ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ 2024ಕ್ಕೆ ಸಕಲ ಸಿದ್ಧತೆಗಳು ಭರದಿಂದ ಸಾಗಿದೆ. ಜಂಬುಸವಾರಿಗೆ ಬೆರಳೆಣಿಕೆ ದಿನಗಳಷ್ಟೇ ಬಾಕಿ ಉಳಿದಿದೆ. ಈ ಹಿನ್ನೆಲೆಯಲ್ಲಿ ದಸರಾ ಗಜಪಡೆಗೆ ತಾಲೀಮು ಚುರುಕುಗೊಳಿಸಲಾಗಿದೆ. ಭಾನುವಾರದಂದು ದಸರಾ ಗಜಪಡೆಗೆ 2ನೇ ಸುತ್ತಿನ ಸಿಡಿಮದ್ದು ಸಿಡಿಸುವ ತಾಲೀಮು ನಡೆಸಲಾಯಿತು. ಈ ವೇಳೆ ಸಿಡಿಮದ್ದಿನ ಶಬ್ಧಕ್ಕೆ ಹಿರಣ್ಯಾ ಆನೆ ಬೆಚ್ಚಿದ್ದು, ಕಾವಾಡಿಯನ್ನೇ ಎತ್ತಿ ಪಕ್ಕಕ್ಕೆ ನಿಲ್ಲಿಸಿದೆ. ಆನೆ ಬೆಚ್ಚಿಬಿದ್ದ ಕಾರಣ ಭಾರಿ ಅನಾಹುತ ಸಂಭವಿಸುವುದರಲ್ಲಿತ್ತು. ಸದ್ಯ ವಿಡೀಯೋ ಎಲ್ಲೆಡೆ ವೈರಲ್ ಆಗುತ್ತಿದ್ದು, ಆ ದೃಶ್ಯ ಇಲ್ಲಿದೆ ನೋಡಿ.
ಸಿಡಿಮದ್ದು ಸದ್ದಿಗೆ ಬೆಚ್ಚಿದ ಹಿರಣ್ಯ ಆನೆ ಸರದಿಯಿಂದ ಆಚೆ ಬಂದು ಓಡಲು ಯತ್ನಿಸಿತು. ತಕ್ಷಣವೇ ಕಾರ್ಯಪ್ರವೃತ್ತರಾದ ಮಾವುತ, ಕಾವಾಡಿಗಳು ಆನೆಯನ್ನು ಹೇಗೋ ಮಾಡಿ ನಿಯಂತ್ರಿಸಿದರು. ಸಿಡಿಮದ್ದು ಸದ್ದು ಕೇಳಿ ಹಿರಣ್ಯ ಆನೆ ಬೆಚ್ಚಿಬಿದ್ದು ಓಡಲು ಶುರು ಮಾಡಿತು. ಆನೆ ಓಡಲು ಮುಂದಾದ ಕೂಡಲೇ ಮಾವುತ ಶಫಿಯುಲ್ಲಾ ಹಾಗೂ ಕಾವಾಡಿ ಮನ್ಸೂರ್ ಧೈರ್ಯದಿಂದ ಅದನ್ನು ನಿಯಂತ್ರಿಸಲು ಮುಂದಾಗಿದ್ದಾರೆ. ಮಾವುತ ಶಫಿಯುಲ್ಲಾ ಆನೆಯ ಮೇಲಿದ್ದರೆ, ಕೆಳಗಿದ್ದ ಕಾವಾಡಿ ಮನ್ಸೂರ್ ಆನೆಯ ಕಿವಿಗೆ ಅಂಕುಶ ಹಾಕಿ ತಡೆದು ನಿಲ್ಲಿಸಿದರು. ಒಂದು ವೇಳೆ ಆನೆಯನ್ನು ನಿಯಂತ್ರಣ ಮಾಡಲು ಸಾಧ್ಯವಾಗದೇ ಹೋಗಿದ್ದರೆ ಅದು ಜನರತ್ತ ಓಡಿ ಅನಾಹುತ ಸಂಭವಿಸುತ್ತಿತ್ತು. ಇದೀಗ ಮಾವುತ ಹಾಗೂ ಕಾವಾಡಿಯ ಸಾಹಸಕ್ಕೆ ಜನರಿಂದ ಮೆಚ್ಚುಗೆಯ ಮಹಾಪೂರವೇ ವ್ಯಕ್ತವಾಗುತ್ತಿದೆ.