ಪ್ರತಿನಿಧಿ ವರದಿ ಕೊಳ್ಳೇಗಾಲ
ಶಿಕ್ಷಕ ವೃತ್ತಿ ಬಹಳ ಅಮೂಲ್ಯವಾದುದರಿಂದ ನಾಗರೀಕರು ಪ್ರತಿಯೊಬ್ಬ ಶಿಕ್ಷಕರಿಗೂ ಸಮಾಜದಲ್ಲಿ ಗೌರವ ನೀಡಬೇಕು ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಅಭಿಪ್ರಾಯಪಟ್ಟರು.
ಪಟ್ಟಣದ ಶ್ರೀ ರಾಜರಾಜೇಶ್ವರಿ ಕಲ್ಯಾಣ ಮಂಟಪದಲ್ಲಿ ಸೋಮವಾರ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ, ನಿವೃತ್ತ ಶಿಕ್ಷಕರಿಗೆ ಸನ್ಮಾನ ಹಾಗೂ ಉತ್ತಮ ಶಿಕ್ಷಕರಿಗೆ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಅವರು ಉದ್ಘಾಟಸಿ ಮಾತನಾಡಿದರು.
ಶಿಕ್ಷಕರು ಮನಸ್ಸು ಮಾಡಿದರೆ ಈ ದೇಶದ ಆಡಳಿತ ವ್ಯವಸ್ಥೆಯನ್ನೇ ಬದಲಿಸಬಹುದು. ಹಾಗಾಗಿ ಶಿಕ್ಷಕರು ನಿಂತ ನೀರಲ್ಲ. ಅವರು ಸದಾ ಹರಿಯುವ ನೀರು. ಶಿಕ್ಷಕರಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಜತೆಗೆ ಶಿಕ್ಷಕರಿಗೆ ಯಾರು ಗೌರವ ಕೊಡುತ್ತಾರೋ, ಅವರು ಜೀವನದಲ್ಲಿ ಉನ್ನತ ಸ್ಥಾನಕ್ಕೇರುತ್ತಾರೆ ಹಾಗೂ ಸಮಾಜದಲ್ಲಿ ಉತ್ತಮ ಪ್ರಜೆಯಾಗುತ್ತಾರೆ ಎಂದರು.
ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಎಸ್.ಜಯಣ್ಣ, ನಗರಸಭಾಧ್ಯಕ್ಷೆ ಸಿ.ಎನ್.ರೇಖಾ ರಮೇಶ್, ಉಪಾಧ್ಯಕ್ಷ ಎ.ಪಿ.ಶಂಕರ್, ತಾಪಂ ಇಒ ಗುರುಶಾಂತಪ್ಪ ಬೆಳ್ಳುಂಡಗಿ, ಬಿಇಒ ಎಂ.ಮಂಜುಳಾ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ರಂಗಸ್ವಾಮಿ, ದೈಹಿಕ ಶಿಕ್ಷಣ ಪರಿವೀಕ್ಷಕ ಸ್ಟೀವನ್ ಇದ್ದರು.
ಭಾಷಣದ ವೇಳೆ ಚದುರಿದ ಶಿಕ್ಷಕರು:
ಶಿಕ್ಷಕರಿಗೆ ಇನ್ನೊಂದು ಹೆಸರೇ ಶಿಸ್ತು. ಆದರೆ, ಶಿಕ್ಷಕ ದಿನಾಚರಣೆಯಲ್ಲಿ ಭಾಗವಹಿಸಿದ್ದ ಕೆಲವು ಶಿಕ್ಷಕರು ಅಶಿಸ್ತು ಪ್ರದರ್ಶಿಸಿದ್ದು ಸಾಮಾನ್ಯವಾಗಿತ್ತು. ಸಮಾರಂಭದಲ್ಲಿ 700ಕ್ಕೂ ಹೆಚ್ಚು ಶಿಕ್ಷಕರು ಹಾಗೂ ಕುಟುಂಬದ ಸದಸ್ಯರು ಭಾಗವಹಿಸಿದ್ದರು. ಈ ವೇಳೆ ಒಂದಷ್ಟು ಶಿಕ್ಷಕರು ಸಮಾರಂಭದಲ್ಲಿ ಕುಳಿತುಕೊಳ್ಳದೆ, ಅತ್ತಿತ್ತ ಮನಬಂದಂತೆ ಎದ್ದು ಹೊರಗೆ ಹೋಗುತ್ತಿದ್ದ ದೃಶ್ಯ ಸಮಾನ್ಯವಾಗಿತ್ತು. ನಿವೃತ್ತ ಶಿಕ್ಷಕರಿಗೆ ಹಾಗೂ ಉತ್ತಮ ಶಿಕ್ಷರಿಗೆ ಸನ್ಮಾನ ನಡೆಯುತ್ತಿರುವ ಸಂದರ್ಭದಲ್ಲಿ ಕೆಲ ಶಿಕ್ಷಕರು ಊಟಕ್ಕಾಗಿ ಮುಗಿದಿದ್ದರು. ಅದರಲ್ಲೂ ಶಾಸಕ ಎ.ಆರ್.ಕೃಷ್ಣಮೂರ್ತಿ ಅವರ ಭಾಷಣದ ವೇಳೆ ಬಹುತೇಕ ಶಿಕ್ಷಕರೆಲ್ಲ ಚದುರಿ ಊಟದ ಹಾಲ್ ಗೆ ತೆರಳಿದ್ದರು. ಹಾಗಾಗಿ, ಸಮಾರಂಭದಲ್ಲಿ ಖಾಲಿ ಖಾಲಿ ಖುರ್ಚಿ ಕಾಣುತ್ತಿತ್ತು. ಇದರಿಂದ ಶಾಸಕರು ಭಾಷಣ ಮಾಡಲು ಮುಜುಗರಪಟ್ಟ ಪ್ರಸಂಗ ನಡೆಯಿತು.
24ಕೆಜಿಎಲ್-3 ಪೋಟೋ ಶೀರ್ಷಿಕೆ: ಕೊಳ್ಳೇಗಾಲ ಪಟ್ಟಣದ ಶ್ರೀ ರಾಜರಾಜೇಶ್ವರಿ ಕಲ್ಯಾಣ ಮಂಟಪದಲ್ಲಿ ಸೋಮವಾರ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಸಮಾರಂಭದಲ್ಲಿ ನಿವೃತ್ತ ಶಿಕ್ಷಕರು ಹಾಗೂ ಉತ್ತಮ ಶಿಕ್ಷಕರನ್ನು ಶಾಸಕ ಎ.ಆರ್.ಕೃಷ್ಣಮೂರ್ತಿ ಅವರು ಸನ್ಮಾನಿಸಿದರು.