ಮೈಸೂರು: ನಮ್ಮ ಹೆತ್ತ ತಾಯಿಯ ಮೇಲಾಣೆ ನಾನು ಯಾವುದೇ ರೀತಿಯಲ್ಲೂ ಸಿದ್ದರಾಮಯ್ಯ ಅವರಿಗೆ ಅನ್ಯಾಯ ಮಾಡಿಲ್ಲ. ಆದರೆ ನಮ್ಮ ಪಕ್ಷದವರೇ ನನ್ನ ತೇಜೋವಧೆ ಮಾಡ್ತಾ ಇದ್ದಾರೆ ಎಂದು ಮುಡಾ ಅಧ್ಯಕ್ಷ ಕೆ ಮರೀಗೌಡ ಬೇಸರ ವ್ಯಕ್ತಪಡಿಸಿದ್ದಾರೆ.
ಮೈಸೂರಿನಲ್ಲಿ ಇಂದು ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಅವರನ್ನು ಮೈಸೂರಿನ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸುವ ವೇಳೆ ನಡೆದ ಗಲಾಟೆ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ ಅಲ್ಲದೆ ತಮ್ಮ ಮೇಲೆ ಆದ ಗಲಾಟೆಗೆ ಬೇಸರ ಪಟ್ಟಿದ್ದಾರೆ. ನಮ್ಮ ಹೆತ್ತ ತಾಯಿಯ ಮೇಲಾಣೆ, ನನ್ನ ಮನೆ ದೇವರ ಮೇಲೆ ಆಣೆ ಮಾಡಿ ಹೇಳ್ತೀನಿ ನಾನು ಯಾವುದೇ ರೀತಿಯಲ್ಲೂ ಸಿದ್ದರಾಮಯ್ಯ ಅವರಿಗೆ ಅನ್ಯಾಯ ಮಾಡಿಲ್ಲ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ನಾಳೆ ಸಿಎಂ ಬರ್ತಾರೆ ಅಂತಾ ಹೇಳಿದ್ದರು. ಅವರು ಜನ ಜಾಸ್ತಿ ಸೇರಿಸಿದ್ರೇ ಅನುಕೂಲ ಆಗುತ್ತೆ ಅಂತಾ ಹೇಳಿದ್ರು ಅದರಂತೆ ನಾನೇ ಬ್ಲಾಕ್ ಅಧ್ಯಕ್ಷರಿಗೆ ಹೇಳಿ ಜನರನ್ನು ಸೇರಿಸಿದ್ದೆ.
ವರುಣ ಕ್ಷೇತ್ರದ ಕೆಲ ಮುಖಂಡರು ನನ್ನ ಮೇಲೆ ಮುಗಿ ಬಿದ್ದು, ಸಿದ್ದರಾಮಯ್ಯ ಅವರ ಸ್ಥಿತಿಗೆ ನೀವೇ ಕಾರಣ ಎಂದು ಮಾತನಾಡಿದ್ರು.ಆ ವೇಳೆ ಯಾವುದೇ ಗಲಾಟೆ ಆಗಬಾರದು ಎಂದು ನಾನು ಹೊರಗೆ ಬಂದೆ. ನಾನು ಮುಡಾದ ಅಧ್ಯಕ್ಷ ಆದ ಮೇಲೆ ಸಿದ್ದರಾಮಯ್ಯ ಅವರಿಗೆ ಈ ಸ್ಥಿತಿ ಬಂದಿದೆ ಅಂತಿದ್ದಾರೆ ದಯಮಾಡಿ ಇಂತಹ ಆರೋಪ, ತೇಜೋವಧೆ ಮಾಡಬೇಡಿ.
ಭಾಸ್ಕರ್ ಎಂಬ ನಮ್ಮ ಮುಖಂಡ ನನ್ನ ಮೇಲೆ ಹಲ್ಲೆ ಮಾಡಲು ಬಂದಿದ್ರು. ಇದರಿಂದ ನನ್ನ ಮನಸ್ಸಿಗೆ ಬಹಳ ನೋವಾಗಿದೆ. ನಮ್ಮ ಪಕ್ಷದವರೇ ನನ್ನ ತೇಜೋವಧೆ ಮಾಡ್ತಾ ಇದ್ದಾರೆ ಎಂದು ಬೇಸರ ಪಟ್ಟಿದ್ದಾರೆ. ನನ್ನ ಮೇಲೆ ಇಲ್ಲ ಸಲ್ಲದ ಆರೋಪ ಮಾಡ್ತಾ ಇದ್ದಾರೆ. ನನ್ನನ್ನು ಮೂಡಾ ಅಧ್ಯಕ್ಷನನ್ನಾಗಿ ಮಾಡಿದ್ದು ಸಿಎಂ ಸಿದ್ದರಾಮಯ್ಯ ಸಾಹೇಬರು. ಮಾರ್ಚ್ನಲ್ಲಿ ನನ್ನ ನೇಮಕ ಆಯ್ತು ಅದಾದ ನಂತರ ಚುನಾವಣಾ ನೀತಿ ಸಂಹಿತೆ ಬಂತು.50:50 ಅನುಪಾತದಲ್ಲಿ ಮಾರಗೌಡನಹಳ್ಳಿಯ ಸರ್ವೆ ನಂಬರ್ 8.20 ಎಕರೆಯನ್ನು 50:50 ಅನುಪಾತದಲ್ಲಿ ನಿವೇಶನ ಕೊಡಬೇಡಿ ಅಂತಾ ಹೇಳಿದ್ರು. ಆದರೂ ಅಧಿಕಾರಿಗಳು 50:50 ಅನುಪಾತದಲ್ಲಿ ನಿವೇಶನ ಕೊಟ್ಟಿದ್ದರು. ಈ ಬಗ್ಗೆ ಆಯ್ತುಕ್ತರಿಗೆ ಪತ್ರ ಬರೆದಿದ್ದೆ. ಹರೀಶ್ಗೌಡ ಹೇಳಿದ ಕಾರಣಕ್ಕೆ ಅಷ್ಟೇ, ನಾನು ಸಿಎಂಗೆ ಪತ್ರ ಕೊಟ್ಟೆ ಅಷ್ಟೇ. ನಾನು ಸಿದ್ದರಾಮಯ್ಯ ಅವರಿಗೆ ದ್ರೋಹ ಮಾಡುವ ಕೆಲಸ ಮಾಡಿಲ್ಲ. 40 ವರ್ಷದಿಂದ ಅವರೊಂದಿಗೆ ಇದ್ದೇನೆ. ನಾನು ಸಿದ್ದರಾಮಯ್ಯ ಅವರಿಗೆ ಎಂದು ದ್ರೋಹ ಮಾಡಿಲ್ಲ. ನನಗೀಗ 73 ವರ್ಷ, ಇದೀಗ ಅನಾರೋಗ್ಯಕ್ಕೀಡಾಗಿದ್ದೇನೆ. ನನ್ನ ಪಕ್ಷದಿಂದಲೇ ನನಗೆ ನಿರಂತರ ತೇಜೋವಧೆ ಆಗ್ತಿದೆ.
ಬೇರೆ ಪಕ್ಷದವರು ನನ್ನ ವಿರುದ್ಧ ಮಾತಾಡ್ತಿಲ್ಲ, ನನ್ನ ಪಕ್ಷದವರೇ ನನ್ನ ವಿರುದ್ಧ ಮಾತಾಡುತ್ತಿದ್ದಾರೆ. ಕಾಂಗ್ರೆಸ್ ಅಧ್ಯಕ್ಷರು ಇಂತಹವರ ವಿರುದ್ಧ ಕ್ರಮ ಕೈಗೊಳ್ಳಬೇಕು. ನಾನು ಪಕ್ಷಕ್ಕಾಗಿ ಸಾಕಷ್ಟು ದುಡಿದ್ದಿದ್ದೇನೆ.
ವೈದ್ಯರು ನನಗೆ ವಿಶ್ರಾಂತಿ ಪಡೆಯಲು ಹೇಳಿದ್ದರೂ ಸಹ ಜನರಿಗೆ ಸತ್ಯ ಗೊತ್ತಾಗಲಿ ಎಂದು ಬಂದಿದ್ದೇನೆ ಎಂದರು.
ಕಾಂಗ್ರೆಸ್ನಲ್ಲಿ ಇರುವವರೇ ನನ್ನ ತೇಜೋವಧೆ ಮಾಡಿದ್ದಾರೆ, ನನ್ನನ್ನು ತೇಜೋವಧೆ ಮಾಡುವವರಿಗೆ ನೋಟೀಸ್ ಕೊಡಬೇಕು. ದಯವಿಟ್ಟು ನನ್ನ ತೇಜೋವಧೆ ಮಾಡಬೇಡಿ. ನನಗೆ ನೋವು ಕೊಡಬೇಡಿ. 50:50 ಅನುಪಾತ ಬಂದಿರೋದು 2020ರಲ್ಲಿ. ಆ ವೇಳೆ ಕಾನೂನು ಬಾಹಿರ ಕೆಲಸಗಳನ್ನು ಮಾಡಿದ್ದಾರೆ. ಬಿಜೆಪಿಯವರೇ ಅಧಿಕಾರದಲ್ಲಿ ಇದ್ದಿದ್ದು, ಪಾರ್ವತಮ್ಮ ಅವರಿಗೆ 2021ರಲ್ಲಿ ನಿವೇಶನ ನೀಡಿದ್ದಾರೆ.ಪಾರ್ವತಮ್ಮ ಅವರಿಗೆ ನಿವೇಶನ ನೀಡಿರುವುದು ಕಾನೂನಾತ್ಮಕವಾಗಿಯೇ ಇದೆ. ನನಗೂ ಅದಕ್ಕೂ ಯಾವುದೇ ಸಂಬಂಧ ಇಲ್ಲ. ನಾನು ಅಧಿಕಾರಕ್ಕೆ ಬಂದಿದ್ದು ಮಾರ್ಚ್ 1, 2024ರಂದು ಎಂದು ಹೇಳಿಕೆ ನೀಡಿದ್ದಾರೆ.
ಕಾರ್ಯಕರ್ತರು ರಾಜೀನಾಮೆ ಕೊಡಿ ಅಂತಾರೆ, ಆದರೆ ನನಗೆ ಸಿದ್ದರಾಮಯ್ಯ ಅವರು ಹೈಕಮಾಂಡ್. ಅವರು ಹೇಳಿದರೆ ರಾಜೀನಾಮೆ ಕೊಡ್ತೀನಿ. ಸಿಎಂ ಸಿದ್ದರಾಮಯ್ಯ ಪರಮಾತ್ಮ, ಸಿದ್ದರಾಮಯ್ಯ ನನ್ನ ಮನೆ ದೇವರು ಸಿದ್ದರಾಮಯ್ಯನವರಿಗೆ ದ್ರೋಹ ಮಾಡುವಂತಹ ಕೆಲಸವನ್ನು ನಾನು ಮಾಡಿಲ್ಲ, ಮಾಡವುದೂ ಇಲ್ಲ. ಮುಡಾದ ಈ ಎಲ್ಲಾ ಹಗರಣ ಆಗಿದ್ದು ಬಿಜೆಪಿಯ ಅವಧಿಯಲ್ಲಿ. ಈ ಹಿಂದಿನ ಆಯುಕ್ತರಾದ ದಿನೇಶ್ ಅವಧಿಯಲ್ಲಿ ಆಗಿರೋದು. ಯಾಕೆ ಅಂದು ಅವರ ವಿರುದ್ಧ ಬಿಜೆಪಿ ಕ್ರಮ ಕೈಗೊಂಡಿಲ್ಲ.ಇದೆಲ್ಲಾ ಬಿಜೆಪಿ ಅವಧಿಯಲ್ಲೇ ಆಗಿರೋದು. ಸಿದ್ದರಾಮಯ್ಯ ಅವರು ನ್ಯಾಯಯುತವಾಗಿ ನಡೆದುಕೊಂಡಿದ್ದಾರೆ ಎಂದರು.