ಪ್ರತಿನಿಧಿ ವರದಿ ಕೊಳ್ಳೇಗಾಲ
ತಾಲೂಕಿನ ಚಿಲಕವಾಡಿ ಗ್ರಾಮದಲ್ಲಿ ಶುಕ್ರವಾರ ಹಾಡು ಹಗಲೇ ದುಷ್ಕರ್ಮಿಗಳು ಮನೆಯ ಬೀಗ ಮುರಿದು ಚಿನ್ನ, ಬೆಳ್ಳಿ ಹೊರತುಪಡಿಸಿ 18 ಸಾವಿರ ರೂ. ಕಳವು ಮಾಡಿದ್ದಾರೆ.
ಚಿಲಕವಾಡಿ ಬೆಟ್ಟದ ದೇವಸ್ಥಾನದ ಅರ್ಚಕ ನಟರಾಜು ಮನೆಯಲ್ಲಿ ಕಳವು ನಡೆದಿದೆ. ಮನೆಯಲ್ಲಿ ಯಾರು ಇಲ್ಲದ ಸಮಯವನ್ನು ನೋಡಿಕೊಂಡು ಶುಕ್ರವಾರ ಮಧ್ಯಾಹ್ನ ಸುಮಾರು 1.30 ರಿಂದ 3 ಗಂಟೆಯೊಳಗೆ ದುಷ್ಕರ್ಮಿಗಳು ಮನೆ ಬೀಗ ಹೊಡೆದಿದ್ದಾರೆ.
ಮನೆಯೊಳಗೆ ನುಗ್ಗಿದ ದುಷ್ಕರ್ಮಿಗಳು ಮನೆಯಲ್ಲಿದ್ದ ಚಿನ್ನ, ಬೆಳ್ಳಿ ಮತ್ತು ವಾಚ್ ಅನ್ನು ಅಲ್ಲಿಯೇ ಬಿಟ್ಟು ಕೇಲವ ಹಣವನ್ನು ಮಾತ್ರ ಕಳವು ಮಾಡಿರುವುದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ಈ ಸಂಬಂಧ ಅಗರ ಮಾಂಬಳ್ಳಿ ಠಾಣೆಯ ಎಸೈ ಕರಿಬಸಪ್ಪ, ಕಾನ್ ಸ್ಟೇಬಲ್ ಶಿವಕುಮಾರ್, ಶ್ರೀಶೈಲಾ, ಉಸ್ಮಾನ್ ಹಾಗೂ ಶ್ವಾನದಳ ಮತ್ತು ಬೆರಳಚ್ಚು ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿಗಳ ಪತ್ತೆಯಲ್ಲಿ ತೊಡಗಿದ್ದಾರೆ.