ಮೈಸೂರು: ಮುಡಾ ಹಗರಣ ವಿಚಾರವಾಗಿ ರಾಜಕೀಯ ವಲಯದಲ್ಲಿ ಜಟಾಪಟಿ ದಿನೇ ದಿನೇ ಜೋರಾಗುತ್ತಿದೆ. ಬೀದಿ ಹೋರಾಟಕ್ಕೆ ಸೈ ಎಂದು ವಿಪಕ್ಷ ನಾಯಕರು ಸಿದ್ದರಾಗಿದ್ದಾರೆ. ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಪ್ರತಿಪಕ್ಷಗಳು ರಣಕಹಳೆ ಮೊಳಗಿಸಿವೆ. ಇಂದು ಮೈಸೂರಿನ ಜಿಲ್ಲಾ ಪಂಚಾಯಿತಿಯ ಸಭಾಂಗಣದಲ್ಲಿ ಸಿಎಂ ಸಿದ್ದರಾಮಯ್ಯ ಕೆಡಿಪಿ ಸಭೆ ನಡೆಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯಿತಿಗೆ ಮುತ್ತಿಗೆ ಹಾಕುವುದಾಗಿ ಬಿಜೆಪಿ ನಾಯಕರು ತಿಳಿಸಿದ್ದು, ಜಿಲ್ಲಾ ಪಂಚಾಯತ್ ಎದುರು ಪೋಲಿಸ್ ಸರ್ಪಗಾವಲು ಹಾಕಲಾಗಿದೆ.
ಇತ್ತ ಪ್ರತಿಭಟನೆಗೆ ಸಜ್ಜಾಗಿರುವ ಬಿಜೆಪಿ ಪಾಳಯದ ಕಾರ್ಯಕರ್ತರು ಕಚೇರಿ ಬಳಿ ಜಮಾಯಿಸುತ್ತಿದ್ದಂತೆಯೇ ಸಂಭಾವ್ಯ ಪರಿಸ್ಥಿತಿ ಎದುರಿಸಲು ಪೊಲೀಸ್ ಇಲಾಖೆ ಸನ್ನದ್ದರಾಗಿ ಬಿಜೆಪಿ ಕಚೇರಿ ಬಳಿಯೂ ಭದ್ರತೆಗೆ ನೂರಾರು ಸಂಖ್ಯೆಯ ಪೊಲೀಸರನ್ನ ನಿಯೋಜನೆ ಮಾಡುವ ಮೂಲಕ ಮುನ್ನೆಚ್ಚರಿಕೆ ವಹಿಸಿದೆ.