ದಂಧೆಕೋರರು ಕಬ್ಬಿಣದ ಕೊಪ್ಪರಿಕೆ ಬಳಸಿ ಅಕ್ರಮ
ಚಿಕ್ಕಮಾಳಿಗೆ ಕೊಳ್ಳೇಗಾಲ
ತಾಲೂಕಿನ ಕಾವೇರಿ ನದಿ ಪಾತ್ರದ ಹಲವು ಗ್ರಾಮಗಳಲ್ಲಿ ಮತ್ತೆ ಎಗ್ಗಿಲ್ಲದೆ ಮರಳು ಅಕ್ರಮ ಎತ್ತುವಳಿ ಮತ್ತು ಸಾಗಣೆ ದಂಧೆ ಆರಂಭಗೊಂಡಿದ್ದು, ಇದಕ್ಕೆ ಸಂಬಂಧಿಸಿದ ಅಧಿಕಾರಿಗಳ ಪರೋಕ್ಷ ಸಹಕಾರವಿದೆಯೇ ಎಂಬ ಪ್ರಶ್ನೆ ಮುನ್ನೆಲೆಗೆ ಬಂದಿದೆ.
ಕೊಳ್ಳೇಗಾಲ ತಾಲೂಕಿನ ಮುಳ್ಳೂರು, ಹಳೇ ಹಂಪಾಪುರ, ದಾಸನಪುರ, ಸರಗೂರು, ಧನಗೆರೆ ಮತ್ತು ಸತ್ತೇಗಾಲ ಗ್ರಾಮಗಳ ಅಂಚಿನಲ್ಲಿ ಹರಿಯುವ ಕಾವೇರಿ ನದಿಯಲ್ಲಿ ಮರಳು ಅಕ್ರಮ ಸಂಗ್ರಹಣೆ ಹಾಗೂ ಸಾಗಣೆ ನಡೆಯುತ್ತಿದೆ ಎಂಬುದಕ್ಕೆ ಸಾಕ್ಷ್ಯ ದೊರೆತಿದೆ.
ಸತ್ತೇಗಾಲ ಗ್ರಾಮದ ಅಗ್ರಹಾರದ ಬೀದಿಲ್ಲಿ ಸತೀಶ ಎಂಬುವರಿಗೆ ಸೇರಿದ ಜಮೀನಿಗೆ ಹೊಂದಿಕೊಂಡಂತಿರುವ ಕಾವೇರಿ ನದಿಯಲ್ಲಿ ಮರಳು ದಂಧೆಕೋರರು ಕಬ್ಬಿಣದ ಕೊಪ್ಪರಿಕೆಯನ್ನು ಬಳಸಿ ಅಕ್ರಮವಾಗಿ ಮರಳು ದಂಧೆ ನಡೆಸುತ್ತಿದ್ದಾರೆ. ನದಿಯೊಳಗೆ ಮುಳುಗಿ ಮರಳನ್ನು ಮೇಲೆತ್ತಿ ಕೊಪ್ಪರಿಕೆಯೊಳಗೆ ಸಂಗ್ರಹಿಸಿಕೊಂಡು ಅದನ್ನು ನದಿ ತಟಕ್ಕೆ ತಂದು ಒಂದೆಡೆ ಗುಡ್ಡೆ ಹಾಕುತ್ತಿದ್ದಾರೆ.
ಇವೆಲ್ಲವೂ ಸಂಜೆ ಹಾಗೂ ಮುಂಜಾನೆ ಎಗ್ಗಿಲ್ಲದೆ ನಡೆಯುತ್ತಿದ್ದು, ಬಳಿಕ ಸಂಗ್ರಹಿಸಿದ ಮರಳನ್ನು ರಾತ್ರಿ ವೇಳೆ ಟ್ರಾಕ್ಟರ್ ಹಾಗೂ ಇತರ ಗೂಡ್ಸ್ ವಾಹನಗಳಲ್ಲಿ ಸುತ್ತಮುತ್ತಲಿನ ಐದಾರು ಕಿ.ಲೋ ಮೀಟರ್ ಅಂತರದಲ್ಲಿರುವ ಗ್ರಾಮಗಳಿಗೆ ಮಾರಾಟ ಮಾಡುತ್ತಿದ್ದಾರೆ ಎನ್ನಲಾಗಿದೆ. ಇದರಲ್ಲಿ ಚಕಿತಗೊಳಿಸುವ ವಿಷಯವೆಂದರೆ, ಸತ್ತೇಗಾಲದ ಕಾವೇರಿ ನದಿಯಲ್ಲಿ ಮರಳು ಅಕ್ರಮ ಎತ್ತುವಳಿ ಮಾಡುತ್ತಿರುವ ದೃಶ್ಯದ ಮೊಬೈಲ್ ವಿಡಿಯೋ ತುಣುಕು 2 ದಿನಗಳಿಂದ ಸಾಮಾಜಿಕ ಜಾಲ ತಾಣದಲ್ಲಿ ಭಾರಿ ಸದ್ದು ಮಾಡುತ್ತಿರುವುದಾಗಿದೆ.
