ಸರಿಯಾದ ನಿರ್ವಹಣೆ ಇಲ್ಲದೆ ಸಾರ್ವಜನಿಕರ ಪರದಾಟ । ತಿರುಗಿ ನೋಡದ ಜನಪ್ರತಿನಿಧಿಗಳು
ಸುರೇಶ್ ಅಜ್ಜೀಪುರ ಹನೂರು ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸಲು ತಾಲೂಕಿನಲ್ಲಿ ಸರ್ಕಾರ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಗ್ರಾಮೀಣ ಭಾಗದಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಿದೆ. ಆದರೆ, ಅವು ನಿರುಪಯುಕ್ತವಾಗಿದ್ದು, ಸಾರ್ವಜನಿಕರ ಬಳಕೆಗೆ ಅನನುಕೂಲವಾಗಿದೆ. ಹನೂರು ಪಟ್ಟಣ ಸೇರಿದಂತೆ ಅಜ್ಜೀಪುರ, ರಾಮಾಪುರ, ಸೂಳೇರಿ ಪಾಳ್ಯ, ಮಾರ್ಟಳ್ಳಿ, ಮಹದೇಶ್ವರ ಬೆಟ್ಟ, ದಿನ್ನಳ್ಳಿ, ಗೊಲ್ಲರ ದಿಂಬ ಸೇರಿದಂತೆ ಇನ್ನು ಅನೇಕ ಕಡೆ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪನೆ ಮಾಡಲಾಗಿದ್ದು, ನೀರು ಪೂರೈಕೆ ಮಾಡದೆ ನಿರುಪಯುಕ್ತವಾಗಿವೆ. ಪ್ರಾಥಮಿಕ ಕ್ರಷಿ ಪತ್ತಿನ ಸಹಕಾರ ಸಂಘ ಹಾಗೂ ಗ್ರಾಮ ಪಂಚಾಯಿತಿಗಳು ನಿರ್ವಹಣೆ ಮಾಡುತ್ತಿರುವ ಕೆಲವೆಡೆ 5ರೂ. ಗೆ 20ಲೀ. ಶುದ್ಧ ಕುಡಿಯುವ ನೀರು ಸಿಗುತ್ತಿತ್ತು, ಕಾಲ ಕ್ರಮೇಣ ಸರಿಯಾದ ನಿರ್ವಹಣೆ ಇಲ್ಲದೆ ನೀರು ಸಿಗುತ್ತಿಲ್ಲ. ಪ್ರಾರಂಭದಿಂದಲೂ ನೀರು ಕೊಟ್ಟಿಲ್ಲ: ಶುದ್ಧ ಕುಡಿಯುವ ನೀರಿನ ಘಟಕಗಳು ಪ್ರಾರಂಭವಾದ ದಿನಗಳಿoದಲೂ ಒಂದಲ್ಲ ಒಂದು ಕಾರಣ ನೀಡಿ ಶುದ್ಧ ಕುಡಿಯುವ ನೀರು ಪೂರೈಕೆ ಮಾಡದೆ ಹಾಗೆ ಇರುವ ಶುದ್ಧ ಕುಡಿಯುವ ನೀರಿನ ಘಟಕಗಳು ಸಹ ನಮ್ಮಲ್ಲಿ ಇರುವ ನಿದರ್ಶನವಿದೆ. ಅಂದಿನಿಂದ ಇಂದಿನವರೆಗೂ ಸಾಕಷ್ಟು ವರ್ಷ ಕಳೆದಿದ್ದರೂ ಸಹ ಹಾಗೆ ಇದ್ದು ಲಕ್ಷಾಂತರ ರೂ. ವ್ಯಯವಾಗುತ್ತಿದೆ. ಅಜ್ಜೀಪುರ, ರಾಮಾಪುರ, ಗೊಲ್ಲರ ದಿಂಬ ಸೇರಿದಂತೆ ಹಲವೆಡೆ ಇನ್ನು ನೀರೇ ಬಂದಿಲ್ಲ ಹಾಗಾಗಿ ಸಂಬಂಧ ಪಟ್ಟ ಅಧಿಕಾರಿಗಳು ಮುಂದಾದರು ಇತ್ತ ಗಮನಹರಿಸಿ ಸೂಕ್ತ ಕ್ರಮ ಕೈ ಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಹೊಣೆ ಹೊತ್ತವರ ನಿರ್ಲಕ್ಷ್ಯ: ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣದಿಂದ ಹಿಡಿದು ನಿರ್ವಹಣೆ ಮಾಡುತ್ತಿರುವ ಇಲಾಖೆಯ ಅಧಿಕಾರಿಗಳು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ಶುದ್ಧ ಕುಡಿಯುವ ನೀರಿನ ಘಟಕಗಳು ಜನರ ಬಳಕೆಗೆ ಲಭ್ಯವಾಗದಿದ್ದಲ್ಲಿ, ಅದನ್ನು ಆದಷ್ಟು ಬೇಗ ದುರಸ್ಥಿ ಪಡಿಸಲು ಮುಂದಾಗಬೇಕು ಅದನ್ನ ಬಿಟ್ಟು ಇಲ್ಲಸಲ್ಲದ ಕಾರಣ ಹೇಳಿ ಜನರಿಗೆ ತೊಂದರೆ ಉಂಟು ಮಾಡಬಾರದು ಎಂಬುದು ಪ್ರಜ್ಞಾವಂತ ನಾಗರೀಕರ ಆರೋಪ ಹಾಗೂ ಆಗ್ರಹ ಸಹ ಆಗಿದೆ. ನೀರಿಲ್ಲದೆ ಒಣಗುತ್ತಿರುವ ಘಟಕಗಳು: ಅಜ್ಜೀಪುರದ ಡಾ.