ಮೈಸೂರು: ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಪಡೆದುಕೊಂಡಿದ್ದ ಮೂಡಾ ಸೈಟ್ ಹಿಂತಿರುಗಿಸಿದ ವಿಚಾರವಾಗಿ ಮುಡಾ ಆಯುಕ್ತ ರಘುನಂದನ್ ಪ್ರತಿಕ್ರಿಯೆ ನೀಡಿದ್ದು, ಇಂದು ಬೆಳಿಗ್ಗೆ ಪಾರ್ವತಿ ಅವರ ಪುತ್ರ, ಎಂ ಎಲ್ ಸಿ ಡಾ ಯತಿಂದ್ರ ಮುಡಾ ಕಚೇರಿಗೆ ಬಂದಿದ್ದರು. ಬಂದ ವೇಳೆ 14 ಸೈಟ್ ಗಳನ್ನು ಹಿಂತಿರುಗಿಸುವ ಬಗ್ಗೆ ಪತ್ರ ನೀಡಿದ್ದಾರೆ ಎಂದಿದ್ದಾರೆ. ಮುಡಾ ವಿಚಾರವಾಗಿ ಹಲವಾರು ಆರೋಪಗಳನ್ನು ಎದುರಿಸುತ್ತಿರುವ ಸಿಎಂ ಸಿದ್ದರಾಮಯ್ಯ ವಿರುದ್ಧ FIR ದಾಖಲಾದ ಬೆನ್ನಲ್ಲೆ ಸೆ.30ರಂದು ಸಿಎಂ ಪತ್ನಿ ಬದಲಿ ನಿವೇಶನಗಳನ್ನು ಹಿಂತಿರುಗಿಸುವುದಾಗಿ ಬಹಿರಂಗ ಪತ್ರವೊಂದನ್ನು ಬರೆದಿದ್ದರು.
ಇಂದು ಇದೇ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಪುತ್ರ ಎಂ ಎಲ್ ಸಿ ಡಾ.ಯತೀಂದ್ರ ಮುಡಾ ಕಚೇರಿಗೆ ಭೇಟಿ ನೀಡಿದ್ದು, ನಿವೇಶನಗಳನ್ನು ಹಿಂತಿರುಗಿಸುವುದಾಗಿ ಪತ್ರವನ್ನು ನೀಡಿದ್ದಾರೆ. ಈ ಬಗ್ಗೆ ಕಾನೂನು ಸಲಹೆಗಾರರೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ನಿವೇಶನ ಹಿಂತಿರುಗಿಸಿದರೆ, ವಾಪಸ್ ತೆಗೆದುಕೊಳ್ಳಬಹುದಾ ಎನ್ನುವ ಮಾಹಿತಿ ತಿಳಿದುಕೊಳ್ಳಲಾಗುವುದು ಎಂದಿದ್ದಾರೆ. ಇನ್ನು ಸ್ವಇಚ್ಚೆಯಿಂದ 14 ಸೈಟ್ ಗಳನ್ನು ವಾಪಸ್ ನೀಡುವ ಬಗ್ಗೆ ಖುದ್ದಾಗಿ ನಮ್ಮನ್ನು ಭೇಟಿ ಮಾಡಿ ಯತೀಂದ್ರ ಪತ್ರ ನೀಡಿದ್ದಾರೆ ಎಂದು ಮುಡಾ ಆಯುಕ್ತ ರಘುನಂದನ್ ಹೇಳಿಕೆ ನೀಡಿದ್ದಾರೆ.