ಪ್ರತಿನಿಧಿ ವರದಿ ಹನೂರು
ಕೌದಳ್ಳಿ ಸರ್ಕಲ್ ವ್ಯಾಪ್ತಿಯ ಕುರಟ್ಟಿ ಹೊಸೂರು, ಶೆಟ್ಟಳ್ಳಿ ಗ್ರಾಪಂ ವ್ಯಾಪ್ತಿಯ ಭದ್ರಯ್ಯನ ಹಳ್ಳಿ ಅಂಗನವಾಡಿ ಕೇಂದ್ರದಲ್ಲಿ ಅರಬಗೆರೆ, ಹೊಸಳ್ಳಿ, ಎಲ್ಪಿಎಸ್ ಕ್ಯಾಂಪ್, ಶೆಟ್ಟಳ್ಳಿ, ದಂಟಳ್ಳಿ ಕೇಂದ್ರಗಳಲ್ಲಿ ಶನಿವಾರ ಪೋಷಣ ಅಭಿಯಾನ ಕಾರ್ಯಕ್ರಮ ನಡೆಯಿತು.
ಎಲ್ಪಿಎಸ್ ಕ್ಯಾಂಪ್ನ ಅಂಗನವಾಡಿ ಶಿಕ್ಷಕಿ ಸರೋಜ ಮಾತನಾಡಿ, ಮಕ್ಕಳು ಮತ್ತು ಗರ್ಭಿಣಿ ಬಾಣಂತಿಯರು ಪೌಷ್ಟಿಕ ಆಹಾರ ಸೇವನೆ ಮಾಡಬೇಕು. ಸ್ಥಳೀಯವಾಗಿ ಸಿಗುವ ಪೌಷ್ಟಿಕ ಆಹಾರ ಪದಾರ್ಥಗಳನ್ನು ಬಳಸಿಕೊಂಡು ಪೌಷ್ಟಿಕ ಆಹಾರ ಸೇವನೆ ಮಾಡಬೇಕು. ಆ ನಿಟ್ಟಿನಲ್ಲಿ ಸರ್ಕಾರ ಸಹ ಅದಕ್ಕೆ ಪೂರಕ ಪೌಷ್ಟಿಕ ಆಹಾರ ಒದಗಿಸುತ್ತಿದೆ. ಸೊಪ್ಪು, ತರಕಾರಿ ಹಾಗೂ ಹಣ್ಣು ಹಂಪಲು, ಮೊಳಕೆ ಕಾಳುಗಳನ್ನು ತಿನ್ನುವ ಹವ್ಯಾಸ ಬೆಳೆಸಿಕೊಂಡು ಆರೋಗ್ಯವಾಗಿರಬೇಕು ಎಂದು ಸಲಹೆ ನೀಡಿದರು.
ಗ್ರಾಮದ ಇಬ್ಬರು ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮ ಏರ್ಪಡಿಸಿದ್ದು ಗಮನ ಸೆಳೆಯಿತ್ತು. ಅಂಗನವಾಡಿ ಶಿಕ್ಷಕಿ ಸರೋಜ, ಚಿತ್ರಲೇಖ, ಲಕ್ಷ್ಮಿ, ಪ್ರಿಯ, ಸುಧಾರಾಣಿ, ಚಿತ್ರ, ಗ್ರಾಮಸ್ಥರು, ಮಕ್ಕಳು ಉಪಸ್ಥಿತರಿದ್ದರು.