ಬಿ.ಆರ್.ಅಂಬೇಡ್ಕರ್ ಕಾಲೋನಿಯಲ್ಲಿರುವ ಘಟಕ, ರಾಮಾಪುರದಲ್ಲಿರುವ ಘಟಕ, ಹಾಗೂ ಪುದುನಗರದಲ್ಲಿನ ಘಟಕ, ಗೊಲ್ಲರ ದಿಂಬದ ಘಟಕ ಹನೂರು ಪಟ್ಟಣದಲ್ಲಿರುವ ಘಟಕ ಪುದೂರು ಘಟಕ, ಇನ್ನಿತರೇ ಕಡೆಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ನಿರುಪಯುಕ್ತವಾಗಿದೆ. ಇದರ ಪ್ರತಿಫಲ ಮಿಷನರಿಗಳು ಸಹ ತುಕ್ಕು ಹಿಡಿಯುತ್ತಿದೆ ಈಗಾಗಲೇ ಲಕ್ಷಾಂತರ ರೂ ವ್ಯಯ ಮಾಡಿ ಇದರ ಸ್ಥಾಪನೆ ಮಾಡಿದ್ದು ಇದೀಗ ಜನರಿಗೆ ಶುದ್ಧ ಕುಡಿಯುವ ನೀರು ಸಹ ಸಿಗದೇ ಒಂದೆಡೆ ಪರದಾಟ ಇನ್ನೊಂದೆಡೆ ಮಿಷನರಿ ಹಾಳು ಹಾಗಾಗಿ ಸಂಬಂಧ ಪಟ್ಟ ಅಧಿಕಾರಿಗಳು ಜನಪ್ರತಿನಿದಿನಗಳು ಇತ್ತ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರೂ ಗ್ರಾಮಸ್ಥರು ಆಗ್ರಹಿಸಿದ್ದಾರೆ. ----------------------------------- ಗ್ರಾಮಸ್ಥರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನಿರ್ಮಿಸಿರುವ ಈ ಶುದ್ಧ ಕುಡಿಯುವ ನೀರಿನ ಘಟಕಗಳು ಜನರಿಗೆ ಅನುಕೂಲವಾಗಬೇಕು ಆ ನಿಟ್ಟಿನಲ್ಲಿ ಅಧಿಕಾರಿಗಳು ಮುಂದಾಗಬೇಕು ಜತೆಗೆ ಅಲ್ಲಿಗೆ ಖರ್ಚು ಮಾಡಿರುವ ಹಣ ಸಹ ವ್ಯರ್ಥವಾಗಬಾರದು ಅನುಕೂಲ ಜನರಿಗೆ ಆಗಬೇಕು ಎಂಬುದು ನನ್ನ ಆಗ್ರಹವಾಗಿದೆ. - ಸುರೇಶ, ಗ್ರಾಮಸ್ಥ ಕಳೆದ ಬಾರಿ ಸಹ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸರಿ ಪಡಿಸಿ ನೀರು ಪೂರೈಕೆ ಮಾಡಲು ಕ್ರಮ ತೆಗೆದುಕೊಂಡಿದ್ದೇವು ಇದೀಗ ಮತ್ತೆ ಹಲವು ಕಡೆ ನೀರು ಪೂರೈಕೆ ಆಗುತ್ತಿಲ್ಲ ಎಂಬ ಅಂಶ ನಮ್ಮ ಗಮನಕ್ಕೆ ಬಂದಿದೆ ಹಿರಿಯ ಅಧಿಕಾರಿಗಳು ಹಾಗೂ ಸಂಬಂಧ ಪಟ್ಟವರ ಗಮನಕ್ಕೆ ತಂದು ಸದ್ಯದಲ್ಲೇ ಸರಿಪಡಿಸಲು ಮುಂದಾಗುತ್ತೇವೆ. - ಉಮೇಶ್ ಇಒ, ತಾಪಂ ಹನೂರು ಚಿತ್ರ: ಹನೂರು ತಾಲೂಕಿನ ಪುದು ನಗರ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನೀರು ಪೂರೈಕೆ ಮಾಡದೆ ಇರುವುದು. ಚಿತ್ರ: ರಾಮಾಪುರ ಗ್ರಾಮದಲ್ಲಿರುವ ನಿರುಪಯುಕ್ತ ಶುದ್ಧ ಕುಡಿಯುವ ನೀರಿನ ಘಟಕ.