ಪ್ರತಿನಿಧಿ ವರದಿ ಯಳಂದೂರು
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘ ಯಳಂದೂರು ತಾಲೂಕು ಘಟಕದ ವತಿಯಿಂದ ಪಟ್ಟಣದ ತಹಸೀಲ್ದಾರ್ ಕಚೇರಿ ಎದುರು ಕಪ್ಪು ಪಟ್ಟಿ ಧರಿಸಿ ಮೌನ ಪ್ರತಿಭಟನೆ ನಡೆಸಿದರು.
ಈ ವೇಳೆ ಸಂಘದ ಪದಾಧಿಕಾರಿಗಳು ಬೇಡಿಕೆಗಳನ್ನು ಈಡೇರಿಸುವಂತೆ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ತಹಸೀಲ್ದಾರ್ ಜಯಪ್ರಕಾಶ್ ಅವರ ಮೂಲಕ ಮನವಿ ಸಲ್ಲಿಸಿದರು.
ಗ್ರಾಮ ಆಡಳಿತ ಅಧಿಕಾರಿ ಶರತ್ ಮಾತನಾಡಿ, ರಾಜ್ಯಾದ್ಯಂತ ಗ್ರಾಮ ಆಡಳಿತ ಅಧಿಕಾರಿಗಳು ಸರ್ಕಾರದ ಯೋಜನೆಗಳಿಗೆ ಸಂಬಂಧಿಸಿದ ವಿವಿಧ ಆಪ್ ಗಳಲ್ಲಿ ಕರ್ತವ್ಯ ನಿರ್ವಹಿಸಲು ಒತ್ತಡ ಹೆಚ್ಚಾಗಿದ್ದು, ಸರ್ಕಾರ ಯಾವ ಸೌಲಭ್ಯವು ನೀಡುತ್ತಿಲ್ಲ. ದಿನನಿತ್ಯ ಒತ್ತಡದ ಕಾರ್ಯನಿರ್ವಹಣೆ ಯಿಂದಾಗಿ ಅಧಿಕಾರಿಗಳು ನೋವು ಅನುಭವಿಸುವಂತಾಗಿದೆ. ಆದ್ದರಿಂದ ರಾಜ್ಯ ಗ್ರಾಮ ಆಡಳಿತ ಅಧಿಕಾರಿ ಕೇಂದ್ರ ಸಂಘ ನಿರ್ದೇಶನದಂತೆ ಇಂದು ಈ ಮುಷ್ಕರವನ್ನು ಹಮ್ಮಿಕೊಂಡಿದ್ದೇವೆ ಎಂದರು.
ಮೊಬೈಲ್ ಆಪ್, ವೆಬ್ ಅಪ್ಲಿಕೇಶನ್ ಗಳ ಮೂಲಕ ಹೆಚ್ಚಿನ ಸೌಕರ್ಯ ಕಲ್ಪಿಸಲಾಗುತ್ತಿದೆ. ಇದೇ ವೇಳೆ ಸಿಬ್ಬಂದಿ ಮೇಲೆ ಹೆಚ್ಚಿನ ಕಾರ್ಯಭಾರದ ಒತ್ತಡ ಉಂಟಾಗುತ್ತಿದೆ. ಇದರಿಂದ ಮಾನಸಿಕ ಮತ್ತು ದೈಹಿಕವಾಗಿ ಸಮಸ್ಯೆಗಳಾಗುತ್ತಿವೆ. ಪದೋನ್ನತಿಯಲ್ಲಿ ಸಾಕಷ್ಟು ಅನ್ಯಾಯವಾಗುತ್ತಿದೆ. ಅನೇಕ ಅಧಿಕಾರಿಗಳು ನಿವೃತ್ತಿ ಅಂಚಿನಲ್ಲಿದ್ದಾರೆ, ಆದರೆ ಪದೋನ್ನತಿ ಕೊಟ್ಟಿಲ್ಲ, ಇದನ್ನು ಸರಿಪಡಿಸಬೇಕು, ಪತಿ-ಪತ್ನಿ ಪ್ರಕರಣಗಳಲ್ಲಿ ವರ್ಗಾವಣೆ ಪ್ರಕ್ರಿಯೆ ತ್ವರಿತ ಗತಿಯಲ್ಲಿ ಪೂರ್ಣಗೊಳಿಸಬೇಕು, ಕೆಲಸದ ಅವಧಿ ನಂತರ ವರ್ಚುವಲ್ ಸಭೆಗಳನ್ನು ನಡೆಸದಂತೆ ಆದೇಶ ಹೊರಡಿಸಬೇಕೆಂದು ಆಗ್ರಹಿಸಿದರು.
ನಮ್ಮ ಮನವಿಗೆ ಸ್ಪಂದಿಸದಿದ್ದಲ್ಲಿ ಮುಂದೆ ಜಿಲ್ಲೆ ಹಾಗೂ ರಾಜ್ಯಮಟ್ಟದಲ್ಲಿ ರಾಜ್ಯಾದ್ಯಂತ ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘವು ಪ್ರತಿಭಟನೆ ನಡೆಸಲಾಗುವುದೆಂದು ಎಚ್ಚರಿಕೆ ನೀಡಿದರು.
ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘದ ತಾಲೂಕು ಅಧ್ಯಕ್ಷ ನಂದಕುಮಾರ್, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ವೈ.ಎಂ ಮಂಜುನಾಥ್, ಆರ್ಐ ಯದುಗಿರಿ, ಪ್ರವೀಣ್, ದೇವೇಂದ್ರ, ಅನಿಲ್, ಸುಹಾಸ್, ಸುನಿತಾ, ಸುಕನ್ಯ, ಸ್ವರ್ಣ, ರಮ್ಯಶ್ರೀ, ಲೀಲಾವತಿ, ಗ್ರಾಮ ಸಹಾಯಕ ಸಂಘದವರು, ಅಧಿಕಾರಿಗಳು ಹಾಜರಿದ್ದರು.