪಿ ಬಿರುಸಿನ ತನಿಖೆ ಪ್ರಾರಂಬಿಸಿದ್ದಾರೆ.
14 ಆರೋಪಿಗಳಿಗೆ ನೋಟೀಸ್ ಜಾರಿ!: ಖಚಿತ ಮಾಹಿತಿ ಮೇರೆಗೆ ಗ್ರಾಮಾಂತರ ಠಾಣೆಯ ಪಿಎಸೈ ಎಸ್.ಎ.ಸುಪ್ರಿತ್ ನೇತೃತ್ವದಲ್ಲಿ ಪೊಲೀಸರ ತಂಡ ಸೆ.19ರ ಮುಂಜಾನೆ 1-15 ಗಂಟೆ ವೇಳೆಗೆ ಮಧುವನಹಳ್ಳಿ ಗ್ರಾಮ ಬಳಿಯಲ್ಲಿ ನಡೆಯುತ್ತಿದ್ದ ಜೂಜು ಅಡ್ಡೆ ಮೇಲೆ ದಿಡೀರ್ ದಾಳಿ ನಡೆಸಿದ ಪ್ರಕರಣದಲ್ಲಿ ಸಿಕ್ಕಿ ಬಿದ್ದ ಎಲ್ಲರೂ ಬಂಧನದ ಬಳಿಕ ಠಾಣಾ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾರೆ. ಆದರೆ, ಇವರೆಲ್ಲರೂ ಜೂಜಾಟವಾಡುತ್ತಿದ್ದ ಸ್ಥಳವನ್ನು ಎಫ್ಐಆರ್ ನಲ್ಲಿ ಬದಲಿಸಿರುವ ಹಾಗೂ ಜಪ್ತಿಯಾದ ಹಣದ ಪ್ರಮಾಣವನ್ನು ದಾಖಲೆಯಲ್ಲಿ ಕಡಿಮೆ ತೋರಿಸಿರುವ ಆರೋಪದ ಕುರಿತು ತನಿಖೆ ನಡೆಸಬೇಕಾದ ಹಿನ್ನೆಲೆ ಡಿವೈಎಸ್ಪಿ ಎಂ.ಧರ್ಮೇಂದ್ರ ಅವರು 14 ಆರೋಪಿಗಳಿಗೆ ಸೋಮವಾರ ನೋಟಿಸ್ ಜಾರಿ ಮಾಡಿದ್ದಾರೆ. ವಿಪರ್ಯಾಸವೆಂದರೆ ಇರ್ಯಾರು ಇನ್ನೂ ಡಿವೈಎಸ್ಪಿ ಎದುರು ವಿಚಾರಣೆಗೆ ಹಾಜರಾಗಿಲ್ಲ. ಈ ನಡುವೆ ಜೂಜಾಟದ ಮೇಲೆ ದಾಳಿ ನಡೆಸಿದ ಪಿಎಸೈ ಹಾಗೂ ಅವರ ತಂಡದ ಪೊಲೀಸರನ್ನು ಡಿವೈಎಸ್ಪಿ ವಿಚಾರಣೆ ಮಾಡಿದ್ದು, ಇವರೆಲ್ಲರಿಗೆ ಅಂದು ಏನೇಲ್ಲ ಮಾಹಿತಿ ಯರ್ಯಾರಿಂದ ಬಂದಿತು ಎಂಬದನ್ನು ಖಚಿತಪಡಿಸಿಕೊಳ್ಳಲು ಫೋನ್ ಕಾಲ್ ಸಿಡಿಆರ್ ಪರಿಶೀಲನೆಯಲ್ಲಿ ತೊಡಗಿದ್ದಾರೆ.
ಕೋಟ್:
ಕೊಳ್ಳೇಗಾಲ ತಾಲೂಕಿನ ಮಧುವನಹಳ್ಳಿ ಬಳಿ ಸಾರ್ವಜನಿಕ ಸ್ಥಳದಲ್ಲಿ ಇತ್ತೀಚೆಗೆ ಗ್ರಾಮಾಂತರ ಠಾಣಾ ಪೊಲೀಸರು ದಾಳಿ ನಡೆಸಿ, 14 ಜನರನ್ನು ಬಂಧಿಸಿ, 1,01,680 ರೂ ಜಪ್ತಿ ಮಾಡಿರುವ ಪ್ರಕರಣದಲ್ಲಿ ಸತ್ಯಾಂಶವನ್ನು ಮುಚ್ಚಿಡಲಾಗಿದೆ ಎಂಬ ಆರೋಪದ ಕುರಿತು ಅಗತ್ಯ ತನಿಖೆ ನಡೆಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೂಚನೆ ನೀಡಿದ್ದಾರೆ. ಹಾಗಾಗಿ, ಪ್ರಕರಣದ ಆರೋಪಿಗಳಿಗೆ ನೋಟೀಸ್ ಜಾರಿ ಮಾಡಿದ್ದು, ವಿಚಾರಣೆ ಬರುವಂತೆ ತಿಳಿಸಲಾಗಿದ್ದು, ವಿವಿದ ಆಯಾಮಗಳಲ್ಲಿ ತನಿಖೆಯನ್ನು ಬಿರುಸಿಕೊಳಿಸಲಾಗಿದೆ.
-ಎಂ.ಧರ್ಮೇಂದ್ರ, ಡಿವೈಎಸ್ಪಿ, ಕೊಳ್ಳೇಗಾಲ
25ಕೆಜಿಎಲ್-1 ಫೋಟೋ ಶೀರ್ಷಿಕೆ: ಕೊಳ್ಳೇಗಾಲ ತಾಲೂಕಿನ ಮಧುವನಹಳ್ಳಿ ಗ್ರಾಮದ ಬಳಿಯಲ್ಲಿ ಜೂಜಾಟ ನಡೆಯಿತು ಎನ್ನಲಾದರ ಹೋಂ ಸ್ಟೇ ಹೊರ ಚಿತ್ರ ಹಾಗೂ ಡಿವೈಎಸ್ಪಿ ಎಂ.ಧರ್ಮೇಂದ್ರ ಅವರ ಫೋಟೋ ಇದೆ.