ಮೈಸೂರು: ಮೈಸೂರಿನಲ್ಲಿ ನಡೆಯುತ್ತಿದ್ದ ರೇವ್ ಪಾರ್ಟಿ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಯುವತಿಯರನ್ನು ಸೇರಿ 50 ಕ್ಕೂ ಅಧಿಕ ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ಶನಿವಾರ ತಡರಾತ್ರಿ ಮೈಸೂರು ಹೊರವಲಯದಲ್ಲಿ ರೇಪ್ ಪಾರ್ಟಿ ಆಯೋಜನೆಯಾಗಿತ್ತು. ಮಾಹಿತಿ ಅರಿತ ಇಲವಾಲ ಠಾಣೆ ಪೊಲೀಸರು ಸ್ಥಳದ ಮೇಲೆ ಏಕಾಏಕಿ ದಾಳಿ ಮಾಡಿದ್ದಾರೆ. ಈ ವೇಳೆ ನಡೆಯುತ್ತಿದ್ದ ಪಾರ್ಟಿಗೆ ಬ್ರೇಕ್ ಹಾಕಿ ಯುವತಿಯರು ಸೇರಿದಂತೆ 50 ಕ್ಕೂ ಹೆಚ್ಚು ಮಂದಿಯನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. 30 ಕ್ಕೂ ಹೆಚ್ಚು ಕಾರುಗಳನ್ನ ವಶಪಡಿಸಿಕೊಳ್ಳಲಾಗಿದೆ.
ಕೆ ಆರ್ ಎಸ್ ಜಲಾಶಯದ ಹಿನ್ನೀರು ಪ್ರದೇಶದ ಮೀನಾಕ್ಷಿಪುರದ ಖಾಸಗಿ ಜಮೀನಿನಲ್ಲಿ ನಡೆಯುತ್ತಿದ್ದ ರೇವ್ ಪಾರ್ಟಿ ಮೇಲೆ ದಾಳಿ ನಡೆಸಿರುವ ಪೊಲೀಸರು, ಉದ್ಯಮಿಗಳು, ವಿದ್ಯಾರ್ಥಿಗಳು ಹಾಗೂ ಯುವತಿಯರು ಸೇರಿದಂತೆ ಐವತ್ತಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದಿದ್ದಾರೆ. ಚೋಳೇನಹಳ್ಳಿ ಗ್ರಾಮದ ಶಂಕರ್ ಎಂಬವವರಿಗೆ ಸೇರಿದ ಜಮೀನಿನಲ್ಲಿ ರೇವ್ ಪಾರ್ಟಿ ಆಯೋಜಿಸಿತ್ತೆಂದು ಹೇಳಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ವ್ಯಕ್ತಿಯೊಬ್ಬ ಪ್ರಚಾರ ಮಾಡಿದ್ದ ಹಿನ್ನಲೆ ಸುಮಾರು 25 ಕ್ಕೂ ಹೆಚ್ಚು ಜೋಡಿಗಳು ಪಾರ್ಟಿಗೆ ನೊಂದಾಯಿಸಿಕೊಂಡಿದ್ದರು. ಮಾಹಿತಿ ಅರಿತ ಇಲವಾಲ ಪೊಲೀಸ್ ಠಾಣೆಯ ಪಿಎಸ್ಐ ಮಂಜುನಾಥ ನಾಯಕ್ ನೇತೃತ್ವದ ತಂಡ ಪಾರ್ಟಿ ಮೇಲೆ ದಾಳಿ ನಡೆದಿಸಿದೆ. ಪಾರ್ಟಿಯಲ್ಲಿ ಮಾದಕ ವಸ್ತು ಸೇವಿಸಿದ ಪರಿಣಾಮ ಖಾಸಗಿ ಜಮೀನಿನಲ್ಲಿ 15ಕ್ಕೂ ಹೆಚ್ಚು ಯುವತಿಯರು ಪ್ರಜ್ಞೆ ತಪ್ಪಿ ಬಿದ್ದಿದ್ದರು ಹಾಗೂ ಮದ್ಯಪಾನ ಸೇವಿಸಿ ಅನೈತಿಕ ನೃತ್ಯಕೂಟದಲ್ಲಿ ತೊಡಗಿದ್ದರು ಎನ್ನಲಾಗಿದೆ.
ವಶಪಡಿಸಿಕೊಳ್ಳಲಾದ ಯುವಕ ಯುವತಿಯರನ್ನ ವೈದ್ಯಕೀಯ ತಪಾಸಣೆಗೆ ಪೊಲೀಸರು ಒಳಪಡಿಸಿದ್ದಾರೆ. ಪಾರ್ಟಿಗಾಗಿ ಬಳಸಲಾದ ಸಂಗೀತ ಉಪಕರಣಗಳನ್ನೂ ಸಹ ಪೊಲೀಸರು ವಶಪಡಿಸಿಕೊಂಡಿದ್ದಾರೆ.ಇನ್ನು ರೇವ್ ಪಾರ್ಟಿ ನಡೆಸಿದವರ ವಿರುದ್ಧ ಇಲವಾಲ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲು ಮಾಡಲಾಗಿದ್ದು, ಬಿಎನ್ ಎನ್ ಎಸ್ ಕಾಯ್ದೆ ಅಡಿ 15(a) 32,34,38(a)K.E. Act. ರೀತಿ ಠಾಣಾ ಮೊ.ಸಂಖ್ಯೆ 210/2024 ಅಡಿ ಕಲಂ 221,223,12(2) ರನ್ವಯ ಪ್ರಕರಣ ದಾಖಲು ಮಾಡಲಾಗಿದೆ. ಅರುಣ್, ವಿಷ್ಣು, ಭವಿಷ್ಯತ್, ಮದನ್, ಮಲ್ಲಿಕಾರ್ಜುನ, ಸಂತೋಷ್, ಸಾಗರ್, ಕರಣ್ ಎಂಬುವವರಿಂದ ರೇವ್ ಪಾರ್ಟಿ ಆಯೋಜನೆ ಮಾಡಲಾಗಿದ್ದು, ಯಾವುದೇ ಪರವಾನಗಿ ಇಲ್ಲದೆ ರೇವ್ ಪಾರ್ಟಿ ಆಯೋಜನೆ ಮಾಡಿದ ಇವರುಗಳ ಮೇಲೆ ಪ್ರಕರಣ ದಾಖಲಾಗಿದೆ. ಅಲ್ಲದೆ ಪೊಲೀಸ್ ಉಪನಿರೀಕ್ಷಕ ಮಂಜುನಾಥ್ ನಾಯಕ್ ಮೇಲೆ ಹಲ್ಲೆ ಮಾಡಿರುವ ಇವರುಗಳ ಮೇಲೆ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಕ್ಕೆ ಕಾನೂನು ಕ್ರಮ ಜರುಗಿಸುವಂತೆ ಎಫ್ಐಆರ್ ದಾಖಲಿಸಲಾಗಿದೆ.