ಸಂಘದ ಆಡಳಿತಾಧಿಕಾರಿಯಿಂದ ಸಹಕಾರ ಸಂಘಗಳ ಉಪ ನಿಬಂಧಕರಿಗೆ ಪತ್ರ
2 ವರ್ಷದ ಹಿಂದೆ ಸೂಪರ್ ಸೀಡ್ ಆಗಿದ್ದ ಡಾ.ಬಿ.ಆರ್.ಅಂಬೇಡ್ಕರ್ ಸ್ಮಾರಕ ಸಂಘ
ಪ್ರತಿನಿಧಿ ವರದಿ ಕೊಳ್ಳೇಗಾಲ
ಪಟ್ಟಣದ ಭೀಮನಗರ ಬಡಾವಣೆಯ ಡಾ.ಬಿ.ಆರ್.ಅಂಬೇಡ್ಕರ್ ಸ್ಮಾರಕ ಸಂಘದ ಆಡಳಿತ ಮಂಡಳಿ ಪುನರ್ ರಚನೆಗೆ ಚುನಾವಣಾಧಿಕಾರಿ ನೇಮಕ ಮಾಡುವಂತೆ ಸಂಘದ ಆಡಳಿತಾಧಿಕಾರಿಯಾದ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಎ.ಎಂ.ಕೇಶವಮೂರ್ತಿ ಚಾ.ನಗರ ಜಿಲ್ಲೆಯ ಸಹಕಾರ ಸಂಘಗಳ ಉಪ ನಿಬಂಧಕ ಜ್ಯೋತಿ ಅರಸ್ ಅವರಿಗೆ ಪತ್ರ ಬರೆದಿದ್ದಾರೆ.
2008ರಲ್ಲಿ ಈ ಸಂಘ ಸ್ಥಾಪನೆಯಾಗಿದ್ದು, ನಂತರದ ಕೆಲವ ವರ್ಷದಲ್ಲಿ ಸಹಕಾರ ಇಲಾಖೆ ನಿಬಂಧನೆಗಳು ಹಾಗೂ ಬೈಲ ನಿಯಮಗಳನ್ನು ಉಲ್ಲಂಘಿಸಿದ ಹಿನ್ನೆಲೆ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರ ನಡುವೆ ಗೊಂದಲ ಉಂಟಾಗಿತ್ತು. ಮಾತ್ರವಲ್ಲದೇ, ಸಂಘದ ಮಾಜಿ ಕಾರ್ಯದರ್ಶಿ, ಸಂಘದ ಚಟುವಟಿಕೆ ವಿರುದ್ಧ ಸಹಕಾರ ಇಲಾಖೆಗೆ ದೂರು ನೀಡಿ ತನಿಖೆಗೆ ಆಗ್ರಹಿಸಿದ್ದರು. ಹಾಗಾಗಿ, ಸಹಕಾರ ಇಲಾಖೆ ಅಧಿಕಾರಿಗಳು ಪ್ರಕರಣದ ಕುರಿತು ಸುದೀರ್ಗ ವಿಚಾರಣೆ ನಡೆಸಿ, ಸಂಘದ ಆಡಳಿತ ಮಂಡಳಿ ವಜಾಗೊಳಿಸಲು ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದರು.
2022ರಲ್ಲಿ ಸಹಕಾರ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಸಂಘದ ಆಡಳಿತ ಮಂಡಳಿಯನ್ನು ಸೂಪರ್ ಸೀಡ್ ಮಾಡಿದರಲ್ಲದೇ, ಸಂಘಕ್ಕೆ ತಾಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರನ್ನು ಆಡಳಿತಾಧಿಕಾರಿಯನ್ನಾಗಿ ನೇಮಕ ಮಾಡಿತ್ತು. ಅಂತೆಯೇ, ಸಂಘದ ಆಡಳಿತಾಧಿಕಾರಿಗೆ ಕೆಲ ಷರತ್ತುಗಳನ್ನು ಕೂಡ ಸರ್ಕಾರ ವಹಿಸಿತ್ತು. ಅದೇನೆಂದರೆ, ಸಂಘದ ಪ್ರಭಾರ ಜವಾಬ್ದಾರಿವಹಿಸಿಕೊಂಡು ಅಲ್ಲಿನ ನ್ಯೂನತೆಗಳನ್ನು ಸರಿಪಡಿಸಿ, ಸಂಘದ ಆಡಳಿತ ಮಂಡಳಿಗೆ ಚುನಾವಣೆ ನಡೆಸಿ, ಚುನಾಯಿತ ನೂತನ ಆಡಳಿತ ಮಂಡಳಿಗೆ ಅಧಿಕಾರ ಹಸ್ತಾಂತರಿಸಿ. ಈ ಕುರಿತು ಸರ್ಕಾರಕ್ಕೆ ವರದಿಸಲ್ಲಿಸಬೇಕು ಎಂಬುದಾಗಿದೆ. ಸದ್ಯಕ್ಕೆ ಸಂಘದ ಜವಾಬ್ದಾರಿ ಹೊತ್ತಿರುವ ಆಡಳಿತಾಧಿಕಾರಿ ಅವದಿ 2024 ನವೆಂಬರ್ ವರೆಗಿದ್ದು, ಅಲ್ಲಿಯವರೆಗೆ ಸರ್ಕಾರದ ಎಲ್ಲ ಷರತ್ತುಗಳನ್ನು ಆಡಳಿತಾಧಿಕಾರಿ ಪೂರ್ಣಗೊಳಿಸಬೇಕಾದ ಅನಿವಾರ್ಯವಿದೆ.
