ಪ್ರತಿನಿಧಿ ವರದಿ ಬೇಗೂರು
ಸಮೀಪದ ಸೋಮಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಆವರಣದಲ್ಲಿ ಸಂಘದ ಆಡಳಿತಾಧಿಕಾರಿ ಆರ್.ರಂಜಿತಾ ಅಧ್ಯಕ್ಷತೆಯಲ್ಲಿ ಸಂಘದ 2023-24ನೇ ವಾರ್ಷಿಕ ಸಾಮಾನ್ಯ ಸಭೆ ನಡೆಯಿತು.
ಇದೇ ಸಂದರ್ಭದಲ್ಲಿ ಚಾಮುಲ್ ನಿರ್ದೇಶಕ ಎಚ್.ಎಸ್.ನಂಜುಂಡಪ್ರಸಾದ್ ಮಾತನಾಡಿ, ರೈತರು ಬೇಸಾಯದ ಜತೆಗೆ, ಹೈನುಗಾರಿಕೆಯಲ್ಲಿ ತೊಡಗಿಸಿಕೊಳ್ಳಬೇಕು. ಉತ್ಪಾದಕರು ಉತ್ತಮ ಗುಣಮಟ್ಟದ ಹಾಲನ್ನು ಸಂಘಕ್ಕೆ ನೀಡಿ ಹೆಚ್ಚು ಲಾಭಗಳಿಸಲು ಸಹಕಾರಿಯಾಗಬೇಕು. ಒಕ್ಕೂಟವು ಪ್ರಾಥಮಿಕ ಹಾಲು ಉತ್ಪಾದಕರ ಸಹಕಾರ ಸಂಘಗಳ ನೌಕರರಿಗೆ ನಿವೃತ್ತಿ ನಿಧಿಸ್ಥಾಪನೆ, ಸದಸ್ಯರ ರಾಸುಗಳಿಗೆ ವಿಮಾ ಸೌಲಭ್ಯ ಹಾಗೂ ಜನಶ್ರೀ ಯೋಜನೆಯಡಿ 18 ರಿಂದ 59 ವರ್ಷದೊಳಗಿನ ಸದಸ್ಯರು ಸಹಜವಾಗಿ ಮರಣ ಹೊಂದಿದರೆ ಅವರ ಕುಟುಂಬಕ್ಕೆ ಒಂದು ಲಕ್ಷ ರೂ.ಪರಿಹಾರ ದೊರೆಯಲಿದೆ ಎಂದರು.
59 ವರ್ಷ ಮೇಲ್ಪಟ್ಟ ಸದಸ್ಯರು ಮೃತಪಟ್ಟರೆ ರೈತ ಕಲ್ಯಾಣ ಟ್ರಸ್ಟ್ ವತಿಯಿಂದ 15 ಸಾವಿರ ರೂ. ಪರಿಹಾರ ದೊರೆಯಲಿದೆ. 18 ರಿಂದ 59 ವರ್ಷದೊಳಗಿನ ಸದಸ್ಯರು ಅಪಘಾತದಲ್ಲಿ ಮೃತಪಟ್ಟ ಸಂದರ್ಭದಲ್ಲಿ ಎರಡು ಲಕ್ಷ ರೂ. ಪರಿಹಾರ ಸಿಗಲಿದೆ ಎಂದು ತಿಳಿಸಿದ ಅವರು, ಸಂಘವು 2023-24ನೇ ಸಾಲಿನಲ್ಲಿ 4,54,033 ರೂ.ಗಳ ನಿವ್ವಳ ಲಾಭಗಳಿಸಿದೆ. ಉತ್ಪಾದಕರು ಒಕ್ಕೂಟದಿಂದ ದೊರೆಯುವ ಸೌಲಭ್ಯಗಳನ್ನು ಬಳಸಿಕೊಂಡು ಹೈನುಗಾರಿಕೆಯಿಂದ ಹೆಚ್ಚು ಲಾಭ ಪಡೆಯಬೇಕೆಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಸಂಘಕ್ಕೆ ಅತಿ ಹೆಚ್ಚು ಹಾಲು ಸರಬರಾಜು ಮಾಡಿದ ಮತ್ತು ಅತಿ ಹೆಚ್ಚು ಪಶು ಆಹಾರ ಖರೀದಿ ಮಾಡಿದ ಸದಸ್ಯರನ್ನು ಸಂಘದ ನಿವೃತ್ತ ಮುಖ್ಯ ಕಾರ್ಯನಿರ್ವಾಹಕ ಎಸ್.ಶಿವ ನಾಗಪ್ಪ ಬಹುಮಾನ ನೀಡಿ ಗೌರವಿಸಿದರು.
ತಾಪಂ ಮಾಜಿ ಅಧ್ಯಕ್ಷ ಎಸ್.ಎಸ್.ಮಧುಶಂಕರ್, ಎಸ್.ಪಿ.ಕುಮಾರಸ್ವಾಮಿ, ಮಾಜಿ ಅಧ್ಯಕ್ಷ ಎಸ್.ಎಂ.ಸದಾಶಿವಪ್ಪ, ಶಂಕ್ರಪ್ಪ, ಎಸ್.ಮಹದೇವಪ್ಪ, ಎಸ್.ಪಿ.ಸೋಮಶೇಖರ್, ಎಸ್.ನಾಗರಾಜು, ಬಸವಣ್ಣ, ಸದಾನಂದ, ಮಲ್ಲೇಶ ಪಟೇಲ್, ಕೆ.ಸುಬ್ಬಣ್ಣ, ಎಸ್.ನಾಗಭೂಷಣ್, ಎಸ್.ಆರ್. ಮೂರ್ತಿ, ಸ್ವಾಮಿ, ಕೊಂಡೆಗೌಡ, ಮಹಾದೇವಮ್ಮ ಸಂಘದ ಮುಖ್ಯ ಕಾರ್ಯನಿರ್ವಾಹಕ ಮಲ್ಲೇಶ್ ಹಾಲು ಪರೀಕ್ಷಕ ಗುರುಸ್ವಾಮಿ ಇದ್ದರು.
26ಬಿಜಿಆರ್.1: ಗುಂಡ್ಲುಪೇಟೆ ತಾಲೂಕಿನ ಬೇಗೂರು ಸಮೀಪದ ಸೋಮಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಆವರಣದಲ್ಲಿ ನಡೆದ ಸಂಘದ 2023-24ನೇ ವಾರ್ಷಿಕ ಸಾಮಾನ್ಯ ಸಭೆಯನ್ನು ಚಾಮುಲ್ ನಿರ್ದೇಶಕ ನಂಜುಂಡಪ್ರಸಾದ್ ಉದ್ಘಾಟಿಸಿದರು.