ಮೈಸೂರು: ಮೈಸೂರು ಲೋಕಾಯುಕ್ತ ಎಸ್ಪಿ ಟಿ ಜೆ ಉದೇಶ್ ಕಾಣೆಯಾಗಿದ್ದಾರೆ, ಅಥವಾ ಅವರನ್ನು ಯಾರೋ ಅಪಹರಣ ಮಾಡಿರಬೇಕು ಎಂದು ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಮೈಸೂರಿನಲ್ಲಿಂದು ಗಂಭೀರ ಆರೋಪವನ್ನು ಮಾಡಿದ್ದಾರೆ. ಅಲ್ಲದೆ ಎಸ್ ಪಿ ಕಾಣೆಯಾಗಿರುವುದಾಗಿ ಇವರು ದೇವರಾಜ ಪೊಲೀಸ್ ಠಾಣೆಗೆ ದೂರು ನೀಡಲು ಹೋಗಿದ್ದ ಘಟನೆ ಜರುಗಿದೆ.
ಇಂದು ಬೆಳಿಗ್ಗೆ ಲೋಕಾಯುಕ್ತ ಎಸ್ ಪಿ ಉದೇಶ್ ಅವರನ್ನು ಕಾಣಲು ಕಚೇರಿಗೆ ಹೋಗಿದ್ದ ಸ್ನೇಹಮಹಿ ಕೃಷ್ಣ ಅವರಿಗೆ ಎಸ್ ಪಿ ಉದೇಶ್ ಅವರನ್ನು ಭೇಟಿಯಾಗಲು ಸಾಧ್ಯವಾಗಿಲ್. ಕರೆಗಳನ್ನೂ ಸ್ವೀಕರಿಸದ ಹಿನ್ನೆಲೆಯಲ್ಲಿ ಲೋಕಾಯುಕ್ತಾ ಎಸ್ ಪಿ ಕಾಣೆಯಾಗಿದ್ದಾರೆ ಎಂದು ಸ್ನೇಹಮಯಿ ಕೃಷ್ಣ ದೇವರಾಜ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಮುಂದಾಗಿದ್ದಾರೆ. ನೀಡಿದ ದೂರು ಸ್ವೀಕರಿಸದೇ ಪೊಲೀಸರು ವಾಪಸ್ ಕಳುಹಿಸಿದ್ದಾರೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಸ್ನೇಹಮಹಿ ಕೃಷ್ಣ, ದೂರು ಸ್ವೀಕರಿಸದ ಕಾರಣ ವಾಪಸ್ ಆಗಿದ್ದೇನೆ. ಸೌಜನ್ಯಕ್ಕಾದರೂ ಪೊಲೀಸರು ವಿಚಾರಣೆ ಮಾಡಲಿಲ್ಲ ಹಾಗಾಗಿ ನಾನು ದೇವರಾಜ ಪೊಲೀಸ್ ಠಾಣೆ ವಿಭಾಗದ ಎಸಿಪಿ ಗೆ ದೂರು ನೀಡುತ್ತೇನೆಂದು ಪೊಲೀಸರ ವರ್ತನೆಗೆ ಕಿಡಿ ಕಾರಿದ್ದಾರೆ.
ನಾನು ಇಂದು ಬೆಳಿಗ್ಗೆಯೇ ಮೈಸೂರು ಲೋಕಾಯುಕ್ತ ಕಚೇರಿಗೆ ಭೇಟಿ ನೀಡಿದ್ದೆ. ಇದುವರೆಗೂ ನನ್ನ ಸಂಪರ್ಕಕ್ಕೆ ಎಸ್ ಪಿ ಯವರು ಸಿಕ್ಕಿಲ್ಲ ಹಾಗೂ ಸರ್ಕಾರ ನೀಡಿರುವ ದೂರವಾಣಿ ಕರೆ ಸ್ವೀಕಾರ ಮಾಡಿಲ್ಲ. ಹೀಗಾಗಿ ಅವರನ್ನು ಯಾರೋ ಅಪಹರಣ ಮಾಡಿರಬೇಕು ಎಂದಿರುವ ಇವರು ಲೋಕಾಯುಕ್ತ ಅಧಿಕಾರಿಗಳು ಒತ್ತಡಕ್ಕೆ ಒಳಗಾಗಿರಬೇಕು. ಲೋಕಾಯುಕ್ತ ಕಚೇರಿಯ ಸಿಬ್ಬಂದಿಗಳು ಸರಿಯಾದ ಮಾಹಿತಿ ನೀಡುತ್ತಿಲ್ಲ. ಈಗಾಗಲೇ ನ್ಯಾಯಾಲಯ ಪ್ರಕರಣ ದಾಖಲು ಮಾಡಿ ತನಿಖೆ ಮಾಡಲು ಅವಕಾಶ ನೀಡಿದೆ. ಹೀಗಿದ್ದರೂ ಅಧಿಕಾರಿಗಳು ಎಫ್ಐಆರ್ ದಾಖಲು ಮಾಡಲು ಮೀನಾಮೇಷ ಎಣಿಸುತ್ತಿದ್ದಾರೆ. ಈ ಪ್ರಕರಣದ ನಿಷ್ಪಕ್ಷಪಾತ ತನಿಖೆ ನಡೆಯುತ್ತದೆ ಎಂಬ ವಿಶ್ವಾಸವೇ ನನಗಿಲ್ಲ ಹೀಗಾಗಿ ಪ್ರಕರಣವನ್ನು ಸಿಬಿಐ ಗೆ ವಹಿಸಬೇಕು. ಈ ಕೂಡಲೇ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕೆಂದು ಮನವಿ ಮಾಡುತ್ತೇನೆ ಎಂದಿದ್ದಾರೆ.