ಇದರಿಂದ ಎಚ್ಚೆತ್ತ ಸಂಘದ ಆಡಳಿತಾಧಿಕಾರಿ ಸಂಘದ ಮಾಜಿ ಅಧ್ಯಕ್ಷ ಎಂ.ನಟರಾಜು ಅವರಿಗೆ ನೋಟಿಸ್ ನೀಡಿ ಸಂಘದ ಎಲ್ಲ ದಾಖಲಾತಿಗಳನ್ನು ನೀಡುವಂತೆ ತಿಳಿಸಿದ್ದು, ಇದಕ್ಕೆ ಸಮಜಾಯಿಸಿ ನೀಡಿರುವ ಅವರು, ತಮ್ಮಲ್ಲಿ ಯಾವುದೇ ದಾಖಲಾತಿಗಳು ಇರುವುದಿಲ್ಲ ಎಂದು ಹೇಳಿದ್ದಾರೆ.
ಇದೇ ವಿಚಾರಕ್ಕೆ ಮಾಜಿ ಕಾರ್ಯದರ್ಶಿ ಸಿ.ಪುಟ್ಟಬುದ್ಧಿಗೆ ನೀಡಿದ ನೋಟೀಸ್ ಪ್ರತಿಕ್ರಿಯಿಸಿ, ನನ್ನ ಬಳಿ ಒಂದೂ ದಾಖಲೆಗಳಿಲ್ಲ. ನನ್ನ ಹಿಂದಿನ ಕಾರ್ಯದರ್ಶಿ ಎಂ.ಪಾಪಣ್ಣ ಅವರ ಬಳಿ ಎಲ್ಲ ಲೆಕ್ಕ ಪತ್ರಗಳ ದಾಖಲೆಗಳು ಉಳಿದುಕೊಂಡಿದೆ ಎಂದರು. ಪರಿಣಾಮ ಇವುಗಳನ್ನು ಪಡೆದುಕೊಂಡಿರುವ ಆಡಳಿತಾಧಿಕಾರಿ, ಸಂಘಕ್ಕೆ ಹೊಸದಾಗಿ ಆಡಳಿತ ಮಂಡಳಿ ರಚಿಸಲು ಚುನಾವಣೆ ನಡೆಸುವಂತೆ ಸೆ.19 ರಂದು ಸಹಕಾರ ಸಂಘಗಳ ಉಪ ನಿಬಂಧಕರಿಗೆ ಪತ್ರ ಬರೆದಿದ್ದಾರೆ.
ಸಂಘದಲ್ಲಿರುವ ಒಟ್ಟು 21 ಸದಸ್ಯರ ಪಟ್ಟಿ, ಸಂಘದ ಬೈಲ, ಸಂಘ ನೋಂದಣಿ ಪ್ರಮಾಣ ಪತ್ರದ ನಕಲು ಪ್ರತಿಯನ್ನು ಉಪ ನಿಬಂಧಕರಿಗೆ ಕಳುಹಿಸಿಕೊಟ್ಟಿದ್ದು, ಇಷ್ಟರಲ್ಲಿಯೇ ಸಂಘದ ಆಡಳಿತ ಮಂಡಳಿ ರಚನೆಗೆ ಚುನಾವಣಾಧಿಕಾರಿ ನೇಮಕಗೊಳ್ಳುವ ಸಾಧ್ಯತೆ ಇದೆ. 15 ವರ್ಷದಿಂದ ಗೊಂದಲ ಮತ್ತು ವಿವಾದದ ಬೇಗೆಯಲ್ಲಿದ್ದ ಸಂಘಕ್ಕೆ ಪುನರ್ ಜೀವ ಸಿಗುವುದರಲ್ಲಿ ಯಾವುದೇ ಅನುಮಾನಗಳಿಲ್ಲ.
26ಕೆಜಿಎಲ್-1 ಫೋಟೋ ಶೀರ್ಷಿಕೆ: ಎ.ಎಂ.ಕೇಶವಮೂರ್ತಿ