ಈ ಅಕ್ರಮ ಮರಳು ಎತ್ತುವಳಿ ಮತ್ತು ಸಾಗಣೆ ದಂಧೆಗೆ ಆಯಾ ಗ್ರಾಮಕ್ಕೆ ಸಂಬಂಧಿಸಿದ ಬೀಟ್ ಪೊಲೀಸ್, ಕಂದಾಯ ಇಲಾಖೆಯ ಗ್ರಾಮ ಸಹಾಯಕರು, ಗ್ರಾಮ ಲೆಕ್ಕಾಧಿಕಾರಿಗಳ ಸಹಕಾರ ಇದ್ದರೂ ಇರಬಹುದು ಎಂಬುದು ಸಾರ್ವಜನಿಕರ ಚರ್ಚೆಯಾಗಿದ್ದು, ಇದನ್ನು ನಿಯಂತ್ರಿಸುವಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಪೊಲೀಸ್, ಕಂದಾಯ ಹಾಗೂ ಸ್ಥಳಿಯ ಗ್ರಾಮ ಪಂಚಾಯಿತಿಗಳು ಶೀಘ್ರವೇ ಎಚ್ಚೆತ್ತುಕೊಳ್ಳಬೇಕಿದೆ.
ಹಿಂದೆ ಟ್ರಂಚ್ ತೆಗೆಯಲಾಗಿತ್ತು: ಕಾವೇರಿ ನದಿಯಲ್ಲಿ ಮರಳು ಅಕ್ರಮ ದಂಧೆ ನಿನ್ನೆ ಮೊನ್ನೆಯದಲ್ಲ. ಹತ್ತಾರು ವರ್ಷಗಳಿಂದಲೂ ಆಗಿಂದ್ದಾಗೆ ನಡೆಯುತ್ತಲೇ ಬಂದಿದೆ. ನದಿಯಲ್ಲಿ ಮರಳು ಎತ್ತುವಳಿ ಬಗ್ಗೆ ಮಾಧ್ಯಮಗಳು ಸದ್ದು ಮಾಡಿದ ಒಂದಷ್ಟು ಸಂದರ್ಭದಲ್ಲಿ ಸಂಬಂಧಿಸಿದ ಅಧಿಕಾರಿಳು ತಕ್ಷಣ ಮರಳು ನದಿಯಿಂದ ಸಾಗಣೆಯಾಗುವ ಸ್ಥಳದಲ್ಲಿ ಅಡ್ಡಲಾಗಿ ಟ್ರಂಚ್(ಹಳ್ಳ) ತೆಗೆಯುತ್ತಾರೆ. ಕ್ರಮೇಣ ಅದನ್ನು ಗಮನಿಸುತ್ತಿದ್ದು, ನಂತರದಲ್ಲಿ ಬೇರೆಯ ಜವಾಬ್ದಾರಿಗಳು ಹೆಚ್ಚಾಗುತ್ತಿದ್ದಂತೆ ಇತ್ತ ಕಣ್ಣಾಯಿಸುವುದನ್ನು ಅಧಿಕಾರಿಗಳು ಬಿಡುತ್ತಾರೆ. ಇಷ್ಟು ಸಾಕಲ್ಲವೇ? ದಂಧೆಕೋರರಿಗೆ. ತಕ್ಷಣ ಕಾರ್ಯ ಪ್ರವೃತರಾಗುವ ದಂಧೆಕೋರರು ಟ್ರಂಚ್ ಮುಚ್ಚಿ ತಮ್ಮ ಹಳೇ ಚಾಳಿಯನ್ನು ಮುಂದುವರೆಸಿ, ಕಾನೂನು ಬಾಹಿರವಾಗಿ ಅಕ್ರಮ ಮರಳು ದಂಧೆಯಲ್ಲಿ ಮಿಂದೇಳುತ್ತಾರೆ. ಆದರೆ, ಇರ್ಯಾರು ಎಂಬುದು ಸಂಬಂಧಿಸಿದ ಇಲಾಖೆಗೆ ಗೊತ್ತಿದ್ದರೂ ಕೂಡ ಯಾವುದೇ ರೀತಿಯಲ್ಲಿ ದಿಟ್ಟ ಕಾನೂನು ಕ್ರಮ ಕೈಗೊಳ್ಳುವುದಿಲ್ಲ ಎಂಬುದೇ ಈ ಮರಳು ದಂಧೆ ಮತ್ತೆ ತಲೆ ಎತ್ತಲು ಕಾರಣ ಎಂದು ಹೇಳಲಾಗಿದೆ.
ಕೋಟ್:
ತಾಲೂಕಿನ ಕಾವೇರಿ ನದಿಯಲ್ಲಿ ಕೊಪ್ಪರಿಕೆ ಮೂಲಕ ಕಾನೂನು ಭಾಹಿರವಾಗಿ ಕೆಲವರು ಮರಳು ಎತ್ತುವಳಿ ಮಾಡುತ್ತಿರುವ ವಿಚಾರ ನನ್ನ ಗಮನಕ್ಕೆ ಬಂದಿದ್ದು, ಸಮಯ ಕಾದು ಮರಳು ದಂಧೆ ತಡೆಗೆ ತೀಕ್ಷ್ಣ ಕಾರ್ಯಾಚರಣೆ ಮಾಡಲಾಗುವುದು.
– ಐ.ಈ.ಬಸವರಾಜು, ತಹಸೀಲ್ದಾರ್, ಕೊಳ್ಳೇಗಾಲ ತಾ
26ಕೆಜಿಎಲ್-2 ಫೋಟೋ ಶೀರ್ಷಿಕೆ: ಕೊಳ್ಳೇಗಾಲ ತಾಲೂಕಿನ ಸತ್ತೇಗಾಲ ಗ್ರಾಮದ ಕಾವೇರಿ ನದಿಯಲ್ಲಿ ದಂಧೆಕೋರರು ಕಾನೂನು ಭಾಹಿರವಾಗಿ ಮರಳು ಎತ್ತುವಳಿಯಲ್ಲಿ ತೊಡಗಿರುವುದು.