ಮೈಸೂರು: ಪಾನಿಪುರಿ ವ್ಯಾಪಾರಿಯೊಬ್ಬರನ್ನು ಹನಿ ಟ್ರಾಪ್ ಮೂಲಕ ಬಲೆಗೆ ಬೀಳಿಸಿದ ತಂಡವೊಂದು ಅವರಿಂದ 75 ಸಾವಿರ ಸುಲಿಗೆ ಮಾಡಿದ ಘಟನೆ ಮೈಸೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ನಂಜನಗೂಡಿನ ನಿವಾಸಿ ಪಾನಿಪುರಿ ವ್ಯಾಪಾರಿ ಮದನ್ ಲಾಲ್ ಗಯಾರಿ ಹನಿಟ್ರಾಪ್ ಗೆ ಒಳಗಾದವರು. ಕುಖ್ಯಾತ ರೌಡಿ ಶೀಟರ್ ಸೈಯದ್ ಶಾಬಾಜ್, ನೇಹಾ, ಸೈಯದ್ ಮುದಾಸರ್, ಕಫೀಉಲ್ಲಾ, ಸಿದ್ದಿಖ್ ಬಂಧಿತ ಆರೋಪಿಗಳು.
ಡಕಾಯಿತಿ, ಕಳ್ಳತನ, ಸುಲಿಗೆ, ಕೊಲೆ ಬೆದರಿಕೆ, ವಾಹನ ಕಳುವು ಸೇರಿದಂತೆ 14 ಪ್ರಕರಣಗಳನ್ನು ಎದುರಿಸುತ್ತಿರುವ ಸೈಯದ್ ಶಾಬಾಜ್ ಕೃತ್ಯದ ರೂವಾರಿಯಾಗಿದ್ದು, ಈತ ನೇಹಾಳನ್ನು ಬಳಸಿಕೊಂಡು ಸೈಯದ್ ಶಾಬಾಜ್ ಪಾನಿಪುರಿ ವ್ಯಾಪಾರಿಯನ್ನು ಬುಟ್ಟಿಗೆ ಹಾಕಿಕೊಂಡಿದ್ದಾನೆ. ಬಳಿಕ ನೇಹಾ ಮೂಲಕ ರಮಾಬಾಯಿನಗರಕ್ಕೆ ಪಾನಿಪುರಿ ವ್ಯಾಪಾರಿಯನ್ನು ಕರೆಸಿ ಮನೆಯೊಂದರಲ್ಲಿ ಟ್ರಾಪ್ ಮಾಡಿದ್ದಾರೆ. ನೇಹಾಳೊಂದಿಗೆ ಬೆತ್ತಲೆ ಫೋಟೋ ತೆಗೆದು ನಂತರ ಹಣಕ್ಕೆ ಬ್ಲಾಕ್ ಮೇಲ್ ಮಾಡಿದ್ದಾರೆ. ಜುಲೈ ತಿಂಗಳಲ್ಲಿ ಮದನ್ ಲಾಲ್ ಗಯಾರಿಯನ್ನು ಟ್ರಾಪ್ ಮಾಡಿ ನಂತರ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಹಣ ಕೊಡದಿದ್ದಲ್ಲಿ ಬೆತ್ತಲೆ ಇರುವ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡುವುದಾಗಿ ಬೆದರಿಸಿದ್ದಾರೆ. ಗೌರವಕ್ಕೆ ಹೆದರಿದ ಮದನ್ ಲಾಲ್ ಗಯಾರಿ ಹಂತ ಹಂತವಾಗಿ 75800 ರೂಪಾಯಿ ಕೊಟ್ಟಿದ್ದಾರೆ. ನಂತರವೂ ಹಣದ ಬೇಡಿಕೆ ಹೆಚ್ಚಾದಾಗ ಮೈಸೂರು ಗ್ರಾಮಾಂತರ ಠಾಣೆ ಪೊಲೀಸರ ಮೊರೆ ಹೋಗಿದ್ದಾರೆ. ಪ್ರಕರಣ ಸಂಬಂಧ ಕೂಡಲೇ ಕಾರ್ಯಪ್ರವೃತ್ತರಾದ ಗ್ರಾಮಾಂತರ ಪೊಲೀಸರು ನೇಹಾ, ಸೈಯದ್ ಮುದಾಸರ್, ಕಫೀಉಲ್ಲಾ, ಸಿದ್ದಿಖ್, ಪ್ರಮುಖ ಆರೋಪಿ ಸೈಯದ್ ಶಾಬಾಜ್ ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 8 ಮಂದಿ ತಂಡದಿಂದ ಕೃತ್ಯ ನಡೆದಿದ್ದು ಮೂವರು ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ.