ಮೈಸೂರು: ಮೈಸೂರಿನಲ್ಲಿ ಖ್ಯಾತ ವೈದ್ಯೆ ಡಾ. ವಿದ್ಯಾಧರೆ ನಿಗೂಢವಾಗಿ ಸಾವನಪ್ಪಿದ್ದಾರೆ. ನಗರದ ಚೆಲುವಾಂಬ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ವಿದ್ಯಾಧರೆ (42) ತಮ್ಮ ಲಕ್ಷ್ಮೀಪುರಂನ ಅಪಾರ್ಟ್ಮೆಂಟ್ನಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ. ಮೃತರ ಪತಿ ಡಾ.ಷಣ್ಮುಖ ಕೂಡ ಕೆ.ಆರ್.ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ. ದಂಪತಿಗಳು ಮೂವರು ಮಕ್ಕಳೊಂದಿಗೆ ಮೈಸೂರಿನಲ್ಲಿ ವಾಸವಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ಕರ್ತವ್ಯ ಮುಗಿಸಿ ಶನಿವಾರ ರಾತ್ರಿ ಮನೆಗೆ ಬಂದ ವಿದ್ಯಾಧರೆ, ಮಕ್ಕಳೊಂದಿಗೆ ರೂಮ್ ನಲ್ಲಿ ಮಲಗಿದ್ದಾರೆ. ಆದರೆ ಭಾನುವಾರ ಬೆಳಿಗ್ಗೆ 9 ಗಂಟೆಯಾದರೂ ಹೊರ ಬಾರದ ಕಾರಣ ಅನುಮಾನಗೊಂಡ ಪತಿ ಡಾ.ಷಣ್ಮುಖ, ಕೊಠಡಿ ಪರೀಕ್ಷಿಸಿದ್ದು, ಪತ್ನಿ ವಿದ್ಯಾಧರೆ ಮೃತಪಟ್ಟಿರುವುದು ಗೊತ್ತಾಗಿದೆ. ಇದೀಗ ಅವರ ಸಾವಿನ ಬಗ್ಗೆ ಅನುಮಾನವಿದೆ ಎಂದು ಮೃತರ ಸಹೋದರ ಶ್ರೀಕಾಂತ್ ದೂರು ನೀಡಿದ್ದು, ಬೆರಳಚ್ಚು ತಂಡದೊಂದಿಗೆ ವಿಧಿ ವಿಜ್ಞಾನ ಪ್ರಯೋಗಾಲಯದ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ವಿವಿಧ ಆಯಾಮಗಳಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.