ಪ್ರತಿನಿಧಿ ವರದಿ ಕೊಳ್ಳೇಗಾಲ
ತಾಲೂಕಿನ ಕುಣಗಳ್ಳಿ ಗ್ರಾಮದ ಪರಿಶಿಷ್ಟಜಾತಿ ಬೀದಿಯಲ್ಲಿ ಯಜಮಾನ್ ಮಹೇಶ್ ನೇತೃತತ್ವದಲ್ಲಿ ಮಂಗಳವಾರ ವಿಜೃಂಭಣೆಯಿಂದ ಶ್ರೀ ಧರೆಗೆ ದೊಡ್ಡವರ ಸಂಸ್ಥಾನ ಮಠ ಕುರುಬನಕಟ್ಟೆ ಕ್ಷೇತ್ರದ ಶ್ರೀ ಸಿದ್ದಪ್ಪಾಜಿ ಕಂಡಾಯ ಉತ್ಸವ ಜರುಗಿತು.
ಕುಣಗಳ್ಳಿ ಗ್ರಾಮ ಮತ್ತು ಜನರಿಗೆ ಒಳಿತಾಗಲಿ ಎಂಬ ಉದ್ದೇಶದಿಂದ ಕಂಡಾಯಗಳನ್ನು ಸೋಮವಾರ ಸಂಜೆ ಬರಮಾಡಿಕೊಳ್ಳಲಾಯಿತು. ನಂತರ ಸುರಾಪುರ ಗ್ರಾಮದ ಹುಚ್ಚೇಗೌಡನಕಟ್ಟೆ ತಟದ ಅರಳಿ ಮರದ ಬಳಿ ಕಂಡಾಯಗಳನ್ನು ಹೂ, ಹೊಂಬಾಳೆಯಿಂದ ಅಲಂಕೃತಗೊಳಿಸಲಾಯಿತು.
ನಂತರ ಹೂ, ಹೊಂಬಾಳೆ ಅಲಂಕೃತ ಕಂಡಾಯಗಳನ್ನು ಮಂಗಳವಾಧ್ಯದೊಂದಿಗೆ ನೀಲಗಾರರು ಭಕ್ತಿಭಾವದಿಂದ ಹೊತ್ತು ಕುಣಗಳ್ಳಿ ಗ್ರಾಮದತ್ತ ನಡೆದರು. ಈ ವೇಳೆ ಯುವಕರ ದಂಡು ಮಂಗಳವಾದ್ಯದ ಸದ್ದಿಗೆ ಕುಣಿದು ಕುಪ್ಪಳಿಸುತ್ತಾ, ಕಂಡಾಯಗಳನ್ನು ಸ್ವಾಗತಿಸುತಾ ಸಾಗಿದರು. ಅಂತೆಯೇ, ಮಂಗಳವಾರ ಬೆಳಗ್ಗೆ ಗ್ರಾಮದ ವಿವಿಧ ಬಡಾವಣೆಗಳಲ್ಲಿ ಕಂಡಾಯ ಉತ್ಸವವನ್ನು ವಿಜೃಂಭಣೆಯಿಂದ ನಡೆಸಲಾಯಿತು. ಈ ವೇಳೆ ಗ್ರಾಮದ ನಿವಾಸಿಗಳು ತಮ್ಮ ಮನೆ ಮುಂದೆ ಸಾಗಿ ಬಂದ ಶ್ರೀ ಸಿದ್ದಪ್ಪಾಜಿ ಕಂಡಾಯಗಳಿಗೆ ವಿಶೇಷ ಪೂಜೆ ಸಲ್ಲಿಸಿ, ಭಕ್ತಿಭಾವ ಮೆರೆದರು. ಇದೇ ವೇಳೆ ಗ್ರಾಮದ ಪರಿಶಿಷ್ಟ ಜಾತಿ ಬೀದಿಯ ಚಾವಡಿಯಲ್ಲಿ ಯಜಮಾನರು ಹಾಗೂ ಕುಲಸ್ತರು ಕುರುಬನಕಟ್ಟೆ ಕಂಡಾಯಗಳಿಗೆ ಪೂಜೆ ಸಲ್ಲಿಸಿ ಶ್ರದ್ಧಾಭಕ್ತಿ ಸಮರ್ಪಣೆ ಮಾಡಿದರು.
ಕುಣಗಳ್ಳೀ ಗ್ರಾಮದ ಯಜಮಾನರಾದ ಪಿ.ಕೆ.ಶ್ರೀನಿವಾಸಮೂರ್ತಿ, ಎಂ.ಮಹೇಶ್, ಮೂರ್ತಿ, ಪಿ.ಸುಂದ್ರ, ಪಿ.ಮಹೇಶ್, ಮಾದೇವ, ರೇವಣ್ಣ ಸೇರಿದಂತೆ ನೀಲಗಾರರ ತಂಡ, ಯುವಕರು ಪಾಲ್ಗೊಂಡಿದ್ದರು.
25ಕೆಜಿಎಲ್-4 ಫೋಟೋ ಶೀರ್ಷಿಕೆ: ಕೊಳ್ಳೇಗಾಲ ತಾಲೂಕಿನ ಕುಣಗಳ್ಳಿ ಗ್ರಾಮದ ಪರಿಶಿಷ್ಟಜಾತಿ ಬೀದಿಯಲ್ಲಿ ಮಂಗಳವಾರ ವಿಜೃಂಭಣೆಯಿಂದ ಶ್ರೀ ಸಿದ್ದಪ್ಪಾಜಿ ಕಂಡಾಯ ಉತ್ಸವ ಜರುಗಿತು.